ಕೋಟ್ಯಧಿಪತಿಯಾಗಿಯೇ ಮುಂದುವರೆದ ಮಾದಪ್ಪ!
ಚಾಮರಾಜನಗರ, ಫೆಬ್ರವರಿ 26: ಕೋವಿಡ್ ಪರಿಸ್ಥಿತಿ ಮಲೆಮಹದೇಶ್ವರನ ಹುಂಡಿ ಸಂಗ್ರಹಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನುವುದಕ್ಕೆ ಮಾದಪ್ಪ ಕೋಟ್ಯಧಿಪತಿಯಾಗಿಯೇ ಮುಂದುವರೆಯುತ್ತಿರುವುದು ಸಾಕ್ಷಿಯಾಗಿದೆ.
ಜನವರಿ ಮತ್ತು ಫೆಬ್ರವರಿ ತಿಂಗಳ ಸುಮಾರು ಇಪ್ಪತ್ತೆಂಟು ದಿನಗಳ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಲೆಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ಹುಂಡಿಗೆ ಭಕ್ತರು 1,48,73,233 ರೂಪಾಯಿಯನ್ನು ಸಮರ್ಪಿಸಿದ್ದಾರೆ.
ಮಲೆ ಮಹದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಭರವಸೆ
ಇದರಿಂದ ಮಹದೇಶ್ವರ ಕೋಟ್ಯಧಿಪತಿಯಾಗಿಯೇ ಮುಂದುವರೆಯುವ ಮೂಲಕ ಗಮನಸೆಳೆದಿದ್ದಾನೆ. ಹಾಗೆ ನೋಡಿದರೆ ಮಹದೇಶ್ವರನಿಗೆ ಜಿಲ್ಲೆ ಮಾತ್ರವಲ್ಲದೆ, ರಾಜ್ಯ, ಹೊರ ರಾಜ್ಯಗಳಲ್ಲಿಯೂ ಭಕ್ತರಿದ್ದು, ಲಾಕ್ ಡೌನ್ ತೆರವು ಆದ ಬಳಿಕ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಚಾಮರಾಜನಗರ: ಮಲೆ ಮಹದೇಶ್ವರದ ಲಾಡು ಬೆಲೆ ಹೆಚ್ಚಳ
ತಾವು ಮಾಡಿದ ಹರಕೆಯನ್ನು ಕೆಲವರು ಕಾಣಿಕೆ ರೂಪದಲ್ಲಿ ಮತ್ತೆ ಕೆಲವರು ಬೆಳ್ಳಿ, ಚಿನ್ನದ ಮೂಲಕವೂ ಅರ್ಪಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಮಲೆಮಹದೇಶ್ವರನ ಕ್ಷೇತ್ರಕ್ಕೆ ಭೇಟಿ ಮಾಡಿ ದರ್ಶನ ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಟ್ಟಿರುವ ಕಾರಣ ಹುಂಡಿ ಸಂಗ್ರಹ ಹೆಚ್ಚಾಗುತ್ತಿದೆ. ಜತೆಗೆ ಭಕ್ತರ ನೂಕು ನುಗ್ಗಲು ಕೂಡ ಹೆಚ್ಚಾಗುತ್ತಿದೆ.
ಮಲೆ ಮಹದೇಶ್ವರ ದೇವಾಲಯದ ಭಕ್ತರಿಗೆ ವಿಶೇಷ ಸೂಚನೆಗಳು
ಇದೀಗ ಇಪ್ಪತ್ತೆಂಟು ದಿನಗಳ ಅವಧಿಯಲ್ಲಿ ಒಂದು ಕೋಟಿ ನಲವತ್ತೆಂಟು ಲಕ್ಷದ ಎಪ್ಪತ್ತಮೂರು ಸಾವಿರದ ಇನ್ನೂರ ಮೂವತ್ಮೂರು ರೂಪಾಯಿ ಸಂಗ್ರಹವಾಗಿದ್ದು, ಇದರೊಂದಿಗೆ 31 ಗ್ರಾಂ ಚಿನ್ನ ಮತ್ತು 2.082 ಕೆಜಿಯಷ್ಟು ಬೆಳ್ಳಿಯೂ ಸಂಗ್ರಹವಾಗಿದೆ.
ಹುಂಡಿ ಏಣಿಕೆ ಕಾರ್ಯವನ್ನು ಎಂದಿನಂತೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಶಿವರಾತ್ರಿ ಹಬ್ಬವೂ ಹತ್ತಿರ ಬರುತ್ತಿದ್ದು, ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ದುಪ್ಪಟ್ಟು ಆಗಲಿದೆ. ಶಿವರಾತ್ರಿ ಹಬ್ಬದಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.