ಕೇಂದ್ರ ಸರಕಾರದೊಂದಿಗಿನ ಆರ್ ಬಿಐ ಹಗ್ಗ ಜಗ್ಗಾಟಕ್ಕೆ ಇಂದು ಫುಲ್ ಸ್ಟಾಪ್!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಂಡಳಿ ಸಭೆ ಸೋಮವಾರ ನಡೆಯಲಿದೆ ಎಂಬ ಸಂಗತಿಗೆ ಈ ಪರಿಯ ಪ್ರಾಮುಖ್ಯತೆ ಸಿಗಬಹುದು ಎಂಬ ಅಂದಾಜು ಹಿಂದೆಂದೂ ಯಾರೂ ಮಾಡಿರಲಿಕ್ಕಿಲ್ಲ. ಏಕೆಂದರೆ, ಒಂದು ಕಡೆ ಕೇಂದ್ರ ಬ್ಯಾಂಕ್ ಗೆ ಇದು ಸ್ವಾಯತ್ತತೆ ಪ್ರಶ್ನೆ. ಇನ್ನು ಕೇಂದ್ರ ಸರಕಾರಕ್ಕೆ ಮುಂದಿನ ಚುನಾವಣೆ ದೃಷ್ಟಿಯಿಂದ ಪ್ರತಿಷ್ಠೆಯ ಪ್ರಶ್ನೆ.
ಆಸಲಿಗೆ ಏನಿದು ಸಮಸ್ಯೆ ಎಂಬ ಪ್ರಶ್ನೆ ಬರುತ್ತದೆ. ರಿಸರ್ವ್ ಬ್ಯಾಂಕ್ ಇಂಡಿಯಾ ಬಳಿ ಮುಂಚಿನಿಂದಲೂ ಮೀಸಲು ನಿಧಿ (ರಿಸರ್ವ್ ಫಂಡ್) ಎಂದು ಕಾಪಾಡಿಕೊಂಡು ಬರಲಾಗುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದು ಹಾಗೂ ಆಯಾ ಸನ್ನಿವೇಶದ ಅಗತ್ಯಗಳಿಗೆ ಆರ್ಥಿಕವಾಗಿ ಸ್ಪಂದಿಸುವುದು ಕೇಂದ್ರ ಬ್ಯಾಂಕ್ ನ ಜವಾಬ್ದಾರಿ.
ಮಹತ್ವದ ಸಭೆ: ಆರ್ಬಿಐ-ಸರ್ಕಾರದ ನಡುವಿನ ಸಂಘರ್ಷಕ್ಕೆ ಇಂದು ತೆರೆ?
ಆದರೆ, ಅದು ಅನುಸರಿಸಿಕೊಂಡು ಬರುತ್ತಿರುವ ಮಾದರಿ ತೀರಾ ಸಾಂಪ್ರದಾಯಿಕವಾದದ್ದು. ಅಗತ್ಯಕ್ಕಿಂತ ಹೆಚ್ಚು ಮೀಸಲು ಇರಿಸಿಕೊಳ್ಳಲಾಗಿದೆ ಎಂಬುದು ಸರಕಾರದ ವಾದ. ಜಾಸ್ತಿ ಇದ್ದರೆ ಇರಲಿ, ಏನು ಸಮಸ್ಯೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಹೀಗೆ ಅಗತ್ಯಕ್ಕಿಂತ ಹೆಚ್ಚು ಮೀಸಲು ನಿಧಿ ಇದ್ದರೆ ಮಾರುಕಟ್ಟೆಯಲ್ಲಿ ನಗದು ಚಲಾವಣೆ ಕಡಿಮೆ ಆಗುತ್ತದೆ.
ಉದ್ಯೋಗ ಸೃಷ್ಟಿ ಆಗದಿದ್ದರೆ ಕೇಂದ್ರ ಸರಕಾರಕ್ಕೆ ಆಕ್ಷೇಪ
ಮುಖ್ಯವಾಗಿ ಉದ್ಯಮಗಳಿಗೆ, ಅದರಲ್ಲೂ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಬಂಡವಾಳಕ್ಕೆ ಸಮಸ್ಯೆ ಆಗುತ್ತದೆ. ಏಕೆಂದರೆ, ಈ ರೀತಿ ಉದ್ಯಮಗಳಿಗೆ ಸಾಲ ನೀಡಬೇಕಾದ ವಾಣಿಜ್ಯ ಹಾಗೂ ಇತರ ಬ್ಯಾಂಕ್ ಗಳು ಕೆಲವು ಕಠಿಣ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಮೇಲೆ ನಿರ್ಬಂಧ ಇರುತ್ತದೆ. ಯಾವಾಗ ಉದ್ಯಮಗಳಿಗೆ ಪೂರಕ ಬಂಡವಾಳ ದೊರೆಯುವುದಿಲ್ಲವೋ ವ್ಯವಹಾರ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಆಡಳಿತಾರೂಢ ಸರಕಾರದ ಬಗ್ಗೆ ನೇರವಾಗಿ ಆಕ್ರೋಶ ವ್ಯಕ್ತವಾಗುತ್ತದೆ. ಉದ್ಯೋಗ ಸೃಷ್ಟಿ ಮಾಡುವ ಭರವಸೆ ಈಡೇರಿಸಿಲ್ಲ ಎಂಬ ಆಕ್ಷೇಪ ಕೇಳಿಬರುತ್ತದೆ.
ಹನ್ನೆರಡು ಅಂಶದ ಯೋಜನೆ ಘೋಷಿಸಿದ ಪ್ರಧಾನಿ
ಅಪನಗದೀಕರಣದ ನಂತರ ನಗದು ಸಮಸ್ಯೆ ಆಗಿದ್ದು ನಿಜ. ಅದೇ ಸಂದರ್ಭದಲ್ಲೇ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ದೊಡ್ಡ ಮಟ್ಟದ ಹೊಡೆತ ಬಿತ್ತು. ದೇಶದ ಜಿಡಿಪಿಗೆ ಈ ವಲಯದ ಕೊಡುಗೆ ಭಾರೀ ಪ್ರಮಾಣದಲ್ಲಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಆಗಲಿಲ್ಲ. ಇದರ ಜತೆಗೆ ಜಾರಿಯಾದ ಜಿಎಸ್ ಟಿಯಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಇಂಥ ಸಂದಿಗ್ಧ ಸಮಯದಲ್ಲಿ ಏನು ಮಾಡಬಹುದು ಅಂತ ನೋಡಿದರೆ, ಪ್ರಾಥಮಿಕವಾಗಿ ಉದ್ಯಮಗಳನ್ನು ಪ್ರೋತ್ಸಾಹಿಸಿ, ಅವುಗಳಿಗೆ ಸಾಲ ಸೌಲಭ್ಯ ಸುಲಭವಾಗಿ ದೊರೆಯುವಂತೆ ಮಾಡಬೇಕು. ಇದರ ಭಾಗವಾಗಿಯೇ ಪ್ರಧಾನಿಗಳು ದೀಪಾವಳಿ ಸಮಯದಲ್ಲಿ ಹನ್ನೆರಡು ಅಂಶಗಳದೊಂದು ಯೋಜನೆ ಘೋಷಿಸಿದರು. ಒಂದು ಗಂಟೆಯೊಳಗೆ ಒಂದು ಕೋಟಿ ತನಕ ಸಾಲ ಸಿಗುವಂಥ ಸೌಲಭ್ಯದ ಘೋಷಣೆ ಮಾಡಿದರು. ಇಂಥ ಒಟ್ಟು ಹನ್ನೆರಡು ಅಂಶಗಳು ಒಳಗೊಂಡಿದ್ದವು.
ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?
ಯೋಜನೆ ಅನುಷ್ಠಾನಕ್ಕೆ ನಗದು ಅಗತ್ಯವಿದೆ
ಯೋಜನೆಗಳನ್ನು ಘೋಷಣೆ ಮಾಡಿದ್ದೇನೋ ಆಯಿತು. ಆದರೆ ಅವುಗಳ ಅನುಷ್ಠಾನ ಆಗಬೇಕಾದದ್ದು ಯಾವ ಮೂಲಕ. ವಿವಿಧ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳ ಮೂಲಕ. ಎಲ್ಲ ಹಣಕಾಸು ಸಂಸ್ಥೆಗಳ ವ್ಯವಹಾರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನದಂತೆಯೇ ನಡೆಯುತ್ತದೆ. ಆ ಪ್ರಕಾರ ಈಗ ಬ್ಯಾಂಕ್ ಗಳು ಯಾವುದೇ ಬಗೆಯ ಖಾತೆ, ಠೇವಣಿ ರೂಪದಲ್ಲಿ ಸಂಗ್ರಹಿಸುವ ನಗದು ಪೈಕಿ ಇಂತಿಷ್ಟು ಪ್ರಮಾಣವನ್ನು ಆರ್ ಬಿಐ ಬಳಿ ಇರಿಸಬೇಕು. ಅದನ್ನು ಕ್ಯಾಶ್ ರಿಸರ್ವ್ ರೇಷಿಯೋ (ಸಿಆರ್ ಆರ್) ಎನ್ನುತ್ತಾರೆ. ಆ ಪ್ರಮಾಣ ಈಗಿರುವುದಕ್ಕಿಂತ ಕಡಿಮೆ ಮಾಡಿದರೆ ಬ್ಯಾಂಕ್ ಗಳ ಬಳಿ ಹಣ ಉಳಿಯುತ್ತದೆ. ಅದನ್ನು ಸಾಲದ ರೂಪದಲ್ಲಿ ನೀಡಬಹುದು.
ಕೇಂದ್ರ ಸರಕಾರ ಪಟ್ಟು ಬಿಡುವ ಲಕ್ಷಣ ಇಲ್ಲ
ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯನ್ನು ನಗದು ಪೂರೈಕೆಗೆ ಅನುಕೂಲವಾಗುವಂತೆ ಸರಕಾರದ ಜತೆ ಚರ್ಚೆ ಮಾಡಿ ಬಳಸಬೇಕು ಎಂಬುದು ಮತ್ತೊಂದು ಬೇಡಿಕೆ. ಇವೆರಡು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿವೇಚನೆಗೆ ಬಿಟ್ಟ ವಿಚಾರ. ಹಾಗೊಂದು ವೇಳೆ ಆರ್ ಬಿಐನಿಂದ ಪಟ್ಟು ಸಡಿಲಿಕೆ ಆಗದಿದ್ದರೆ ಈ ವರೆಗೆ ಯಾವುದೇ ಸರಕಾರ ಬಳಸದ ಆರ್ ಬಿಐ ಕಾಯ್ದೆ ಸೆಕ್ಷನ್ 7 ಅನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಬಳಸಬಹುದು. ಆಗ ತಾನು ಸೂಚಿಸಿರುವ ಸಂಗತಿಗಳನ್ನು ಬಲವಂತವಾಗಿಯಾದರೂ ಸರಕಾರ ಜಾರಿಗೆ ತರುತ್ತದೆ.
ಊರ್ಜಿತ್ ಪಟೇಲ್ ರಾಜೀನಾಮೆ ಇಲ್ಲ?: ಬಿಕ್ಕಟ್ಟಿಗೆ ತೇಪೆ ಹಚ್ಚಲು ಸರ್ಕಾರದ ಪ್ರಯತ್ನ
ಷೇರು ಪೇಟೆ ಹೇಗೆ ಸ್ಪಂದಿಸಬಹುದು ಎಂಬ ಕುತೂಹಲವಿದೆ
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರಕಾರದ ನಿರ್ಧಾರದ ವಿರುದ್ಧ ಹೋಗಲಿಕ್ಕಿಲ್ಲ. ಇಂದಿನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸಕಾರಾತ್ಮಕವಾಗಿದ್ದಾರೆ. ಒಂದು ಆರ್ ಬಿಐನಿಂದ ಹೆಚ್ಚಿನ ನಗದು ಚಲಾವಣೆಗೆ ಪೂರಕ ಕ್ರಮ ಕೈಗೊಳ್ಳಬಹುದು. ಹಾಗೊಂದು ವೇಳೆ ನಿರಾಕರಿಸಿದರೆ ಆಗ ಸರಕಾರದಿಂದ ಆರ್ ಬಿಐ ಕಾಯ್ದೆ ಸೆಕ್ಷನ್ 7 ಕೈಗೆತ್ತಿಕೊಳ್ಳಬಹುದು. ಹೇಗೂ ಸರಕಾರ ಅಂದುಕೊಂಡಿದ್ದು ಆಗುವ ಸಾಧ್ಯತೆಗಳೇ ಹೆಚ್ಚು. ಏನೇ ಆದರೂ ಇಂದಿನ ಸಭೆ ಮುಕ್ತಾಯ ಆಗುವ ತನಕ ಏನಾಗಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಈಗಾಗಲೇ ಷೇರು ಮಾರುಕಟ್ಟೆ ಒಂದು ಹಂತಕ್ಕೆ ಕುಸಿದು ಈಗಿನ್ನೂ ಚೇತರಿಕೆ ಹಾದಿಯಲ್ಲಿದೆ. ಆದ್ದರಿಂದ ಇಂದಿನ ವಿದ್ಯಮಾನ ಮಧ್ಯಾಹ್ನದ ತನಕ ನಕಾರಾತ್ಮಕ ಬದಲಾವಣೆ ಮಾಡಿಲ್ಲ. ದಿನಾಂತ್ಯಕ್ಕೆ ಏನಾಗಬಹುದು ಎಂಬುದನ್ನು ಕಾದು ನೋಡಬೇಕು" ಎಂದು ಮಾರುಕಟ್ಟೆ ತಜ್ಞರು, ಷೇರು ದಲ್ಲಾಳಿಗಳೂ ಆದ ಕೆ.ಜಿ.ಕೃಪಾಲ್ ಅವರು ಒನ್ ಇಂಡಿಯಾ ಕನ್ನಡಕ್ಕೆ ತಮ್ಮ ಅಭಿಪ್ರಾಯ ತಿಳಿಸಿದರು.
346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ