ಜಿಡಿಪಿ ದರ ಪ್ರಗತಿ ಕಂಡಿದ್ದು ಏಕೆ? ಇದು ನಿಜಕ್ಕೂ ಖುಷಿಯ ವಿಚಾರವೇ?
ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದರೆ, ಇತ್ತ ಹೊರಬಿದ್ದ ಜಿಡಿಪಿ(Gross Domestic Product) ತ್ರೈಮಾಸಿಕ(Q1) ದರ ಎಲ್ಲರ ಬಾಯಿಮುಚ್ಚಿಸಿದೆ. ಕಳೆದ ಎರಡು ವರ್ಷದ ನಂತರ ಜಿಡಿಪಿ ದರ 8.2% ಕ್ಕೆ ತಲುಪಿ ಗರಿಷ್ಠ ದಾಖಲೆ ಬರೆದಿದೆ.
2018-19ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಆರ್ಥಿಕ ವಿಶ್ಲೇಷಕರ ನಿರೀಕ್ಷೆಯನ್ನೂ ಮೀರಿ ಬೆಳೆದಿದೆ. ಕಳೆದ ಹಣಕಾಸು ವರ್ಷದ(2017-18) ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಕೇವಲ ಶೇ.5.59 ಮಾತ್ರವೇ ಇತ್ತು. ಆದರೆ ಈ ಬಾರಿ ಅದು ನಿರೀಕ್ಷೆಯನ್ನೂ ಮೀರಿ ಬೆಳವಣಿಗೆ ಕಂಡಿದೆ.
ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಭರ್ಜರಿ ನೆಗೆತ
ಅಷ್ಟಕ್ಕೂ ಇದು ಖುಷಿ ಪಡುವ ವಿಚಾರವೇ? ಜಿಡಿಪಿ ಈ ಪರಿ ಬೆಳವಣಿಗೆಯಾಗುವುದಕ್ಕೆ ಕಾರಣವಾದ ಅಂಶಗಳು ಯಾವವು? ಈ ಜಿಡಿಪಿ ದರ ಭಾರತದ ಆರ್ಥಿಕತೆಯ ಕುರಿತು ಸಂಪೂರ್ಣ ಚಿತ್ರಣ ನೀಡಬಲ್ಲದೆ?
ಇದು ಖುಷಿ ಪಡುವ ವಿಚಾರವಲ್ಲ, ಯಾಕಂದ್ರೆ...
ಜಿಡಿಪಿ ದರ ಶೇ. 8.2 ರಷ್ಟು ಬೆಳವಣಿಗೆ ಕಂಡಿದ್ದು ಶ್ಲಾಘನೀಯ. ಆದರೆ ಜಿಡಿಪಿ ದರವನ್ನು ಯಾವತ್ತಿಗೂ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೂ, ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೂ ಹೋಲಿಕೆ ಮಾಡಿ ನಿರ್ಧರಿಸಲಾಗುತ್ತದೆ(ಆಯಾ ತ್ರೈಮಾಸಿಕ ದರವನ್ನು ಮುಂದಿನ ವರ್ಷದ ಅದೇ ನಿರ್ದಿಷ್ಟ ತ್ರೈಮಾಸಿಕಕ್ಕೆ).
ಹಾಗೆ ಯೋಚಿಸುವುದಾದರೆ ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಅತ್ಯುತ್ತಮ ಬೆಳವಣಿಗೆ. ಆದರೆ ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ಬಹಳ ಕಡಿಮೆಯಾಗಿತ್ತು. ಅದಕ್ಕೆ ಕಾರಣ ಕಳೆದ ಜುಲೈ ನಲ್ಲಿ ಜಿಎಸ್ಟಿ(GST) ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದರಿಂದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನ ಅವಧಿಯಲ್ಲಿ ಉತ್ಪಾದಕರು ತಾವು ಉತ್ಪಾದಿಸಿದ ವಸ್ತುಗಳ ಬೆಲೆಯನ್ನೂ ಕಡಿಮೆ ಮಾಡಿದ್ದಲ್ಲದೆ, ಉತ್ಪಾದನೆಯನ್ನೂ ಕಡಿಮೆ ಮಾಡಿದ್ದರು. ಜಿಎಸ್ಟಿ ಯಿಂದಾಗ ಸಾಮಗ್ರಿಗಳ ದರ ಹೆಚ್ಚಾಗುತ್ತದೋ ಅಥವಾ ಕಡಿಮೆಯಾಗುತ್ತದೋ ಎಂಬ ಮಾಹಿತಿ ಸ್ಪಷ್ಟವಾಗಿ ಇಲ್ಲದ ಕಾರಣ ಸ್ಟಾಕ್(stock) ಅನ್ನು ಖಾಲಿ ಮಾಡಿಕೊಳ್ಳಲು ಉತ್ಪಾದಕರು ಮುಂದಾದರು. ಇದರಿಂದ ವಸ್ತುಗಳ ಬೆಲೆಯೂ ಕಡಿಮೆಯಾಯಿತು. ಉತ್ಪಾದನೆಯೇ ಹೆಚ್ಚು ಇಲ್ಲದ ಕಾರಣ ಸಹಜವಾಗಿ ಜಿಡಿಪಿ ದರ ಕಡಿಮೆಯಾಗಿತ್ತು.
2018- 19ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದರ 7- 7.5
ಇಂಧನ ದರ, ಡಾಲರ್ ಎದುರು ರೂಪಾಯಿ ಪತನ
ಮೊದಲ ತ್ರೈಮಾಸಿಕದ ಜಿಡಿಪಿ ದರದ ಮೇಲೆ ಇಂಧನ ದರದ ಗಣನೀಯ ಏರಿಕೆಯಾಗಲಿ, ಡಾಲರ್ ಎದುರು ರೂಪಾಯಿ ನೆಲಕಚ್ಚಿದ್ದಾಗಲೀ ಹೆಚ್ಚು ಪರಿಣಾಮ ಬೀರಿದಂತಿಲ್ಲ. ಡಾಲರ್ ಎದುರು ರೂಪಾಯಿ ಬೆಲೆ ಕಡಿಮೆಯಾಗುವುದು ಆಮದು ಮಾಡಿಕೊಳ್ಳುವ ಸಮಯದಲ್ಲಿ ನಷ್ಟವೆನ್ನಿಸಿದರೂ, ರಫ್ತು ಮಾಡುವಾಗ ಲಾಭವೇ. ಬಹುಶಃ ಭಾರತ ಆಮದಿಗಿಂತ ಹೆಚ್ಚು ರಫ್ತಿಗೇ ಆದ್ಯತೆ ನೀಡಿದ್ದು ಸಹ ಇದಕ್ಕೆ ಕಾರಣವಿರಬಹುದು.
ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!
ಸುಸ್ಥಿರ ಆರ್ಥಿಕತೆ ಎನ್ನುವುದಕ್ಕಾಗುವುದಿಲ್ಲ
ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯನ್ನೇ ಆಧರಿಸಿ ಇದನ್ನು ಸುಸ್ಥಿರ ಆರ್ಥಿಕ ಪ್ರಗತಿ ಎನ್ನುವುದಕ್ಕಾಗುವುದಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಸರ್ಕಾರ ಮಂಡಿಸಿದ ಬಜೆಟ್ ನ ಯೋಜನೆಗಳು ಜಾರಿಗೆ ಬರುವುದು ಏಪ್ರಿಲ್ ನಿಂದ. ಮೂರು ತಿಂಗಳುಗಳಲ್ಲಿ ಅವುಗಳ ಸಮರ್ಪಕ ಜಾರಿ, ಬಜೆಟ್ ನ ಅನುದಾನಗಳ ಬಳಕೆ ಸಾಧ್ಯವಿಲ್ಲ. ಅವು ಸರಿಯಾಗಿ ಜಾರಿಗೆ ಬರುವುದಕ್ಕೆ ಸಮಯ ಹಿಡಿಯುತ್ತದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಅಂದರೆ ಎರಡನೇ ತ್ರೈಮಾಸಿಕದಲ್ಲಿ ದಾಖಲಾಗುವ ಜಿಡಿಪಿ ಬೆಳವಣಿಗೆ ದರವೇ ಒಂದು ಆರ್ಥಿಕತೆ ಸುಸ್ಥಿರ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲಿದೆ.
ಸರ್ಕಾರದ ಯೋಜನೆಗಳ ಫಲ
ಕೃಷಿ, ರಿಯಲ್ ಎಸ್ಟೇಟ್, ಅರಣ್ಯ, ನೀರು ಪೂರೈಕೆ ಸೇರಿದಂತೆ ಇತರ ವಲಯಗಳಲ್ಲೂ ಪ್ರಗತಿಯಾಗಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಪ್ರೋತ್ಸಾಹ, ದೇಸೀ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ, ಬಂಡವಾಳ ಹೂಡಿಕೆಯಲ್ಲಿ ಚೇತರಿಕೆಇವು ಜಿಡಿಪಿ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆ ನೀಡಿವೆ. ಕಲ್ಲಿದ್ದಲು, ಕಚ್ಚಾತೈಲ, ಸಿಮೆಂಟ್, ರಸಗೊಬ್ಬರ, ವಿದ್ಯುತ್, ನೈಸರ್ಗಿಕ ಅನಿಲ ಸೇರಿದಂತೆ ಎಂಟು ಪ್ರಮುಖ ವಲಯಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಇದು ಎನ್ ಡಿಎ ಸರ್ಕಾರಕ್ಕೆ ಮತ್ತಷ್ಟು ಬಲ ನೀಡಿದೆ.
ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದ ಜಿಡಿಪಿ
ಎನ್ ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ನೆಲಕಚ್ಚಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಇದು ಉತ್ತರವೆನ್ನಿಸಿದೆ. ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಗಳ ಜಾರಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈಗ ವಿಪಕ್ಷಗಳು ಬಾಯಿ ಮುಚ್ಚಲೇಬೇಕಾದ ಸ್ಥಿತಿ ಬಂದಿದೆ. ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ 31.18 ಲಕ್ಷ ಕೋಟಿ ರುಪಾಯಿಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಆ ಅಂದಾಜನ್ನೂ ಮೀರಿ, 33.74 ಲಕ್ಷ ಕೋಟಿ ರುಪಾಯಿಯಷ್ಟು ಪ್ರಗತಿಯಾಗಿದೆ.