ವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ ಮಲೆ ಮಹದೇಶ್ವರ
ಚಾಮರಾಜನಗರ, ಮಾರ್ಚ್ 2: ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನ ದೇಗುಲಕ್ಕೆ ಮಹಾಶಿವರಾತ್ರಿ ಸಂದರ್ಭ ಲಕ್ಷಾಂತರ ಭಕ್ತರು ಭೇಟಿ ನೀಡಿ ಹರಕೆಯಾಗಿ ಹುಂಡಿಗೆ ಕಾಣಿಕೆ ಹಣವನ್ನು ಅರ್ಪಿಸಿದ್ದಾರೆ. ಅದರ ಎಣಿಕೆ ಕಾರ್ಯ ನಡೆದಿದ್ದು, ಸುಮಾರು 2.51 ಕೋಟಿ ರೂ. ಕಾಣಿಕೆ ಹಣ ಹಾಗೂ ಅಲ್ಲದೆ 50 ಗ್ರಾಂ ಚಿನ್ನ ಹಾಗೂ 440 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿವೆ.
ಈ ಬಾರಿಯ ಶಿವರಾತ್ರಿ ಜಾಗರಣೆ ಹಾಗೂ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಅದರಲ್ಲೂ ಪಾದಯಾತ್ರೆಯಲ್ಲಿ ಬರುವವರ ಸಂಖ್ಯೆಯೇ ಹೆಚ್ಚು. ಮಹದೇಶ್ವರನನ್ನು ಶಿವರಾತ್ರಿ ದಿನದಂದು ದರ್ಶನ ಮಾಡಿ ಜಪಿಸಿದರೆ ಮೋಕ್ಷ ಸಿಗುವುದರೊಂದಿಗೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಅಷ್ಟೇ ಅಲ್ಲ ಹೀಗೆ ಬರುವ ಭಕ್ತರು ತಮ್ಮ ಭಕ್ತಿ ಪೂರ್ವಕವಾಗಿ ಹಣ ಮತ್ತು ಚಿನ್ನ, ಬೆಳ್ಳಿ ಪದಾರ್ಥಗಳನ್ನು ಕಾಣಿಕೆಯಾಗಿ ದೇವರಿಗೆ ಅರ್ಪಿಸುತ್ತಾರೆ.
ಕೋಟ್ಯಧಿಪತಿಯಾಗೇ ಮುಂದುವರೆದ ಮಲೆಮಹದೇಶ್ವರ
ಫೆಬ್ರವರಿ ತಿಂಗಳಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಕಾಣಿಕೆ ಹಣವನ್ನು ಶನಿವಾರ ಬೆಳಗ್ಗೆಯಿಂದ ಮಧ್ಯರಾತ್ರಿ ಒಂದೂವರೆ ಗಂಟೆ ತನಕ ಎಣಿಕೆ ಮಾಡಲಾಗಿದೆ. ಇದಕ್ಕೂ ಮುನ್ನ ಶಿವರಾತ್ರಿ ಜಾತ್ರಾ ವೇಳೆ 6 ಲಕ್ಷದ 20 ಸಾವಿರ ಲಾಡುಗಳು ಮಾರಾಟವಾಗಿದ್ದು, ಇದರಿಂದ ಒಂದು ಕೋಟಿ 50 ಲಕ್ಷ ರೂ ಆದಾಯ ಬಂದಿದೆ ಎಂದು ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.
ಭಕ್ತರು ಕಾಣಿಕೆ ರೂಪದಲ್ಲಿ ಮಹದೇಶ್ವರ ಎರಡು ಕೋಟಿ 51,60,247 ರೂ ಮತ್ತು ಲಾಡು ಪ್ರಸಾದದಿಂದ ಬಂದಿರುವ 1 ಕೋಟಿ 50 ಲಕ್ಷ ರೂ ಸೇರಿ ಸುಮಾರು 4 ಕೋಟಿ ಗೂ ಹೆಚ್ಚು ಆದಾಯ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರಕ್ಕೆ ಬಂದಂತಾಗಿದೆ. ಕಳೆದ ವರ್ಷ ಶಿವರಾತ್ರಿಯ ತಿಂಗಳಲ್ಲಿ ಸುಮಾರು 2 ಕೋಟಿ 13 ಲಕ್ಷ ರೂ 93 ಸಾವಿರದ 344 ರೂ.ಗಳು ಸಂಗ್ರಹವಾಗಿತ್ತು. 2020 ವರ್ಷ ಆರಂಭದಲ್ಲೇ ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯ ಆದಾಯದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಗಮಿಸಿದರೆ ರಾಜ್ಯದಲ್ಲೇ ಶ್ರೀಮಂತ ದೇವಾಲಯವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.