ಠೇವಣಿದಾರರು ಗೊಂದಲಕ್ಕೀಡಾಗಬೇಡಿ: ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್
ಬೆಂಗಳೂರು ಜನವರಿ 25: "ಬ್ಯಾಂಕಿನ ವಿರುದ್ದ ದ್ವೇಷದಿಂದ ಹಾಗೂ ಬ್ಯಾಂಕಿನ ತೇಜೋವಧೆ ಮಾಡುವ ಉದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗುತ್ತಿದೆ. ಈ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ" ಎಂದು ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ನಗರದ ಖಾಸಗಿ ಹೋಟೇಲ್ ನಲ್ಲಿಂದು ಪತ್ರಿಕಾಗೋಷ್ಠಿಯನ್ನು ನಡೆಸಿದ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಆರೋಪವನ್ನು ನಿರಾಕರಿಸುವ ವಿವರವಾದ ಪತ್ರಿಕಾ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದರು.
ಬೆಂಗಳೂರು ಬ್ಯಾಂಕ್ಗೆ ಆರ್ಬಿಐ ನೋಟಿಸ್; ಗ್ರಾಹಕರಲ್ಲಿ ಆತಂಕ
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ರಾಮು, ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ ವಿಜಯನಗರ ಬೆಂಗಳೂರು ಇದರ ಮೇಲೆ ಬ್ಯಾಂಕಿನಲ್ಲಿ ಬಹುಕೋಟಿ ಬೇನಾಮಿ ಸಾಲಗಳನ್ನು ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರು 2015 ರಿಂದ 2018 ರ ಅವಧಿಗೆ ಮೆ. ತಿರುಮಲ ಕನ್ಸ್ಟ್ರಕ್ಷನ್ ಮತ್ತು ಇತರೆ ಸಂಸ್ಥೇಗಳಿಗೆ ರೂ. 42 ಕೋಟಿಗಳಷ್ಟು ಸಾಲಗಳನ್ನು ಬೇನಾಮಿಯಾಗಿ ನೀಡಿರುವುದಾಗಿ ಕುಮಾರ್ ಆರ್ ದಿನಾಂಕ 24.01.2020 24 ನೇ ಅಡಿಷನಲ್ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ನಲ್ಲಿ ದಾವೆಯನ್ನು ದಾಖಲಿಸಿದ್ದು, ಬ್ಯಾಂಕಿನ ವಿರುದ್ಧ ಆರೋಪವನ್ನು ಮಾಡಿರುತ್ತಾರೆ.
ಕುಮಾರ್ ಆರ್ ಮತ್ತು ಪತ್ನಿ ಡಾ. ಮಂಜುಳ ಕುಮಾರ್ ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಆಧಾರವಾಗಿ ಮೆ.ವಿ.ಎನ್. ಕನ್ಸ್ಟ್ರಕ್ಷನ್ ಸಂಸ್ಥೆಯವರು ಸಾಲವಾಗಿ ಪಡೆದಿದ್ದು, ಅವರು ಸಾಲವನ್ನು ಮರುಪಾವತಿಸದೆ ಸುಸ್ತಿದಾರರಾದ ಕಾರಣ ಅವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 14-01-2020 ರಲ್ಲಿ ಸ್ವಾಧೀನ ನೋಟಿಸನ್ನು ನೀಡಲಾಗಿ ದಿನಪತ್ರಿಕೆಗಳಲ್ಲೂ ಪ್ರಕಟಣೆ ನೀಡಿರುತ್ತೇವೆ. ಬ್ಯಾಂಕಿನ ಈ ಕ್ರಮದ ವಿರುದ್ದ್ಧ ದ್ವೇಷದಿಂದ ಹಾಗೂ ಬ್ಯಾಂಕಿನ ತೇಜೋವಧೆ ಮಾಡುವ ಉದ್ದೇಶದಿಂದ ಬ್ಯಾಂಕಿನ ವಿರುದ್ದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದರು.
1969 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್ ರಾಜ್ಯದಲ್ಲಿ ಅತ್ಯಂತ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿರುವ 10 ಬ್ಯಾಂಕುಗಳಲ್ಲಿ 6 ನೇ ಸ್ಥಾನವನ್ನು ಹೊಂದಿದೆ. 16000 ಸಾವಿರ ಜನ ಸದಸ್ಯರಿದ್ದು, ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ಹಿನ್ನಲೆಯಲ್ಲಿ ಬ್ಯಾಂಕಿನಲ್ಲಿ ಅತ್ಯಂತ ಕಾನೂನು ಬದ್ದವಾದ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬ್ಯಾಂಕು ಇಷ್ಟು ವೇಗವಾಗಿ ಬೆಳೆಯಲು ಹಾಗೂ ಸುಮಾರು 1300 ಕೋಟಿ ರೂಪಾಯಿಗಳಷ್ಟು ಠೇವಣಿ ಹೊಂದಲು ಕಾರಣ ಬ್ಯಾಂಕಿನ ಸದಸ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬ್ಯಾಂಕಿನ ಯಾವುದೇ ಠೇವಣಿದಾರರು ಆತಂಕಕ್ಕೆ ಒಳಗಾಗದೆ ಇರುವಂತೆ ಮನವಿ ಮಾಡಿದರು.