ತೈಲ ಬೆಲೆ ಏರಿಕೆಗೆ ಎರಡು ಕಾರಣ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್
ನವದೆಹಲಿ, ಫೆಬ್ರವರಿ 22: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಬಕಾರಿ ಸುಂಕ ಇಳಿಸುವ ಮೂಲಕ ಜನರ ಮೇಲಾಗುತ್ತಿರುವ ವಿಪರೀತ ಹೊರೆಯನ್ನು ತಗ್ಗಿಸುವ ಬಗ್ಗೆ ಕೇಂದ್ರ ಸರ್ಕಾರ ಉಸಿರೆತ್ತುತ್ತಿಲ್ಲ ಎಂದು ವಿರೋಧಪಕ್ಷಗಳು ಆರೋಪಿಸುತ್ತಿವೆ.
ತೈಲ ಬೆಲೆ ಹೆಚ್ಚಳವಾಗಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಹಿಂದಿನ ಸರ್ಕಾರಗಳು ಆಮದು ಅವಲಂಬನೆಗೆ ಆದ್ಯತೆ ನೀಡಿದ್ದವು. ಇದರಿಂದ ದೇಶ ಸ್ವಾವಲಂಬನೆಯಾಗಲಿಲ್ಲ. ಇದರ ಪರಿಣಾಮವನ್ನು ಈಗ ಮಧ್ಯಮವರ್ಗದ ಜನತೆ ಎದುರಿಸುವಂತಾಗಿದೆ ಎಂದು ಪ್ರಧಾನಿ ಹೇಳಿದ್ದರು.
'ರಾಜಧರ್ಮ' ಪಾಲಿಸಿ: ಮೋದಿಗೆ ಸೋನಿಯಾ ಗಾಂಧಿ ಪತ್ರ
ಆದರೆ ಈಗ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಹೊಸ ಕಾರಣಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೊಲಿಯಂ ಉತ್ಪಾದನೆಯಲ್ಲಿನ ಕುಸಿತ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ದೂಷಿಸಿದ್ದಾರೆ. ಮುಂದೆ ಓದಿ.
ಬೆಲೆ ಏರಿಕೆಗೆ ಎರಡು ಕಾರಣ
'ತೈಲ ಬೆಲೆ ಏರಿಕೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯು ತೈಲ ಉತ್ಪಾದನೆಯನ್ನು ತಗ್ಗಿಸಿವೆ. ಹಾಗೆಯೇ ಉತ್ಪಾದಕ ದೇಶಗಳು ಹೆಚ್ಚಿನ ಲಾಭ ಪಡೆದುಕೊಳ್ಳುವ ಸಲುವಾಗಿ ಕಡಿಮೆ ಪ್ರಮಾಣದಲ್ಲಿ ತೈಲ ಉತ್ಪಾದಿಸುತ್ತಿವೆ. ಇದರಿಂದ ಗ್ರಾಹಕ ದೇಶಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ' ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಬದಲಾವಣೆ ಆಗಬಹುದು
'ಉತ್ಪಾದನೆ ಕಡಿಮೆ ಮಾಡದಂತೆ ನಾವು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್) ಮತ್ತು ಒಪೆಕ್ ಪ್ಲಸ್ ದೇಶಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಇದ್ದೇವೆ. ಅದರಲ್ಲಿ ಬದಲಾವಣೆಯಾಗಬಹುದು ಎಂಬ ಭರವಸೆ ನಮಗಿದೆ' ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲಿಯೇ ಈ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ: ಕಾರಣ ಏನು ಗೊತ್ತೇ?
ಕೋವಿಡ್ ಕಾರಣದಿಂದ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿನ ಸುಂಕ ಹೇರಿಕೆಯನ್ನು ಸಮರ್ಥಿಸಿಕೊಂಡ ಅವರು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ. ಅದಕ್ಕಾಗಿ ತೆರಿಗೆ ಸಂಗ್ರಹ ಮಾಡುತ್ತಿವೆ. ಈ ಅಭಿವೃದ್ಧಿ ಯೋಜನೆಗಳು ಉದ್ಯೋಗ ಸೃಷ್ಟಿಸಲಿವೆ ಎಂದಿದ್ದಾರೆ.
ಸಮತೋಲನಕ್ಕೆ ತೆರಿಗೆ ಬೇಕು
'ಬೆಲೆ ಏರಿಕೆಗೆ ಮತ್ತೊಂದು ಕಾರಣ ಕೋವಿಡ್. ನಾವು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆರಿಗೆ ಸಂಗ್ರಹಿಸಬೇಕಿದೆ. ಅಭಿವೃದ್ಧಿ ಮೇಲೆ ವ್ಯಯಿಸುವುದು ಉದ್ಯೋಗ ಸೃಷ್ಟಿ ಮಾಡುತ್ತದೆ. ಸರ್ಕಾರವು ತನ್ನ ಹೂಡಿಕೆಯನ್ನು ಹೆಚ್ಚಿಸಿದ್ದು, ಈ ಬಜೆಟ್ನಲ್ಲಿ ಶೇ 34ರಷ್ಟು ಹೆಚ್ಚು ಬಂಡವಾಳ ಹೂಡಿಕೆ ನಡೆಯಲಿದೆ. ರಾಜ್ಯ ಸರ್ಕಾರಗಳೂ ವೆಚ್ಚ ಹೆಚ್ಚಿಸಲಿವೆ. ಇವುಗಳನ್ನು ಸಮತೋಲನ ಮಾಡಲು ನಮಗೆ ಈ ತೆರಿಗೆ ಅಗತ್ಯವಾಗಿದೆ. ಹಣಕಾಸು ಸಚಿವರು ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಒಂದು ದಾರಿ ಕಂಡುಕೊಳ್ಳುತ್ತಾರೆ ಎಂಬ ಭರವಸೆ ಇದೆ' ಎಂದು ಹೇಳಿದ್ದಾರೆ.