ಮಾದಪ್ಪನಿಗೆ 47 ದಿನಗಳಲ್ಲಿ 2.33 ಕೋಟಿ ರೂ. ಆದಾಯ
ಚಾಮರಾಜನಗರ, ಜುಲೈ 23; ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ. ಮಲೆ ಮಾದೇಶ್ವರ ದೇವಾಲಯದಲ್ಲಿ 122 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಗುರುವಾರ ತಡ ರಾತ್ರಿವರೆಗೆ ಎಣಿಕೆ ನಡೆದಿದ್ದು ಒಟ್ಟು 2.33 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಈ 122 ದಿನಗಳಲ್ಲಿ 75 ದಿನಗಳ ಕಾಲ ಲಾಕ್ಡೌನ್ ಕಾರಣಕ್ಕೆ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಹಾಗಾಗಿ, 47 ದಿನಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಕಾಣಿಕೆ ಸಂಗ್ರಹ ಆಗಿದೆ.
ಕೋಟ್ಯಧಿಪತಿಯಾಗಿಯೇ ಮುಂದುವರೆದ ಮಾದಪ್ಪ!
ಭಕ್ತರು 155 ಗ್ರಾಂ ಚಿನ್ನ ಹಾಗೂ 3.258 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಈ ಮಧ್ಯೆ ಕೋವಿಡ್ ಎರಡನೇ ಅಲೆಯ ಕಾರಣಕ್ಕೆ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಿದೆ.
ಮಲೆ ಮಹದೇಶ್ವರ ದೇಗುಲಕ್ಕೆ ಲಾಕ್ಡೌನ್ನಿಂದ 18 ಕೋಟಿ ರೂ. ನಷ್ಟ
ಏಪ್ರಿಲ್ 22ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಜುಲೈ 6ರಂದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಮುಂಜಾಗ್ರತಾ ಕ್ರಮವಾಗಿ ದಾಸೋಹ ವ್ಯವಸ್ಥೆಯನ್ನು ಆರಂಭಿಸಿರಲಿಲ್ಲ. ಶುಕ್ರವಾರ ಮಧ್ಯಾಹ್ನದಿಂದ ದಾಸೋಹ ಆರಂಭಿಸಲಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ ರದ್ದು
ದರ್ಶನಕ್ಕೆ ಅವಕಾಶ ಕಲ್ಪಿಸಿದ ನಂತರ ಕೆಲವೊಂದು ವಸತಿಗೃಹಗಳನ್ನು ಮಾತ್ರ ಕಾಯ್ದಿರಿಸಲು ಅವಕಾಶ ಇತ್ತು. ಇಂದಿನಿಂದ ಡಾರ್ಮಿಟರಿ ಹಾಗೂ ಕಾಟೇಜುಗಳನ್ನು ಭಕ್ತಾದಿಗಳ ಮಿತಿಯೊಂದಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಡಾರ್ಮಿಟರಿಯಲ್ಲಿನ ಒಂದು ದೊಡ್ಡ ಹಾಲ್ನಲ್ಲಿ 10 ಜನರಿಗೆ ಮಾತ್ರ ತಂಗಲು ಅವಕಾಶ. ಎಲ್ಲ 10 ಭಕ್ತಾದಿಗಳಿಗೆ ಉಚಿತ ಚಾಪೆ, ದಿಂಬು ನೀಡಲಾಗುವುದು ಮತ್ತು ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ.
ಉಳಿದಂತೆ ಮುಡಿ ಸೇವೆ, ಲಾಡು ಪ್ರಸಾದ, ಹಣ್ಣು ಕಾಯಿ ಒಡೆಯುವುದು, ತೀರ್ಥ ಪ್ರಸಾದ, ಸೇವೆಗಳು ಮತ್ತು ಉತ್ಸವಗಳ ನಿರ್ಬಂಧ ಮುಂದಿನ ಆದೇಶದವರೆಗೆ ಮುಂದುವರೆದಿದೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹೆಚ್ಚಿನ ಮಾಹಿತಿಯನ್ನು ಪಡೆಯಲಯ ಸಹಾಯವಾಣಿ ಸಂಖ್ಯೆ 1860 425 4350 ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.