ಹನೂರಲ್ಲಿ ಒಂದೇ ದಿನ ಹದಿಮೂರು ಜಾನುವಾರುಗಳ ಸಾವು!
ಹನೂರು, ಏಪ್ರಿಲ್ 23 : ಒಂದೇ ದಿನ ಸುಮಾರು ಹದಿಮೂರು ಜಾನುವಾರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೆ ವಿ ಎನ್ ದೊಡ್ಡಿಗ್ರಾಮದಲ್ಲಿ ನಡೆದಿದೆ. ಮೆಕ್ಕೆ ಜೋಳದ ಎಳೆ ಪೈರು ಸೇವಿಸಿರುವುದರಿಂದ ಜಾನುವಾರುಗಳ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ನಾಗರಾಜು ಎನ್ನುವರ ಐದು, ಮಾದೇಶ ಅವರ ಎಂಟು ಸೇರಿದಂತೆ ಒಟ್ಟು ಹದಿಮೂರು ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದ ಹಸುಗಳು ಕಳೆದುಕೊಂಡ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.
ಹಸುಗಳು ಮೆಕ್ಕೆ ಜೋಳದ ಎಳೆ ಪೈರುಗಳನ್ನು ಸೇವಿಸಿದ್ದರಿಂದ ಸಾವನ್ನಪ್ಪಿರಬಹುದೆಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರಬಹುದೆಂದು ಹೇಳುತ್ತಿದ್ದಾರೆ.
ಇದೀಗ ಸತ್ತಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿಗಳು ನಡೆಸಿದ್ದು, ಅದರ ವರದಿ ಬಂದ ಬಳಿಕವಷ್ಟೆ ಸಾವಿಗೆ ನೈಜ ಕಾರಣ ತಿಳಿದು ಬರಬೇಕಿದೆ.
ಈ ಬಗ್ಗೆ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕ ಮಾದೇಶ ಮಾತನಾಡಿ, :ಕಳೆದ ರಾತ್ರಿ ಬಿದ್ದಿದ್ದ ಮಳೆಯ ಕಾರಣ ಕೆಂಪು ಮಿಶ್ರಿತ ನೀರನ್ನು ಕುಡಿದಿರುವ ಪರಿಣಾಮ ಹೀಗಾಗಿದೆ" ಎಂದು ಹೇಳಿದ್ದಾರೆ.
ಒಂದೇ ದಿನದಲ್ಲಿ ಹದಿಮೂರು ಜಾನುವಾರುಗಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತ ಮುತ್ತ ಗ್ರಾಮಸ್ಥರು ಶಾಸಕ ನರೇಂದ್ರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ತಹಸೀಲ್ದಾರ್ ಕಾಮಾಕ್ಷಮ್ಮ ಭೇಟಿ ನೀಡಿ ಜಾನುವಾರುಗಳನ್ನು ಕಳೆದುಕೊಂಡ ಮಾಲಿಕರಿಗೆ ಸಾಂತ್ವನ ಹೇಳಿದರು.
ಒಂದೇ ಸ್ಥಳದಲ್ಲಿ ಕರುಗಳು ಸೇರಿದಂತೆ 13 ಜಾನುವಾರುಗಳು ಸತ್ತು ಬಿದ್ದಿರುವ ದೃಶ್ಯ ನೋಡುಗರ ಮನಕಲಕುವಂತಿದ್ದು, ಜಾನುವಾರುಗಳ ಅಂತ್ಯಕ್ರಿಯೆ ಸಾಮೂಹಿಕವಾಗಿ ನೆರವೇರಿಸಲಾಯಿತು.