ಪ್ರಿಯಕರನೊಂದಿಗೆ ವಿವಾಹಕ್ಕೆ ಅಡ್ಡಿ, ಯುವತಿ ಆತ್ಮಹತ್ಯೆ
ಚಾಮರಾಜನಗರ, ಆಗಸ್ಟ್ 28 : ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಪೋಷಕರು ನಿರಾಕರಿಸಿದ ಹಿನ್ನಲೆಯಲ್ಲಿ ಮನನೊಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಕೋಟೆಯಲ್ಲಿ ಸೋಮವಾರ ನಡೆದಿದೆ. ಸತ್ತೇಗಾಲ ಗ್ರಾಮದ ವೈರಮುಡಿ ಮತ್ತು ಉಮಾ ದಂಪತಿಗಳ ಪುತ್ರಿ ಸೌಮ್ಯ (27) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಯುವತಿ.
ಈಕೆ ಬೆಂಗಳೂರಿನಲ್ಲಿ ಕಾರ್ ಶೋರೂಮ್ ನಲ್ಲಿ ಕೆಲಸ ಮಾಡಿಕೊಂಡಿದ್ದಳಲ್ಲದೆ, ತನ್ನದೇ ಗ್ರಾಮದ ಯುವಕ ಕುಮಾರ್ ಎಂಬಾತನನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಳು.
ಈ ವಿಚಾರ ಸೌಮ್ಯಳ ಮನೆಯವರಿಗೆ ತಿಳಿದಿದ್ದು, ಇದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆಕೆ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ನಡುವೆ ಗೌರಿಹಬ್ಬಕ್ಕೆ ಬೆಂಗಳೂರಿನಿಂದ ಸೌಮ್ಯ ಮನೆಗೆ ಬಂದಿದ್ದಳು.
ಈ ವೇಳೆ ಸೌಮ್ಯಳ ಮನೆಗೆ ಕುಮಾರ್ ಪೋಷಕರು ಹೆಣ್ಣು ಕೇಳಲೆಂದು ಬಂದಿದ್ದು, ಆಗ ಸೌಮ್ಯಳ ಹೆತ್ತವರು ಅವರನ್ನು ಅವಮಾನ ಮಾಡಿದ್ದರು. ಇದರಿಂದ ಮನನೊಂದ ಯುವತಿ ಸೌಮ್ಯ ನೇಣಿಗೆ ಶರಣಾಗಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ ಐ ವನರಾಜು ಅವರು ತನಿಖೆ ಕೈಗೊಂಡಿದ್ದಾರೆ.