ಮಹಿಳಾ ಆಯೋಗದ ಅಧ್ಯಕ್ಷೆ ಎದುರೇ ಗಲಾಟೆ, ಬೊಮ್ಮಲಾಪುರ ಉದ್ವಿಗ್ನ
ಚಾಮರಾಜನಗರ, ಜೂನ್ 15: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಿಜೆಪಿಗೆ ಮತ ನೀಡಿದ ಕಾರಣ 25 ಕುಟುಂಬಗಳಿಗೆ ಹಾಕಿದ್ದ ಸಾಮಾಜಿಕ ಬಹಿಷ್ಕಾರ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಘಟನೆಯ ಪರಿಶೀಲನೆಗೆ ಬಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಎದುರೇ ಗಲಾಟೆಗಳು ನಡೆದಿದ್ದು, ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಜೂನ್ 10 ರಂದು ಹಲ್ಲೆಗೊಳಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಹಿಳೆಯರನ್ನು ಆಯೋಗದ ಅಧ್ಯಕ್ಷೆ ಇಂದು ಭೇಟಿಯಾದರು. ಈ ವೇಳೆ ಆ ಮಹಿಳೆಯರು ತಮ್ಮ ಅಹವಾಲು ಸಲ್ಲಿಸಿದರು. "ಮತ ಎಣಿಕೆ ನಂತರ ನಾವು ಎರಡು ತಿಂಗಳಿಂದ ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡಿದ್ದೇವೆ. ಎಲ್ಲಿಯೇ ಇದ್ದರೂ ನಮ್ಮ ಮನೆಯ ಮಕ್ಕಳನ್ನು ಹುಡುಕಿಕೊಂಡು ಬಂದು ಹೊಡಿತಾರೆ. ಆಸ್ಪತ್ರೆಯಿಂದ ಮನೆಗೆ ತೆರಳುವಂತೆ ವೈದ್ಯರು ಹೇಳಿದರೂ ಜೀವಭಯದಿಂದ ಹೋಗಲಾಗುತ್ತಿಲ್ಲ. ಎಲ್ಲರೂ ಬೇರೆ ಬೇರೆ ಕಡೆಗಳಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಿ," ಎಂದು ಕಾಲಿಗೆ ಬಿದ್ದು ಬೇಡಿಕೊಂಡರು.
ನಾನಿದ್ದೇನೆ ಹೆದರಬೇಡಿ
ಈ ವೇಳೆ ಸಾಂತ್ವಾನ ಹೇಳಿದ ಅಧ್ಯಕ್ಷೆ, "ನಾನಿದ್ದೇನೆ ಹೆದರಬೇಡಿ ಗ್ರಾಮಕ್ಕೆ ಹೋಗೋಣ ಬನ್ನಿ," ಎಂದು ಧೈರ್ಯ ತುಂಬಿ ನಂತರ ತಾವೇ ಖುದ್ದಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸ್ ಜೀಪಿನಲ್ಲಿ ಗ್ರಾಮಕ್ಕೆ ಕರೆದೊಯ್ದರು.
ಗುಂಪು ಚಕಮಕಿ
ಗ್ರಾಮದ ಮನೆಮನೆಗಳಿಗೆ ತೆರಳಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದರು. ಘಟನೆ ಬಗ್ಗೆ ವಿವರ ಪಡೆಯುತ್ತಿದ್ದ ವೇಳೆಯಲ್ಲಿ ಅಂಗಡಿ ಮಾಲೀಕರೊಬ್ಬರು ಗ್ರಾಮದಲ್ಲಿ ಬಹಿಷ್ಕಾರ ಹಾಕಿರುವುದರಿಂದ ಪದಾರ್ಥಗಳು ಹಾಳಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಕುಪಿತಗೊಂಡ ಮತ್ತೊಂದು ಗುಂಪು ನಾವು ಯಾರಿಗೂ ಬಹಿಷ್ಕಾರ ಹಾಕಿಲ್ಲ. ರಾಜಕೀಯ ಉದ್ದೇಶದಿಂದ ಹೀಗೆ ಆರೋಪಿಸುತ್ತಿದ್ದಾರೆ ಎಂದು ಕೂಗಾಟ ನಡೆಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದರು.
ಹೆಚ್ಚಿನ ಬಂದೋಬಸ್ತಿಗೆ ಸೂಚನೆ
ಇದರಿಂದ ಎರಡು ಗುಂಪುಗಳ ಮಹಿಳೆಯರು ಹಾಗೂ ಪುರುಷರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಮಧ್ಯಪ್ರವೇಶಿಸಿದ ಪೊಲೀಸರು ಜನರನ್ನು ನಿಯಂತ್ರಿಸಿದರು.
ಬಳಿಕ ಅಧ್ಯಕ್ಷರು ಜಿಲ್ಲಾಧಿಕಾರಿ ಬಿ.ರಾಮುರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ಹೆಚ್ಚಿನ ಪೋಲೀಸರನ್ನು ನೇಮಿಸಿ ಸೂಕ್ತ ಬಂದೋಬಸ್ತಿಗೆ ಸೂಚಿಸಿದರು.
ಮಹಿಳೆ ಮೇಲೆ ಹಲ್ಲೆ
ಮಹಿಳಾ ಆಯೋಗದ ಅಧ್ಯಕ್ಷೆ ಗ್ರಾಮದಿಂದ ತೆರಳುತ್ತಿದ್ದಂತೆಯೇ ಗೃಹಬಳಕೆಯ ಸಾಮಾನು ಖರೀದಿಸಲು ಅಂಗಡಿಗೆ ತೆರಳಿದ್ದ ಮಹಿಳೆ ದುಂಡಮ್ಮ(40) ಎಂಬುವವರಿಗೆ ಹಿಂದಿನಿಂದ ಹೊಡೆದು ಗಾಯಗೊಳಿಸಿದ್ದಾರೆ.
ಹಿಂಬಾಲಿಸಿಕೊಂಡು ಬಂದ ಬಹಿಷ್ಕಾರಕ್ಕೊಳಗಾದ ಗುಂಪಿನ ಚನ್ನಾಜಮ್ಮ, ಶಶಿಕಲಾ, ರಾಜೇಶ, ಸೂರ್ಯ ಹಾಗೂ ಗೋವಿಂದ ಎಂಬುವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಮಹಿಳೆ ದುಂಡಮ್ಮ ಆರೋಪಿಸಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಬೀಡು ಬಿಟ್ಟ ಅಧಿಕಾರಿಗಳು
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದು ಯಾವಾಗ ಬೇಕಾದರೂ ಸ್ಫೋಟಿಸುವ ಭೀತಿಯಿದ್ದು ಒಂದು ಕೆಎಸ್ಆರ್ಪಿ ತುಕಡಿ ಹಾಗೂ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಎಸ್ಪಿ ಧರಣೀಂದ್ರ ಕುಮಾರ್ ಮೀನಾ, ಎ ಎಸ್ ಪಿ ಗೀತಾ ಪ್ರಸನ್ನ, ಡಿಎಸ್ಪಿ ಎಸ್.ಇ. ಗಂಗಾಧರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಸುರೇಶ್, ತಹಸೀಲ್ದಾರ್ ಕೆ.ಸಿದ್ದು, ತಾಪಂ ಇಓ ಪುಷ್ಪಾ ಎಂ.ಕಮ್ಮಾರ್, ಸಿಡಿಪಿಓ ರಾಮಕೃಷ್ಣಯ್ಯ ಬೀಡು ಬಿಟ್ಟಿದ್ದಾರೆ.