ಅಟ್ಟ ಏರಿದೆ ತರಕಾರಿ, ತೈಲ ಬೆಲೆ- ಅದನ್ನೇ ಹೇಳುತ್ತಿದೆ ಸರಕಾರಿ ದಾಖಲೆ
ನವದೆಹಲಿ, ಜುಲೈ 16: ತರಕಾರಿಗಳು ಹಾಗೂ ತೈಲವಸ್ತುಗಳ ಸಗಟು ದರ ಏರಿಕೆ ಕಾರಣಕ್ಕೆ ಜೂನ್ ತಿಂಗಳ ಹಣದುಬ್ಬರ 5.77% ತಲುಪಿದೆ. ಸಗಟು ದರ ಸೂಚ್ಯಕದ ಆಧಾರದಲ್ಲಿ ಹಣದುಬ್ಬರವು ಮೇ ತಿಂಗಳಲ್ಲಿ 4.43% ಇತ್ತು. ಇನ್ನು ಕಳೆದ ವರ್ಷದ ಜೂನ್ ತಿಂಗಳಲ್ಲಿ 0.90% ಇತ್ತು.
ಸರಕಾರವು ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಹಾರ ಪದಾರ್ಥಗಳ ಹಣದುಬ್ಬರವು ಜೂನ್ 2018ರಲ್ಲಿ 1.80% ಇದೆ. ಇದಕ್ಕೂ ಮುಂಚೆ ಅಂದರೆ ಮೇ ತಿಂಗಳಲ್ಲಿ 1.60% ಇತ್ತು. ತರಕಾರಿಗಳ ಹಣದುಬ್ಬರವು ಜೂನ್ ನಲ್ಲಿ 8.12% ಏರಿಕೆಯಾಅಗಿದೆ. ಕಳೆದ ತಿಂಗಳು ಅದು 2.51% ಇತ್ತು.
ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಕುಸಿಯಲು ಕಾರಣಗಳೇನು?
ಇಂಧನ ಹಾಗೂ ತೈಲ ಹಣದುಬ್ಬರವು ಜೂನ್ ನಲ್ಲಿ 16.18% ಏರಿಕೆ ಆಗಿದೆ. ಮೇ ತಿಂಗಳಲ್ಲಿ ಈ ಪ್ರಮಾಣ 11.22% ಇತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ತೀಕ್ಷ್ಣವಾದ ಹಣದುಬ್ಬರ ದಾಖಲಾಯಿತು.
ಆಲೂಗಡ್ಡೆ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಆ ಪ್ರಮಾಣ 99.02% ಆಗಿದೆ. ಮೇ ತಿಂಗಳಲ್ಲಿ ಆ ಪ್ರಮಾಣ 81.93% ಇತ್ತು. ಜೂನ್ ನಲ್ಲಿ ಈರುಳ್ಳಿ ಬೆಲೆಯೂ ಏರಿಕೆ ಕಂಡಿದ್ದು, 18.25% ಹೆಚ್ಚಳವಾಗಿದೆ. ಇದಕ್ಕೂ ಹಿಂದಿನ ತಿಂಗಳು ಅಂದರೆ ಮೇನಲ್ಲಿ 13.20% ಹೆಚ್ಚಳವಾಗಿತ್ತು. ಬೇಳೆಕಾಳುಗಳ ಬೆಲೆ ಇಳಿಕೆ ಮುಂದುವರಿದಿದ್ದು, ಜೂನ್ ನಲ್ಲಿ 20.23%ರಷ್ಟು ಇಳಿಕೆಯಾಗಿದೆ.
ಇನ್ನು ಕಳೆದ ವಾರ ಬಿಡುಗಡೆ ಮಾಡಿದ್ದ ಚಿಲ್ಲರೆ ಹಣದುಬ್ಬರವು ಐದು ತಿಂಗಳ ಗರಿಷ್ಠ ಮಟ್ಟದಲ್ಲಿತ್ತು. ಅದಕ್ಕೆ ಕಾರಣ ಆಗಿದ್ದು ದುಬಾರಿ ತೈಲ ಬೆಲೆ. ಆರ್ಥಿಕ ನೀತಿ ರೂಪಿಸುವ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹಣದುಬ್ಬರ ದತ್ತಾಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.