ಚಾಮರಾಜನಗರ: ಜಾಬ್ ಕಾರ್ಡಿಗಾಗಿ ಗುಂಡೇಟು ನೀಡಿದ ಖದೀಮ!
ಚಾಮರಾಜನಗರ, ಜುಲೈ 26: ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್ ಗಾಗಿ ನಡೆದ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬ ಮತ್ತೊಬ್ಬನ ಮೇಲೆ ನಾಡ ಬಂದೂಕಿನಿಂದ ಗುಂಡುಹಾರಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಕೊಳ್ಳೇಗಾಲ ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕುರಟ್ಟಿ ಹೊಸೂರಿನಲ್ಲಿ ಗ್ರಾಮದ ನಿವಾಸಿ ಸಿದ್ಧರಾಜು ಎಂಬಾತನೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪಿ. ಈತ ಜುಲೈ 25 ಬೆಳಗ್ಗೆ ಕೆಲಸದ ಜಾಬ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣ ಎಂಬುವರೊಂದಿಗೆ ಜಗಳ ತೆಗೆದಿದ್ದಾನೆ, ಇದು ವಿಕೋಪಕ್ಕೆ ತೆರಳಿದ್ದು, ಆಕ್ರೋಶಗೊಂಡ ಸಿದ್ದರಾಜು ತನ್ನ ಬಳಿಯಿದ್ದ ನಾಡ ಬಂದೂಕಿನಿಂದ ಕೃಷ್ಣ ಅವರ ಮೇಲೆ ಗುಂಡು ಹಾರಿಸಿದ್ದು, ಕೈ, ಕಾಲು, ಎದೆಭಾಗಕ್ಕೆ ತಾಗಿದೆ. ಆತ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೆ, ಆರೋಪಿ ಸಿದ್ದರಾಜು ಅಲ್ಲಿಂದ ಬಂದೂಕು ಸಹಿತ ಪರಾರಿಯಾಗಿದ್ದಾನೆ.
ಗುಂಡು ತಾಗಿದ ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಕೃಷ್ಣ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಿದ್ದರಾಜುಗಾಗಿ ಪೊಲೀಸರು ಬಲೆ ಬೀಸಿದ್ದಾರೆ.