ಚಾಮರಾಜನಗರ: ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿನಿ ನೇಣಿಗೆ ಶರಣು
ಚಾಮರಾಜನಗರ, ಮೇ 12 : ಕೆಲ ಮಕ್ಕಳ್ಳಿಗೆ ಈ ಪರೀಕ್ಷೆಗಳೇ ಬದುಕಿನ ನಿರ್ಣಾಯಕ ಪರೀಕ್ಷೆಗಳಲ್ಲ ಎಂಬುವುದು ಗೊತ್ತಿಲ್ಲ. ಪರೀಕ್ಷೆಗಳಲ್ಲಿ ಫೇಲಾಗಿದ್ದೆ ತಡ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಅದಕ್ಕೆ ನಿದರ್ಶನ ಇಲ್ಲಿದೆ.
ಇಂದು (ಮೇ 12) ಪ್ರಕಟವಾದ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ನೇಣಿಗೆ ಶರಣಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರದಲ್ಲಿ ಶುಕ್ರವಾರ ನಡೆದಿದೆ. [ವಿಶೇಷ ಲೇಖನ: ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಗೆಲ್ಲಬಹುದು!]
ಅಗತಗೌಡನಹಳ್ಳಿ ಗ್ರಾಮದ ಕಾಂತರಾಜಪ್ಪರವರ ಪುತ್ರಿ ಮಾನಸ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆನ್ ಲೈನ್ ನಲ್ಲಿ ತನ್ನ ಫಲಿತಾಂಶ ನೋಡಿದ ಮಾನಸ ತಾನು ನಾಲ್ಕು ವಿಷಯಗಳಲ್ಲಿ ಅನುತೀರ್ಣಗೊಂಡಿದ್ದನ್ನು ತಿಳಿದು ತನ್ನ ಅಜ್ಜಿ ಮನೆ ಕೊಡಗಾಪುರದಲ್ಲಿ ನೇಣಿಗೆ ಶರಣಾಗಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಮಾನಸ ಪೋಷಕರು ಕೊಡಗಾಪುರಕ್ಕೆ ಆಗಮಿಸಿ ಮಗಳ ಶವದ ಮುಂದೆ ಎದೆಬಡಿದುಕೊಂಡು ಗೋಳಾಡಿದ್ದಾರೆ. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿದೆ.
ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಕೊಡಗಾಪುರಕ್ಕೆ ಭೇಟಿ ನೀಡಿ ಮಾನಸಳ ಅಂತಿಮ ದರ್ಶನ ಪಡೆದು ಪೋಷಕರಿಗೆ ಸಾಂತ್ವಾನ ಹೇಳಿದರು.