ಯುಪಿಐ ಪಾವತಿ ವೈಫಲ್ಯ: ಆರ್ಬಿಐ ಮಾರ್ಗಸೂಚಿ ಹೇಳುವುದೇನು?
ನವದೆಹಲಿ, ಏಪ್ರಿಲ್ 6: ಬಹುತೇಕ ಜನರು ಈಗ ನಗದು ಹಣದ ಬದಲು ಯುಪಿಐ ವಹಿವಾಟನ್ನು ಅವಲಂಬಿಸಿದ್ದಾರೆ. ಪರ್ಸ್ನಲ್ಲಿ ಹಣವಿಲ್ಲದೆ ಇದ್ದ ಸಮಯದಲ್ಲಂತೂ ಯುಪಿಐ ಪಾವತಿ ವರದಾನವಾಗಿದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಬ್ಯಾಂಕ್ಗಳಲ್ಲಿನ ತಾಂತ್ರಿಕ ದೋಷದಿಂದ ಪಾವತಿ ಸಾಧ್ಯವಾಗದೆ ಪೇಚಿಗೆ ಸಿಲುಕುವುದು ಸಾಮಾನ್ಯ. ಆದರೆ ಇದಕ್ಕೆ ಇನ್ನು ಮುಂದೆ ಅಂತ್ಯಗಾಣುವ ನಿರೀಕ್ಷೆ ಮೂಡಿದೆ.
ಬಹುತೇಕ ಬ್ಯಾಂಕ್ ವ್ಯವಸ್ಥೆಗಳಲ್ಲಿ ಏಪ್ರಿಲ್ 1ರ ಬಳಿಕ ಪಾವತಿ ಸಹಜ ಸ್ಥಿತಿಗೆ ಮರಳಿದ್ದು, ಗ್ರಾಹಕರು ಯುಪಿಐ ಮತ್ತು ಐಎಂಪಿಎಸ್ ಸೇವೆಗಳಲ್ಲಿ ಅಡಚಣೆಯಿಲ್ಲದೆ ಬಳಸಲು ಸಾಧ್ಯವಾಗುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಟ್ವಿಟ್ಟರ್ನಲ್ಲಿ ತಿಳಿಸಿದೆ.
ಆರ್ಬಿಐ ಹೊಸ ನಿಯಮದ ಜಾರಿ ಗಡುವು ಸೆ. 30ರವರೆಗೂ ವಿಸ್ತರಣೆ
ಆದರೆ, ವಹಿವಾಟು ವಿಫಲವಾದ ಬಳಿಕ ತಮ್ಮ ಹಣ ಮರಳಿ ಬರುತ್ತಿಲ್ಲ ಎಂದು ಅನೇಕ ಗ್ರಾಹಕರು ಪ್ರತಿಕ್ರಿಯೆ ನೀಡಿದ್ದಾರೆ. ವಿಫಲಗೊಂಡ ವಹಿವಾಟಿಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್ನಲ್ಲಿಯೇ ಆರ್ಬಿಐ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಇದರ ಅನ್ವಯ ವಹಿವಾಟು ವಿಫಲವಾದ ನಂತರ ಗ್ರಾಹಕರಿಗೆ ಹಣ ಮರಳಿಸಲು ಸಾಧ್ಯವಾಗದೆ ಇದ್ದರೆ ಬ್ಯಾಂಕ್ ಅದಕ್ಕೆ ದಂಡ ತೆರಬೇಕಾಗುತ್ತದೆ.
ಆರ್ಬಿಐನ ಹಾರ್ಮೊನೈಸೇಷನ್ ಆಫ್ ಟರ್ನ್ ಅರೌಂಡ್ ಟೈಮ್ (ಟಿಎಟಿ) ಮಾರ್ಗಸೂಚಿ ಮತ್ತು ಅಧಿಕೃತ ಪಾವತಿ ವ್ಯವಸ್ಥೆ ಬಳಸಿದ ವಹಿವಾಟು ವಿಫಲವಾದರೆ ಗ್ರಾಹಕರಿಗೆ ಪರಿಹಾರ ನೀಡುವ ನಿಯಮದ ಪ್ರಕಾರ, ಫಲಾನುಭವಿಯ ಖಾತೆಗೆ ಹಣ ಪಾವತಿಸುವಲ್ಲಿ ಬ್ಯಾಂಕ್ ವಿಫಲವಾದರೆ, ಎರಡು ದಿನದಲ್ಲಿ ಫಲಾನುಭವಿ ಬ್ಯಾಂಕ್ ಸ್ವಯಂಚಾಲಿತವಾಗಿ ಹಣವನ್ನು ಮರಳಿಸಬೇಕು. ಒಂದು ವೇಳೆ ಎರಡು ದಿನಕ್ಕಿಂತ ಹೆಚ್ಚು ತಡವಾದರೆ ಪ್ರತಿ ದಿನಕ್ಕೆ 100 ರೂಪಾಯಿ ದಂಡ ತೆರಬೇಕಾಗುತ್ತದೆ.
100 ಸಾಲಗಾರರು ಬ್ಯಾಂಕ್ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ
ಎಟಿಎಂಗಳಲ್ಲಿ ಗ್ರಾಹಕರ ಖಾತೆಯಿಂದ ಹಣ ಡೆಬಿಟ್ ಆಗಿ ನಗದು ಸಿಗದೆ ಹೋದರೆ ಅನ್ನು ಆರು ದಿನಗಳಲ್ಲಿ ಅವರ ಖಾತೆಗೆ ಮರಳಿಸಬೇಕು. ಆರು ದಿನಕ್ಕಿಂತ ಹೆಚ್ಚು ದಿನ ಕಳೆದರೆ ಪ್ರತಿ ದಿನ 100 ರೂಪಾಯಿ ದಂಡ ಪಾವತಿಸಬೇಕು. ಕಾರ್ಡ್ನಿಂದ ಕಾರ್ಡ್ಗೆ ಹಣ ವರ್ಗಾವಣೆ ವೇಳೆ ಫಲಾನುಭವಿಗೆ ಹಣ ಸಿಗದೆ ಹೋದರೆ, ಅದನ್ನು ಗ್ರಾಹಕರ ಖಾತೆಗೆ ಮರಳಿಸಲು ಬ್ಯಾಂಕ್ಗೆ ಎರಡು ದಿನದ ಗರಿಷ್ಠ ಸಮಯವಿದೆ. ಇದೇ ರೀತಿಯ ನಿಯಮ ಐಎಂಪಿಎಸ್, ಯುಪಿಐ ಪಾವತಿಗಳಲ್ಲಿ ಅನ್ವಯವಾಗುತ್ತದೆ. ಪಾಯಿಂಟ್ ಆಫ್ ಸೇಲ್ (ಪಿಒಎಸ್) ವಹಿವಾಟಿನಲ್ಲಿ ಆರು ದಿನದಲ್ಲಿ ವಿಫಲಗೊಂಡ ವಹಿವಾಟಿನ ಮೊತ್ತವನ್ನು ಹಿಂದಿರುಗಿಸಲು ಅವಕಾಶವಿದೆ. ವ್ಯಾಪಾರಿಗಳಿಗೆ ಪಾವತಿಸಿದ ಹಣದಲ್ಲಿ ಕಡಿತ ಖಾತರಿಯಾದರೂ ಅವರಿಗೆ ಪಾವತಿಯಾಗದೆ ಇದ್ದಲ್ಲಿ ಆ ಹಣವನ್ನು ಆರು ದಿನದಲ್ಲಿ ಗ್ರಾಹಕರ ಖಾತೆಗೆ ಮರಳಿಸಬೇಕು.