ಚಾಮರಾಜನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ತ್ರಿಸೂತ್ರ ಅಳವಡಿಕೆ!
ಚಾಮರಾಜನಗರ, ಜೂನ್ 12: ಕೊರೊನಾ ಮೊದಲ ಅಲೆಯಲ್ಲಿ ಗೆದ್ದಿದ್ದ ಚಾಮರಾಜನಗರ ಎರಡನೇ ಅಲೆಗೆ ಸಿಲುಕಿ ತತ್ತರಿಸಿತ್ತು. ಆದರೆ, ಮುಂದೆ ಬರಲಿರುವ ಮೂರನೇ ಅಲೆಯಲ್ಲಿ ಈಗ ಆಗಿರುವ ತಪ್ಪುಗಳು ಆಗಬಾರದು ಎಂಬ ಕಾರಣದಿಂದ ಜಿಲ್ಲಾಡಳಿತ ತ್ರಿಸೂತ್ರ ಅಳವಡಿಸಿಕೊಂಡು ಸಿದ್ಧತೆ ಆರಂಭಿಸಿದೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರ ಇನ್ನೂ ಕೂಡ ಹಿಂದುಳಿದ ಜಿಲ್ಲೆಯಾಗಿ ಉಳಿದಿದೆ. ಅರಣ್ಯವಾಸಿಗಳ ಸಂಖ್ಯೆ ಹೆಚ್ಚಿದೆ. ಜತೆಗೆ ಎರಡು ರಾಜ್ಯಗಳೊಂದಿಗೆ ಗಡಿಪ್ರದೇಶವನ್ನು ಹಂಚಿಕೊಂಡಿದೆ. ಹೀಗಾಗಿ ಒಂದಷ್ಟು ಸವಾಲುಗಳು ಜಿಲ್ಲಾಡಳಿತಕ್ಕಿದೆ. ಒಮ್ಮೆ ನಡೆದ ದುರಂತದಿಂದಾಗಿ ಕಪ್ಪು ಚುಕ್ಕಿ ಜಿಲ್ಲೆ ಮೇಲೆ ಬಂದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂತಹ ದುರಂತಗಳಿಗೆ ಅವಕಾಶ ಕೊಡದಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ.
ಚಾಮರಾಜನಗರ; ಕೊರೊನಾದಿಂದ 270 ಗ್ರಾಮಗಳು ಮುಕ್ತ
ಕೋವಿಡ್ ತಡೆಗೆ ತ್ರಿಸೂತ್ರಗಳೇನು ಗೊತ್ತಾ?
ಈಗಾಗಲೇ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಸಿರುವ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಚಾಮರಾಜನಗರ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆಯನ್ನು ತಗ್ಗಿಸುವ ಮತ್ತು ಮುಂದೆ ಬರಲಿರುವ ಮೂರನೇ ಅಲೆಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದ್ದರೂ ಅದನ್ನು ಇನ್ನಷ್ಟು ಗಣನೀಯವಾಗಿ ತಗ್ಗಿಸುವುದು (ಅಂದರೆ ಶೇ.5ಕ್ಕಿಂತ ಕಡಿಮೆ ಮಾಡುವುದು), ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದು, ತ್ವರಿತಗತಿಯಲ್ಲಿ ಲಸಿಕೆ ನೀಡುವ ಕಾರ್ಯ ನಡೆಸುವುದು ಹೀಗೆ ತ್ರಿಸೂತ್ರಗಳನ್ನು ಅಳವಡಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟುನಿಟ್ಟಿನ ಕ್ರಮ ಅನುಷ್ಠಾನ ಅನಿವಾರ್ಯ
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು, ""ಕೋವಿಡ್ ದೃಢ ಪ್ರಮಾಣ ಜಿಲ್ಲೆಯಲ್ಲಿ ಇಂದಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದ ಬಳಿಕ ಶೇ.8.6ರಷ್ಟು ಇರುವುದಾಗಿ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಲಾಕ್ಡೌನ್ ಕಠಿಣ ನಿಯಮಗಳು ಯಥಾಸ್ಥಿತಿಯಲ್ಲಿ ಇದೇ ಜೂನ್ 21ರ ವರೆಗೆ ಮುಂದುವರೆಯುತ್ತಿದೆ. ಲಾಕ್ಡೌನ್ ನಿರ್ಬಂಧ ಸಡಿಲಿಕೆಯಾಗಲು ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆಗೊಳಿಸಲೇಬೇಕಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿದೆ.''
ಮೊಬೈಲ್ ವಾಹನಗಳ ಮೂಲಕವೂ ಮಾದರಿ ಸಂಗ್ರಹಣೆ
""ಕೋವಿಡ್ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಈಗಾಗಲೇ ನಿಗದಿಯಾಗಿರುವ ಗಂಟಲು ಮಾದರಿ ದ್ರವ ಸಂಗ್ರಹಣ ಕೇಂದ್ರಗಳಲ್ಲಿಯೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಬೇಕು. ಅಲ್ಲದೇ ಮೊಬೈಲ್ ವಾಹನಗಳ ಮೂಲಕವೂ ಮಾದರಿ ಸಂಗ್ರಹಣೆ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಿ ಪರೀಕ್ಷೆಯನ್ನು ಹೆಚ್ಚು ನಡೆಸಬೇಕು. ಇದರಿಂದ ಸೋಂಕು ಹರಡುವಿಕೆ ತಡೆಯಲು ಸಾಧ್ಯವಾಗಲಿದೆ'' ಎಂದಿದ್ದಾರೆ.
ಸ್ಥಳೀಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ
ಇನ್ನು ಲಸಿಕೆ ನೀಡಲು ಆಯಾ ಸ್ಥಳೀಯ ಯುವ ಜನರು, ಮುಖಂಡರು, ಸಮುದಾಯಗಳ ಪ್ರತಿನಿಧಿಗಳ ಸಹಕಾರ ಪಡೆದುಕೊಂದು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರಲ್ಲದೆ, ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದೆಂಬ ತಜ್ಞರ ಅಭಿಪ್ರಾಯಗಳಿರುವುದರಿಂದ ಕೋವಿಡ್ ಚಿಕಿತ್ಸೆ ಆರೈಕೆಯಲ್ಲಿರುವವರ ನಿಗಾವಣೆ, ಸಕ್ರಿಯ ಪ್ರಕರಣಗಳು, ಲಾಕ್ಡೌನ್ ನಿಯಮಗಳ ಅನುಷ್ಠಾನಕ್ಕೆ ಒತ್ತು ನೀಡುವಂತೆ ಹೇಳಿದ್ದಾರೆ.
Recommended Video