3 ಲಕ್ಷ ರೂ. ಮೌಲ್ಯದ 26.8 ಕೆ.ಜಿ ಗಾಂಜಾ ವಶ: ಆರೋಪಿ ಬಂಧನ
ಚಾಮರಾಜನಗರ, ಸೆಪ್ಟೆಂಬರ್ 14: ಚಾಮರಾಜನಗರ ಜಿಲ್ಲೆಯಲ್ಲಿ ಗಾಂಜಾ ವಿರುದ್ಧದ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸರು, ಭಾನುವಾರ ಕೃಷಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯೊಬ್ಬನನ್ನು ಬಂಧಿಸಿ, ಅಂದಾಜು 3 ಲಕ್ಷ ರೂ. ಮೌಲ್ಯದ 26.8 ಕೆ.ಜಿ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು, ಸಂತೇಮರಹಳ್ಳಿ ಹೋಬಳಿಯ ಶನಿವಾರ ಮುಂಟಿ ಗ್ರಾಮದ ಜಡೇಗೌಡ ಅಲಿಯಾಸ್ ಮಾರಕುನ್ನ(40) ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ಎಂಬುವವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮಂಡ್ಯ ತ್ರಿವಳಿ ಕೊಲೆ ಆರೋಪಿಗಳ ಮೇಲೆ ಶೂಟೌಟ್: ಐವರ ಬಂಧನ
ಶನಿವಾರ ಮುಂಟಿ ಗ್ರಾಮದ ಬಳಿಯ ಸರ್ವೇ ನಂಬರ್ 312ರಲ್ಲಿ ಆರೋಪಿಗಳು ೧೩೪ ಗಾಂಜಾ ಗಿಡಗಳನ್ನು ಬೆಳೆಸಿದ್ದು, ಪೊಲೀಸರು ಭಾನುವಾರ ದಾಳಿ ನಡೆಸಿ ಅಂದಾಜು 3 ಲಕ್ಷ ರೂ. ಮೌಲ್ಯದ 26.8 ಕೆ.ಜಿ ಮೌಲ್ಯದ ಗಾಂಜಾ ಸೊಪ್ಪು ವಶ ಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
"ಕೃಷಿ ಚಟುವಟಿಕೆ ನಡೆಸದೇ ಪಾಳು ಬಿಟ್ಟಿದ್ದ ಜಮೀನಿನ ಕಾಡು ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಯಲಾಗಿದ್ದು, ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ತಿಳಿಸಿದರು. ಜಮೀನಿನ ಮಾಲೀಕ ತಮಿಳುನಾಡಿನವರೆಂದು ಹೇಳಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ, ಶೀಘ್ರದಲ್ಲಿ ಗೊತ್ತಾಗಲಿದೆ' ಎಂದು ಹೇಳಿದರು.
'ಗೃಹ ಸಚಿವರ ಆದೇಶದ ಅನುಸಾರ ಜಿಲ್ಲೆಯಲ್ಲಿ ಗಾಂಜಾ ವಿರುದ್ಧ ತೀವ್ರ ಕಾರ್ಯಾಚರಣೆ ಆರಂಭಿಸಲಾಗಿದೆ. ಹನೂರು ತಾಲ್ಲೂಕಿನ ರಾಮಾಪುರ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಗೆ ಪೂರೈಕೆಯಾಗುತ್ತಿದೆ ಎಂಬ ಮಾಹಿತಿಯೂ ಇದೆ. ಇಲ್ಲಿಂದ ಸರಬರಾಜು ಆಗುತ್ತಿರುವುದನ್ನು ತಡೆಯುವುದು ನಮ್ಮ ಗುರಿ' ಎಂದರು.
Recommended Video
'ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಕಾರ ಪಡೆದು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈಗಾಗಲೇ ಬಿಆರ್ ಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಾಗಿದೆ' ಎಂದು ದಿವ್ಯ ಸಾರಾ ಥಾಮಸ್ ಹೇಳಿದರು. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ.