ಭಾರತೀಯರನ್ನು ವಾಟ್ಸಾಪ್ ವಿಭಿನ್ನವಾಗಿ ನಡೆಸಿಕೊಳ್ಳುತ್ತಿದೆ: ಕೇಂದ್ರದ ಆರೋಪ
ನವದೆಹಲಿ, ಜನವರಿ 25: ವಾಟ್ಸಾಪ್ ಸಂದೇಶ ವಾಹಕ ಸಂಸ್ಥೆಯು ಖಾಸಗಿತನದ ವಿಚಾರದಲ್ಲಿ ಭಾರತ ಹಾಗೂ ಯುರೋಪ್ನ ಬಳಕೆದಾರರನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ನೂತನ ಖಾಸಗಿ ನೀತಿ ಮತ್ತು ಈ ಸಂವಹನಕ್ಕೆ ಪ್ರತಿಕ್ರಿಯೆಯಾಗಿ ಕೆಲವು ಸ್ಪಷ್ಟೀಕರಣವನ್ನು ಭಾರತ ಸರ್ಕಾರ ಕೋರಿದೆ ಎಂದು ವಾಟ್ಸಾಪ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ವಾಟ್ಸಾಪ್ನ ನೂತನ ಖಾಸಗಿ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ, ಕೇಂದ್ರ ಸರ್ಕಾರವು ವಾಟ್ಸಾಪ್ಗೆ ಪ್ರಶ್ನೆಗಳ ದೊಡ್ಡ ಪಟ್ಟಿಯನ್ನೇ ನೀಡಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ದೆಹಲಿ ಕೋರ್ಟ್ಗೆ ಹೇಳಿದ್ದಾರೆ.
ವಾಟ್ಸಾಪ್ ಹೊಸ ಸೇವಾ ನಿಯಮ: ಗೌಪ್ಯ ನೀತಿಗಳನ್ನು ಹಿಂಪಡೆಯುವಂತೆ ಸಿಇಒಗೆ ಪತ್ರ ಬರೆದ ಕೇಂದ್ರ ಸರ್ಕಾರ
'ತನ್ನ ಯುರೋಪಿಯನ್ ಬಳಕೆದಾರರಿಗೆ ವಾಟ್ಸಾಪ್ ನೀಡಿರುವ ಖಾಸಗಿತನದ ನಿಯಮದಂತೆ ಫೇಸ್ಬುಕ್ನೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ. ಆದರೆ ಇದೇ ನೀತಿಯನ್ನು ದೊಡ್ಡ ಮಟ್ಟದ ಬಳಕೆದಾರರನ್ನು ಹೊಂದಿರುವ ಭಾರತೀಯರು ಹಾಗೂ ಭಾರತದ ನಾಗರಿಕರಿಗೆ ಅನ್ವಯಿಸುತ್ತಿಲ್ಲ. ಈ ರೀತಿಯ ವಿಭಿನ್ನ ನಡವಳಿಕೆ ಕಳವಳದ ಸಂಗತಿಯಾಗಿದೆ' ಎಂದು ಅವರು ತಿಳಿಸಿದ್ದಾರೆ.
ವಾಟ್ಸಾಪ್ ತನ್ನ ಬಳಕೆದಾರರನ್ನು ತನಗೆ ಇಚ್ಛೆ ಬಂದಂತೆ ನಡೆಸಿಕೊಳ್ಳುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾಹಿತಿ ಗೋಪ್ಯತೆ ಮತ್ತು ಮಾಹಿತಿ ಭದ್ರತೆಗೆ ಸಂಬಂಧಿಸಿದ ಹಿತಾಸಕ್ತಿಗೆ ಧಕ್ಕೆ ತರುವ ವಿಚಾರಗಳನ್ನು ಒಪ್ಪಿಕೊಳ್ಳುವಂತೆ ಬಳಕೆದಾರರಿಗೆ ವಾಟ್ಸಾಪ್ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರವು ಕಳುಹಿಸಿದ ಪ್ರಶ್ನೆಗಳಿಗೆ ತಾನು ಪ್ರತಿಕ್ರಿಯೆ ನೀಡುತ್ತಿರುವುದಾಗಿ ವಾಟ್ಸಾಪ್ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. 'ನಾವು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇವೆ. ಇದೆಲ್ಲವೂ ತಪ್ಪು ಮಾಹಿತಿಗಳಾಗಿವೆ' ಎಂದು ವಾಟ್ಸಾಪ್ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.
ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?
ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮಯ ನೀಡುವ ಸಲುವಾಗಿ ನ್ಯಾಯಮೂರ್ತಿ ಸಂಜೀವ್ ಸಚದೇವ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ನಿಗದಿಗೊಳಿಸಿತು. ಇದಕ್ಕೂ ಮುನ್ನ ವಾಟ್ಸಾಪ್ ಸೇವೆಗಳು ಸ್ವಯಂ ಇಚ್ಛೆಗೆ ಬಿಟ್ಟಿದ್ದು. ಬಳಕೆದಾರರು ಅದನ್ನು ಬಳಸದೆ ಬಿಡುವ ಆಯ್ಕೆ ಇದೆ ಎಂಬುದನ್ನು ಕೋರ್ಟ್ ಪರಿಗಣಿಸಿತು.