ಭೂ ಸಮಾಧಿಯಾದ ಚಾಮರಾಜನಗರದ ಇಬ್ಬರು ಕಾರ್ಮಿಕರು
ಚಾಮರಾಜನಗರ, ಆಗಸ್ಟ್ 25: ಜಮೀನಿನಲ್ಲಿ ಮರಳು ತೆಗೆದು ಸಂಗ್ರಹಿಸಿಡುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಮಣ್ಣು ಕುಸಿದು ಬಿದ್ದ ಪರಿಣಾಮ ಕಾರ್ಮಿಕರಿಬ್ಬರು ಭೂಸಮಾಧಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಹೋಬಳಿಯ ಕೆಂಪನಪುರ ಗ್ರಾಮದಲ್ಲಿ ನಡೆದಿದೆ.
ಕೆಂಪನಪುರ ಗ್ರಾಮದ ನಿವಾಸಿಗಳಾದ ನಾಗರಾಜು(25) ಮತ್ತು ಸಿದ್ದೇಶ್ (20) ಮಣ್ಣು ಕುಸಿದ ಪರಿಣಾಮ ದುರಂತ ಸಾವನ್ನಪ್ಪಿದವರು. ಇವರು ಗ್ರಾಮದ ರಮೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಣ್ಣನ್ನು ಬಗೆದು ಮರಳನ್ನು ತೆಗೆದು ಅದನ್ನು ಸಂಗ್ರಹಿಸಿಡುವ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.
ಮ್ಯಾನ್ ಹೋಲ್ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು
ಸುರಂಗ ಕೊರೆದು ಅದರೊಳಗಿನಿಂದ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಅವರ ಅರಿವಿಗೆ ಬರದಂತೆ ಮಣ್ಣು ಕುಸಿದಿದೆ. ಇದರಿಂದ ಮಣ್ಣಿನಡಿಗೆ ಸಿಲುಕಿದ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಸಂತೆಮರಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದು ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರ ಮೃತದೇಹವನ್ನು ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರಿಗೆ ನೀಡಿದ್ದಾರೆ. ಈ ಸಂಬಂಧ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಮರಳಿಗೆ ಬೇಡಿಕೆಯಿರುವ ಕಾರಣ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕೆಲವರು ತಮ್ಮ ಜಮೀನಿನಿಂದಲೇ ಮರಳನ್ನು ತೆಗೆದು ಮಾರಾಟ ಮಾಡುವ ಕೆಲಸದಲ್ಲಿ ನಿರತರಾಗಿದ್ದು, ಕೂಲಿಯ ಆಸೆಯಿಂದ ತೆರಳುವ ಕಾರ್ಮಿಕರು ತಮ್ಮ ಜೀವವನ್ನೇ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದು, ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಜೀವಂತ ಸಮಾಧಿಯಾಗ ಬೇಕಾಗುತ್ತದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಅಕ್ರಮ ಮರಳು ಸಂಗ್ರಹಣೆ ಮತ್ತು ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕೆಲಸಕ್ಕೆ ತಡೆಯೊಡ್ಡ ಬೇಕಿದೆ. ಇಲ್ಲದೆ ಹೋದರೆ ಇನ್ನಷ್ಟು ಮಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ.