ದಲಿತ ಕೇರಿಗೆ ಗ್ರಾಮ ದೇವತೆ ಮೆರವಣಿಗೆ ಆಹ್ವಾನಿಸಿದ್ದಕ್ಕೆ 60 ಸಾವಿರ ದಂಡ
ಚಾಮರಾಜನಗರ, ಅಕ್ಟೋಬರ್ 19: ವಿಜಯ ದಶಮಿಯ ಅಂಗವಾಗಿ ಗ್ರಾಮ ದೇವತೆಯ ಉತ್ಸವಮೂರ್ತಿ ಮೆರವಣಿಗೆ ತಮ್ಮ ಕೇರಿಯಲ್ಲೂ ಹಾದು ಹೋಗಲಿ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದ ದಲಿತ ಸಮುದಾಯದ ಇಬ್ಬರು ಕೂಲಿಕಾರ್ಮಿಕರಿಗೆ ಗ್ರಾಮಸ್ಥರು ಬರೋಬ್ಬರಿ 60,202 ರೂ ದಂಡ ವಿಧಿಸಿರುವ ಅಮಾನವೀಯ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ ನಡೆದ ಈ ಘಟನೆಯು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆಯು ಇಂದಿಗೂ ಜೀವಂತವಾಗಿರುವುದಕ್ಕೆ ಜ್ವಲಂತ ಸಾಕ್ಷಿ ಆಗಿದೆ. ಮುಂದೆ ಓದಿ...
ಒಡವೆಗಳನ್ನು ಅಡವಿಟ್ಟು ದಂಡ ಪಾವತಿ
ಕಳೆದ ಗುರುವಾರ ರಾತ್ರಿ ಗ್ರಾಮದ ನಿಂಗರಾಜು ಅವರಿಗೆ 50,101 ರೂ ಹಾಗೂ ಶಂಕರಮೂರ್ತಿ ಎಂಬುವರಿಗೆ 10,101 ರೂ. ದಂಡ ವಿಧಿಸಲಾಗಿದೆ. ದಂಡದ ಹಣವನ್ನು ಅಂದೇ ಪಾವತಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ನಿಂಗರಾಜು, ತಮ್ಮ ಪತ್ನಿಯ ಒಡವೆಗಳನ್ನು ಅಡವಿಟ್ಟು ದಂಡ ಪಾವತಿಸಿದ್ದಾರೆ. ಈ ಘಟನೆ ಕುರಿತು ತಹಶೀಲ್ದಾರ್ ಹಾಗೂ ಯಳಂದೂರು ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
ಕೊರೊನಾದಿಂದ ಊರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಜಾತಿ ತಾರತಮ್ಯದ ಭಾರ
ಮನವಿ ತಿಳಿದು ದಂಡ ಹಾಕಿದ ಗ್ರಾಮಸ್ಥರು
ಗ್ರಾಮದಲ್ಲಿರುವ ಮುಜರಾಯಿ ಇಲಾಖೆ ಅಧೀನದ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯನ್ನು ಪ್ರತಿ ವರ್ಷ ವಿಜಯದಶಮಿ ದಿನದಂದು ಸವರ್ಣೀಯರ ಬೀದಿಯಲ್ಲಿ ಮಾತ್ರ ನಡೆಸಲಾಗುತಿತ್ತು. ದೇವಿಯ ಮೆರವಣಿಗೆ ದಲಿತರ ಬೀದಿಯಲ್ಲೂ ಹಾದು ಹೋಗಬೇಕು ಎಂದು ವಕೀಲ ರಾಜಣ್ಣ ಅವರ ನೇತೃತ್ವದಲ್ಲಿ ನಿಂಗರಾಜು ಹಾಗೂ ಇತರರು ಈಚೆಗೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮದೇವತೆ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದ್ದರು. ಈ ವಿಷಯ ಗ್ರಾಮದವರಿಗೆ ತಿಳಿದಿದ್ದು, ಅದೇ ರಾತ್ರಿ ಗ್ರಾಮಸ್ಥರು ದಂಡ ವಿಧಿಸಿದರು ಎಂದು ನಿಂಗರಾಜು ತಿಳಿಸಿದ್ದಾರೆ.
ನ್ಯಾಯಕ್ಕಾಗಿ ನಿಂಗರಾಜು ಆಗ್ರಹ
'ದೇವಿ ಮೆರವಣಿಗೆ ಎಂದಾದರೂ ನಿಮ್ಮ ಕೇರಿಗೆ ಬಂದಿರೋದು ಉಂಟಾ? ಹೊಲಗೇರಿಗೆ ದೇವಿ ಬಂದರೆ ನೀವೆಲ್ಲರೂ ಜೀವಂತವಾಗಿ ಉಳ್ಕೊತೀರಾ ಎಂದ ಊರಗೌಡರು, ಸರಿಯಾದ ಪಾಠ ಕಲಿಸುತ್ತೇವೆ ಎಂದು ನನಗೆ ದಂಡ ಹಾಕಿದರು' ಎಂದು ನಿಂಗರಾಜು ದೂರಿದರು. 'ವಕೀಲ ರಾಜಣ್ಣ ಅವರು ತಹಶೀಲ್ದಾರ್ ಗೆ ದೂರು ನೀಡಿದ್ದಾರೆ. ಆದರೆ ಗ್ರಾಮದ ಶಂಕರಮೂರ್ತಿ ಹಾಗೂ ನನಗೆ ಮಾತ್ರ ಗ್ರಾಮಸ್ಥರು ದಂಡ ವಿಧಿಸಿದ್ದು ಯಾವ ನ್ಯಾಯ? ದಲಿತ ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿ ಹಾಗೂ ಸಂಸದರು, ಶಾಸಕರು ಪ್ರತಿನಿಧಿಸುವ ಊರಿನಲ್ಲೇ ಈ ಘಟನೆ ನಡೆದಿದೆ. ಅವರೇ ನನಗೆ ನ್ಯಾಯ ಕೊಡಿಸಬೇಕು' ಎಂದು ಮನವಿ ಮಾಡಿದರು.
ತಮಿಳುನಾಡಿನಲ್ಲಿ ಏನಿದು ಕಲ್ಲಕುರುಚಿ ಶಾಸಕರ ''ಕಲ್ಯಾಣ'' ಸುದ್ದಿ!
Recommended Video
ಸಮಸ್ಯೆ ಇತ್ಯರ್ಥಕ್ಕೆ ಶಾಸಕ ಮಹೇಶ್ ಸೂಚನೆ
ಗ್ರಾಮದಲ್ಲಿ ನನಗೆ ಒಂದು ಗುಂಟೆ ಜಮೀನು ಕೂಡ ಇಲ್ಲ. ಗಂಡ-ಹೆಂಡತಿ ಇಬ್ಬರೂ ಕೂಲಿ ಮಾಡಿ ಜೀವನ ಸಾಗಿಸುತ್ತೇವೆ. ಭಾರಿ ಮೊತ್ತದ ದಂಡ ವಿಧಿಸಿದ ಕಾರಣ ನನ್ನ ಹೆಂಡತಿಯ ಓಲೆ, ತಾಳಿಯನ್ನು ಗಿರಿವಿ ಇಟ್ಟು ದಂಡ ಕಟ್ಟಬೇಕಾಯಿತು ಎಂದು ನಿಂಗರಾಜು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎನ್ ಮಹೇಶ್ ಅವರು, "ದಂಡ ವಿಧಿಸಿರುವ ಘಟನೆಯು ತಮ್ಮ ಗಮನಕ್ಕೆ ಬಂದಿದ್ದು, ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.
ದಂಡ ವಿಧಿಸಿರುವ ಕುರಿತು ದೂರು ಬಂದಿದೆ. ಈ ಕುರಿತು ಇಂದು ಗ್ರಾಮಸ್ಥರ ಸಭೆ ಕರೆದಿದ್ದು, ಸಭೆಯ ತೀರ್ಮಾನದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ.ಕೆ. ಸುದರ್ಶನ ತಿಳಿಸಿದರು.