ದೂಳು ಹಿಡಿದಿದ್ದ ಆಲೆಮನೆಗಳಿಗೆ ಕಳೆ ತಂದ ಲಾಕ್ ಡೌನ್
ಚಾಮರಾಜನಗರ, ಮೇ 04: ಒಂದು ಕಾಲದಲ್ಲಿ ರೈತರ ಬದುಕಿನ ಆಶಾಕಿರಣವಾಗಿದ್ದ ಆಲೆಮನೆಗಳು ಇತ್ತೀಚೆಗೆ ಮೂಲೆಗುಂಪಾಗಿದ್ದವು. ಆದರೆ ಇದೀಗ ಕೊರೊನಾ ವೈರಸ್ ನಿಯಂತ್ರಣ ಸಲುವಾಗಿ ಲಾಕ್ ಡೌನ್ ಮಾಡಿದ್ದು, ಬದುಕು ಕಟ್ಟಿಕೊಳ್ಳಲೇಬೇಕಾಗಿರುವ ಅನಿವಾರ್ಯತೆಯಿಂದ ಬಹಳಷ್ಟು ರೈತರು ಮತ್ತೆ ಆಲೆಮನೆಯನ್ನು ಆರಂಭಿಸಿರುವುದು ಕಂಡುಬಂದಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಹುತೇಕ ರೈತರು ಕಬ್ಬು ಬೆಳೆಯುತ್ತಿದ್ದು, ಈಗಿನ ಪರಿಸ್ಥಿತಿಯಲ್ಲಿ ಕಬ್ಬನ್ನು ಕಾರ್ಖಾನೆ ಸಾಗಿಸುವುದು ಕಷ್ಟವಾಗಿರುವುದರಿಂದ ರೈತರು ತಮ್ಮ ಮನೆಯಲ್ಲಿಯೇ ಆಲೆಮನೆಯನ್ನು ಆರಂಭಿಸಿದ್ದು ಕಬ್ಬು ಅರೆದು ಬೆಲ್ಲ ಮಾಡುವ ಕಾಯಕದಲ್ಲಿ ನಿರತರಾಗಿರುವುದು ಹೊಸ ಬೆಳವಣಿಗೆಯಾಗಿದೆ.
ಬೆಲ್ಲದ ಕಾರ್ಖಾನೆಗಳಾಗಿದ್ದ ಆಲೆಮನೆಗಳು ನೇಪಥ್ಯಕ್ಕೆ ಸರಿಯುತ್ತಿರುವುದೇಕೆ?
ಚಾಮರಾಜನಗರದಲ್ಲಿ ಹಿಂದೆ ಹೆಚ್ಚಿನ ಪ್ರದೇಶದಲ್ಲಿ ಕಬ್ಬನ್ನು ಬೆಳೆಯುತ್ತಿದ್ದರಲ್ಲದೆ, ಆಲೆಮನೆ ಮೂಲಕ ಕಬ್ಬು ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ ಬೆಲ್ಲಕ್ಕೆ ಉತ್ತಮ ದರ ಸಿಗದ ಕಾರಣ ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ಆಲೆಮನೆಯತ್ತ ನಿರಾಸಕ್ತಿ ವಹಿಸಿದ್ದ ಹೆಚ್ಚಿನ ಕಬ್ಬು ಬೆಳೆಗಾರರು ಕಾರ್ಖಾನೆಗೆ ಕಬ್ಬು ಸಾಗಿಸಿ ಆಲೆಮನೆ ಕೆಲಸಕ್ಕೆ ವಿಶ್ರಾಂತಿ ನೀಡಿದ್ದರು.
ಲಾಕ್ ಡೌನ್ ಆಗಿರುವ ಕಾರಣದಿಂದ ಕಬ್ಬು ಬೆಳೆಗಾರರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಕಟಾವು ಮಾಡಲು ತೊಂದರೆ ಅನುಭವಿಸುತ್ತಿದ್ದರು. ಜೊತೆಗೆ ಬಡ ಕೂಲಿಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಇದೀಗ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿನ ಗುಡಿ ಕೈಗಾರಿಕೆಗಳನ್ನು ನಡೆಸಲು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಆಲೆಮನೆಗಳು ಎಂದಿನಂತೆ ತಮ್ಮ ಕೆಲಸ ಕಾರ್ಯವನ್ನು ಮತ್ತೆ ಆರಂಭಿಸಿರುವುದರಿಂದ ಆಲೆಮನೆಗಳಲ್ಲಿ ಚಟುವಟಿಕೆ ಕಂಡುಬಂದಿದೆ.
ಆಲೆಮನೆಗೆ ಬಂದಂತಹ ಕಬ್ಬನ್ನು ಗಾಣಕ್ಕೆ ನೀಡಿ, ಅರೆದು ಕಬ್ಬಿನ ಹಾಲು ಹಿಂಡಿ, ನಂತರ ಅದನ್ನು ಕೊಪ್ಪರಿಗೆಯಲ್ಲಿ ಹಾಕಿ ಬೆಂಕಿಯಲ್ಲಿ ಕಾಯಿಸಿ, ಬೆಲ್ಲವಾಗುವ ರೀತಿ ಹದಗೊಳಿಸುತ್ತಾರೆ. ಬೆಲ್ಲದ ಪಾಕ ಹದಗೊಂಡ ಮೇಲೆ ಕಾರ್ಮಿಕರು ಅದನ್ನು ಬೆಲ್ಲದ ಅಚ್ಚಿನಲ್ಲಿ ಹಾಕಿ ಆರಿಸಿ, ಮತ್ತೆ ಬೆಲ್ಲದ ಅಚ್ಚನ್ನು ಮಡಚಿ ಕುಟ್ಟಿ ಬೆಲ್ಲ ಕೆಡವುತ್ತಾರೆ. ಬೆಲ್ಲ ಆರಿದ ಮೇಲೆ ಅದನ್ನು ಐವತ್ತು ಅಚ್ಚಿಗನುಗುಣವಾಗಿ ಪಿಂಡಿ ತಯಾರಿಸಿ, ಮಾರುಕಟ್ಟೆಗೆ ರವಾನಿಸಲಾಗುತ್ತದೆ. ಈ ಬಾರಿ ಬೆಲ್ಲಕ್ಕೆ ಉತ್ತಮವಾದ ದರ ಲಭಿಸಿದ್ದೇ ಆದರೆ ರೈತರಿಗೂ ಅನುಕೂಲವಾಗಲಿದೆ. ಜತೆಗೆ ಕೂಲಿಕಾರ್ಮಿಕರಿಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.