ಕೇಂದ್ರ ಬಜೆಟ್ 2018: ಗೆದ್ದವರು ಯಾರು, ಸೋತವರು ಯಾರು?
ನವದೆಹಲಿ, ಫೆಬ್ರವರಿ 1: ಸಾಲು ಸಾಲು ವಿಧಾನಸಭೆ ಚುನಾವಣೆಗಳನ್ನು ಕಣ್ಣೆದುರು ಇಟ್ಟುಕೊಂಡು ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗಿದೆ. ಇದರ ಜತೆಗೆ ಮುಂದಿನ ವರ್ಷ ಸಂಸತ್ ಚುನಾವಣೆ ಸಹ ಇದೆ. ಇಂಥ ಕಾಲ ಘಟ್ಟದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ರೈತರಿಗೆ ಉಸಿರಾಡುವಂತಿದೆ.
ಇದರ ಜತೆಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಖಾಸಗಿ ಹೂಡಿಕೆಗೆ ಪೂರಕವಾದ ಸನ್ನಿವೇಶ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾರತದ ಕೃಷಿಕರು, ಗ್ರಾಮೀಣ ಭಾಗದ ಜನರು ಹಾಗೂ ಕೃಷಿ ಚಟುವಟಿಕೆಗೆ ಹೊಂದಿಕೊಂಡಂಥ ಕಂಪೆನಿಗಳು ಮುಗುಳ್ನಗುವುದಕ್ಕೆ ಕಾರಣಗಳಿವೆ.
ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?
ಹಾಗಿದ್ದರೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಇವರು ಗೆದ್ದಿದ್ದಾರೆ, ಇಂಥವರ ಪಾಲಿಗೆ ಸೋಲಾಗಿದೆ ಎಂದು ವರ್ಗೀಕರಣ ಮಾಡುವುದಕ್ಕೆ ಸಾಧ್ಯವೆ? ಅಂಥದ್ದೊಂದು ಪ್ರಯತ್ನ ನಾವು ಮಾಡಿದ್ದೇವೆ. ಮತ್ತು ಅದಕ್ಕೆ ಕಾರಣಗಳನ್ನು ಸಹ ನೀಡಿದ್ದೇವೆ. ಯಾವ ಕ್ಷೇತ್ರ- ವಲಯಕ್ಕೆ ಅನುಕೂಲ ಅಥವಾ ಹೊರೆ ಆಗಿದೆ ಎಂಬುದನ್ನು ತಿಳಿದುಕೊಂಡು ಬಿಡಿ.
ರೈತರು
ದೇಶದಾದ್ಯಂತ ರೈತರು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ಬಾರಿಯ ಬಜೆಟ್ ಅವರ ಪಾಲಿಗೆ ಭರವಸೆ ಆಗಿದೆ. ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಲೆಯನ್ನು ಹೆಚ್ಚಳ ಮಾಡುವ ಭರವಸೆ ಸಿಕ್ಕಿದೆ. ದೇಶದಾದ್ಯಂತ ಕೃಷಿ ಮಾರುಕಟ್ಟೆ ಮೇಲೆ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಹಣ ಮೀಸಲಿರಿಸಲಾಗಿದೆ. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಹರಿಯಲಿದೆ. ಸೋಲಾರ್ ಪಂಪ್ ಬಳಸಿ ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಖರೀದಿಯನ್ನು ರಾಜ್ಯ ಸರಕಾರ ಮಾಡಲಿದೆ.
ಆರೋಗ್ಯ ಸೇವೆ ಒದಗಿಸುವವರು
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಅಡಿ ಐವತ್ತು ಕೋಟಿ ಮಂದಿಗೆ ಐದು ಲಕ್ಷ ರುಪಾಯಿವರೆಗೆ ಆರೋಗ್ಯ ರಕ್ಷಣೆಗಾಗಿ ಅನುಕೂಲ ದೊರೆಯಲಿದೆ.
ಟ್ರಾನ್ಸ್ ಪೋರ್ಟ್ ಕಂಪೆನಿಗಳು
ರಸ್ತೆ, ರೈಲ್ವೆ, ನಿರ್ಮಾಣ ಮತ್ತು ಎಂಜಿನಿಯರಿಂಗ್ ಗೆ ಹೆಚ್ಚಿನ ಹೂಡಿಕೆ ಭರವಸೆ ಸಿಕ್ಕಿದೆ. ಇದರಿಂದ ಟ್ರಾನ್ಸ್ ಪೋರ್ಟ್ ಕಂಪೆನಿಗಳಿಗೆ ಹೆಚ್ಚು ಉಪಯೋಗ ಆಗಲಿದೆ.
ಗ್ರಾಹಕ ಬಳಕೆ ವಸ್ತುಗಳ ಉತ್ಪಾದಕರು
ಗ್ರಾಹಕ ಬಳಕೆ ವಸ್ತುಗಳ ಉತ್ಪಾದಿಸುವ ಕಂಪೆನಿಗಳಾದ ಹಿಂದೂಸ್ತಾನ್ ಯುನಿಲಿವರ್, ಬ್ರಿಟಾನಿಯಾ ಹಾಗೂ ಮಾರಿಕೋ ಅಂಥ ಕಂಪೆನಿಗಳು ಲಾಭ ಪಡೆಯಲಿವೆ.
ಚಿನ್ನಾಭರಣ ಉತ್ಪಾದಕರು
ಚಿನ್ನದ ಬೇಡಿಕೆ ಪೈಕಿ ಶೇಕಡಾ ಅರವತ್ತರಷ್ಟು ಗ್ರಾಮೀಣ ಭಾಗದಿಂದಲೇ ಬರುತ್ತದೆ. ಅಲ್ಲಿನ ಆರ್ಥಿಕತೆಗೆ ಮತ್ತಷ್ಟು ಬಲ ಬರುವುದರಿಂದ ಚಿನ್ನಾಭರಣ ಉತ್ಪಾದಕರಿಗೆ ಹೆಚ್ಚು ಬೇಡಿಕೆ ಬರಲಿದೆ.
ವಿಮಾನ ನಿಲ್ದಾಣ ನಿರ್ಮಾಣ
ಪ್ರಾದೇಶಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಸಕ್ತಿ ತೋರಿರುವುದರಿಂದ ಅಂಥ ನಿಲ್ದಾಣದ ನಿರ್ಮಾಣ ಸಂಸ್ಥೆಗಳಿಗೆ ಹೆಚ್ಚು ಕೆಲಸ ದೊರೆತು, ಅನುಕೂಲ ಆಗಲಿದೆ.
ಆಪಲ್, ಸ್ಯಾಮ್ಸಂಗ್
ದೇಸಿ ಉತ್ಪನ್ನಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೊಬೈಲ್ ಫೋನ್ ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ ಹದಿನೈದರಿಂದ ಇಪ್ಪತ್ತಕ್ಕೆ ಏರಿಸಲಾಗಿದೆ. ಸದ್ಯಕ್ಕೆ ಜಾಗತಿಕ ಮಟ್ಟದಲ್ಲೇ ತುಂಬ ಲಾಭ ಮಾಡುತ್ತಿರುವ ಆಪಲ್ ಹಾಗೂ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಗಳು ದರ ಹೆಚ್ಚಿಸಬೇಕಾಗುತ್ತದೆ ಅಥವಾ ಅನಿವಾರ್ಯವಾಗಿ ಭಾರತದಲ್ಲಿ ಉತ್ಪಾದನೆ ಆರಂಭಿಸಬೇಕಾಗುತ್ತದೆ.
ಆರ್ಥಿಕ ವಲಯ
ಷೇರುಗಳ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಲು ನಿರ್ಧರಿಸಿರುವುದರಿಂದ ದೀರ್ಘಾವಧಿಗೆ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದ ಕಂಪೆನಿಗಳು ಸ್ವಲ್ಪ ಆಲೋಚನೆ ಮಾಡುವಂತಾಗುತ್ತದೆ.
ರಕ್ಷಣಾ ವಲಯ
ರಕ್ಷಣಾ ವಲಯಕ್ಕೆ ಅಗತ್ಯ ಇರುವ ಸಲಕರಣೆಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ನೀತಿ ನಿರೂಪಣೆ ಮಾಡುವ ಭರವಸೆಯನ್ನು ಜೇಟ್ಲಿ ಅವರು ನೀಡಿದ್ದಾರೆ. ಆದರೆ ಆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಗ್ರಾಹಕರು
ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯಿಂದ ಕೋಟ್ಯಂತರ ಮಂದಿ ಬಡವರಿಗೆ ಅನುಕೂಲ ಆಗುತ್ತದೆ. ಆದರೆ ಅದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಲೆವಿಯನ್ನು ಮೂರರಿಂದ ನಾಲ್ಕು ಪರ್ಸೆಂಟ್ ಗೆ ಏರಿಸಲಾಗಿದೆ. ಇದು ಎಲ್ಲ ಉತ್ಪನ್ನ ಹಾಗೂ ಸೇವೆಗಳಿಗೂ ಅನ್ವಯಿಸುವುದರಿಂದ ಎಲ್ಲವೂ ಒಂದಿಷ್ಟು ದುಬಾರಿ ಆಗಲಿದೆ.