ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಒಂದೇ ತಿಂಗಳಲ್ಲಿ 1.08 ಕೋಟಿ ಸಂಗ್ರಹ
ಚಾಮರಾಜನಗರ, ಜೂನ್ 29 : ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಭಕ್ತರಿಂದ ಕಾಣಿಕೆಯಾಗಿ 1.08 ಕೋಟಿ ರುಪಾಯಿ ಹಣ ಸಂಗ್ರಹವಾಗಿದೆ.
ಹಾಗೆಯೇ ಹುಂಡಿಯಲ್ಲಿ 102 ಗ್ರಾಂ ಚಿನ್ನ ಹಾಗೂ ಒಂದು ಕೇಜಿ ಐನೂರ ತೊಂಬತ್ತಾರು ಗ್ರಾಂ ಬೆಳ್ಳಿ ಪದಾರ್ಥಗಳು ಕಾಣಿಕೆಯಾಗಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ ಮಹದೇಶ್ವರನಿಗೆ ಹರಕೆ ರೂಪದಲ್ಲಿ ಕಾಣಿಕೆ ಹಾಗೂ ಚಿನ್ನ ಮತ್ತು ಬೆಳ್ಳಿ ಪದಾರ್ಥವನ್ನು ಒಪ್ಪಿಸುತ್ತಿದ್ದು, ಇದರಿಂದ ಆದಾಯ ಹೆಚ್ಚಾಗಿದೆ.
ಚಾಮರಾಜನಗರ: ಮಲೆ ಮಹದೇಶ್ವರನೀಗ ಕೋಟಿ ಒಡೆಯ!
ಇದೀಗ ಒಂದು ತಿಂಗಳಲ್ಲಿ ಒಂದು ಕೋಟಿ ಎಂಟು ಲಕ್ಷದ ಹದಿನಾಲ್ಕು ಸಾವಿರದ ಐನೂರ ಐವತ್ತಮೂರು ರುಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಬೇಸಿಗೆ ರಜೆಯ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡಿದ್ದರು. ಅಮಾವಾಸ್ಯೆ ಪೂಜೆಯೂ ಕಳೆದಿದ್ದರಿಂದ ಭಕ್ತ ಸಾಗರವೇ ಹರಿದು ಬಂದಿತ್ತು.
ಹುಂಡಿಯ ಕಾಣಿಕೆ ಎಣಿಕೆ ಕಾರ್ಯವು ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ನೇತೃತ್ವದಲ್ಲಿ 12 ಗಂಟೆಗಳ ಕಾಲ ನಡೆದಿದ್ದು, ಈ ವೇಳೆ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿ, ಪ್ರಾಧಿಕಾರದ ಸದಸ್ಯರಾದ ಕೊಪ್ಪಳಿ ಮಹದೇವನಾಯಕ, ಡಿ.ದೇವರಾಜು, ಬಿ.ಮಹದೇವಪ್ಪ, ಜವರೇಗೌಡರು ಇದ್ದರು.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಎಂ.ಬಸವರಾಜು, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಕಚೇರಿ ಅಧೀಕ್ಷಕ ಬಿ.ಮದರಾಜು, ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ನೌಕರರು, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ ಆರಕ್ಷಕ ಸಿಬ್ಬಂದಿ, ಬ್ಯಾಂಕ್ ವ್ಯವಸ್ಥಾಪಕರಾದ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.