ವಿಜಯಾ ಬ್ಯಾಂಕ್: ಒಗ್ಗಟ್ಟಿನಲ್ಲಿ ಕೊರತೆಯಿದೆ ಎಂದು ಜಗಜ್ಜಾಹೀರು ಮಾಡಿದ ಜನಪ್ರತಿನಿಧಿಗಳು
1931ರಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ ಮಂಗಳೂರಿನಲ್ಲಿ ಸಂಸ್ಥಾಪಿಸಿದ ವಿಜಯಾ ಬ್ಯಾಂಕ್, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳ್ಳುತ್ತಿದೆ. ಈ ಸಂಬಂಧ, ಕ್ಯಾಬಿನೆಟ್ ನಲ್ಲೂ ಅನುಮೋದನೆ ಪಡೆದುಕೊಳ್ಳಲಾಗಿದೆ.
ಅಲ್ಲಿಗೆ, ಸುಮಾರು ಒಂಬತ್ತು ದಶಕಗಳ ಕಾಲ, ಕರ್ನಾಟಕದ ಜನತೆಯ ಜೊತೆ ಅವಿನಾವಭಾವ ಸಂಬಂಧ ಹೊಂದಿದ್ದ ಮತ್ತು ತುಳು ಭಾಷಿಗರ ಹೆಮ್ಮೆಯ ವಿಜಯಾ ಬ್ಯಾಂಕ್, ಇತಿಹಾಸದ ಪುಟಕ್ಕೆ ಸೇರುವ ಕಾಲ ಸನ್ನಿಹಿತವಾಗಿದೆ. ಇದರ ಜೊತೆಗೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳ ಸ್ವಾಭಿಮಾನವೂ ಅದೇ ದಾರಿ ಹಿಡಿದಂತಿದೆ.
ಸಣ್ಣಸಣ್ಣ ಶೆಡೂಲ್ಡ್ ಬ್ಯಾಂಕುಗಳನ್ನು ತನ್ನ ಜೊತೆ ವಿಲೀನಗೊಳಿಸಿಕೊಂಡು, ಎರಡನೇ ತ್ರೈಮಾಸಿಕ ಅವಧಿಗೆ (ಸೆ 2018) 139.94 ಕೋಟಿ ಲಾಭಗಳಿಸಿದ್ದ ವಿಜಯಾ ಬ್ಯಾಂಕ್ ಅನ್ನು ವಿಲೀನಗೊಳಿಸಲು, ಜನವರಿ ಎರಡರಂದು, ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ: ಎಚ್ಚೆತ್ತುಕೊಂಡ ಬಿಜೆಪಿ
ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಜಯಾ ಬ್ಯಾಂಕ್, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಶಾಖೆಯನ್ನು ಹೊಂದಿದೆ. ವಿಜಯಾ ಬ್ಯಾಂಕ್ ಅನ್ನು ವಿಲೀನಗೊಳಿಸುವ ಸಂಬಂಧ ಪ್ರಕ್ರಿಯೆ ಆರಂಭವಾದಾಗ, ಅದರಲ್ಲಿ ನಮ್ಮ ಜನಪ್ರತಿನಿಧಿಗಳು 'ರಾಜಕೀಯ' ಹುಡುಕಿದರೋ ಹೊರತು, ವಿಲೀನವಾಗುದನ್ನು ತಡೆಯಲು ಆತ್ಮಸಾಕ್ಷಿಯ ಪ್ರಯತ್ನವನ್ನು ನಡೆಸಲಿಲ್ಲ.
ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಈ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ಮತ್ತು ಮೋದಿಯವರ ವಿರುದ್ದ ಟೀಕಾಸ್ತ್ರಕ್ಕೆ ಇನ್ನೊಂದು ವಿಷಯವನ್ನಾಗಿ ತೆಗೆದುಕೊಂಡರು. ಇನ್ನು, ಬಿಜೆಪಿಯವರಂತೂ, ಕೇವಲ ಕಾಟಾಚಾರಕ್ಕೆ ಕೇಂದ್ರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದರು.
|
ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಜನಪ್ರತಿನಿಧಿಗಳು
ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡರು ಎನ್ನುವಂತೆ, ಕ್ಯಾಬಿನೆಟ್ ಅನುಮೋದನೆ ಪಡೆದುಕೊಂಡ ಮೇಲೆ, ವಿಲೀನ ಮಾಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮುಂಬೈ ಉತ್ತರದ ಸಂಸದ ಗೋಪಾಲ ಶೆಟ್ಟಿ ಅವರನ್ನೊಳಗೊಂಡ ನಿಯೋಗ, ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರನ್ನು ಭೇಟಿಯಾಗಿ ವಿಲೀನ ಮಾಡದಂತೆ ಮನವಿ ಮಾಡಿಕೊಂಡಿತ್ತು.
ಬ್ಯಾಂಕುಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ: ಬರಿ ನೆನಪಾಗಿ ಉಳಿಯಲಿದೆ ವಿಜಯಾ ಬ್ಯಾಂಕ್
ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್
ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳ್ಳುವ ಪ್ರಕ್ರಿಯೆಗೆ ಇಂದು, ನಿನ್ನೆ ಚಾಲನೆ ಸಿಕ್ಕಿದ್ದಲ್ಲ. ಈ ಪ್ರಕ್ರಿಯೆ ಆರಂಭವಾದಗಲೇ, ಪಕ್ಷಬೇಧ ಮರೆತು, ಪ್ರಧಾನಿಯವರ ಬಳಿಗೋ, ಕೇಂದ್ರ ವಿತ್ತ ಸಚಿವರ ಬಳಿಗೋ ಹೋಗಿ ಮನವಿ ಸಲ್ಲಿಸಿದ್ದರೆ, ಕೇಂದ್ರ ಸರಕಾರ ವಿಲೀನ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿಯುತ್ತಿತ್ತೇನೋ? ಒಂದು ವೇಳೆ, ಹಾಗೆ ಮಾಡಿದ್ದಲ್ಲಿ, ತುಳು ಭಾಷಿಗರ ಮತ್ತು ವಿಜಯಾ ಬ್ಯಾಂಕ್ ಸಿಬ್ಬಂದಿಗಳ ಮನಸ್ಸಿನಲ್ಲಿ ಆ ಭಾಗದ ಜನಪ್ರತಿನಿಧಿಗಳು ವಿಶೇಷ ಸ್ಥಾನವನ್ನು ಪಡೆಯುತ್ತಿದ್ದರು.
ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಜ.9 ರಂದು ಮಂಗಳೂರು ಬಂದ್ಗೆ ಯೂತ್ ಕಾಂಗ್ರೆಸ್ ಕರೆ
ರೈತ ಕುಟುಂಬದವರು ಸ್ಥಾಪಿಸಿದ ವಿಜಯಾ ಬ್ಯಾಂಕ್
ದಕ್ಷಿಣಕನ್ನಡ ಮೂಲದ, ಕರಾವಳಿ ಕರ್ನಾಟಕದ ಹೆಮ್ಮೆಯ ಮತ್ತು ನಮ್ಮ ಹಿಂದಿನ ರೈತ ಕುಟುಂಬದವರು ಸ್ಥಾಪಿಸಿದ ವಿಜಯಾ ಬ್ಯಾಂಕ್, ತನ್ನ ಮೂಲ ಹೆಸರಿನೊಂದಿಗೆ ಮುಂದುವರಿಯಬೇಕು ಎಂದು ಸಂಸದ ಕಟೀಲ್, ಶೋಭಾ, ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಿದ್ದರು. ಇವರು ಜೇಟ್ಲಿಗೆ ಮನವಿ ಸಲ್ಲಿಸಿದ್ದು ಜನವರಿ ಎಂಟರಂದು, ಆದರೆ ಕ್ಯಾಬಿನೆಟ್ ಅನುಮೋದನೆ ನೀಡಿದ್ದು ಜನವರಿ ಎರಡರಂದು. ಅಂದರೆ, ಕ್ಯಾಬಿನೆಟ್ ಅನುಮೋದನೆಯ ಒಂದು ವಾರದ ನಂತರ, ನಮ್ಮ ಘನ ಜನಪ್ರತಿನಿಧಿಗಳು, ಸಚಿವರಿಗೆ ಮನವಿ ಸಲ್ಲಿಸಿದ್ದು.
ವಿಲೀನದ ಬಗ್ಗೆ ಬ್ಯಾಂಕ್ ನೌಕರರ ಆತಂಕ, ವಿಜಯ ಬ್ಯಾಂಕ್ ಸಿಇಒ ಏನೆಂದರು?
ಸಾರ್ವಜನಿಕರ ತೀವ್ರ ಒತ್ತಡ ಮತ್ತು ಆಕ್ರೋಶ
ಬಿಜೆಪಿಯ ಸಂಸದರು,ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೂ, ಸಾರ್ವಜನಿಕರ ತೀವ್ರ ಒತ್ತಡ ಮತ್ತು ಆಕ್ರೋಶದ ನಂತರ ಎನ್ನುವುದು ಗಮನಿಸಬೇಕಾದ ಅಂಶ. ತುಳು ಭಾಷಿಗರ ಧ್ವನಿಯಾಗಬೇಕಿದ್ದ ಜನಪ್ರತಿನಿಧಿಗಳು ಸಂಸತ್ತಿನಲ್ಲೋ, ಅಸೆಂಬ್ಲಿಯಲ್ಲೀ ಪ್ರಸ್ತಾವಿಸುವ ಕೆಲಸವನ್ನೂ ಮಾಡಲಿಲ್ಲ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ ಎನ್ನುವುದು ಬೇಸರದ ಸಂಗತಿ. ಮಾಜಿ ಕೇಂದ್ರ ಹಣಕಾಸು (ರಾಜ್ಯ) ಸಚಿವ ಜನಾರ್ಧನ ಪೂಜಾರಿಗಳೂ ಇದರ ಬಗ್ಗೆ ಸೊಲ್ಲೆತ್ತಲಿಲ್ಲ.
ಯು ಟಿ ಖಾದರ್, ರಮಾನಾಥ ರೈ, ಲೋಬೋ
ರಾಜ್ಯ ಸಚಿವ ಯು ಟಿ ಖಾದರ್, ಕಾಂಗ್ರೆಸ್ ಜನಪ್ರತಿನಿಧಿಗಳಾದ ರಮಾನಾಥ ರೈ, ಲೋಬೋ ಮುಂತಾದ ಮುಖಂಡರು ಈ ಬಗ್ಗೆ ಸಣ್ಣ ಪ್ರತಿಭಟನೆ ನಡೆಸಿದ್ದರೂ, ಅದು ಬಿಜೆಪಿಯನ್ನು ಮತ್ತು ಮೋದಿಯವರನ್ನು ದೂರಲು ವೇದಿಕೆಯನ್ನಾಗಿ ಬಳಸಿಕೊಂಡರೇ ಹೊರತು, ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸುವ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿತ್ತು. ಜವನರಿ 9 ರಂದು ಮಂಗಳೂರು ಬಂದ್ಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕರೆ ನೀಡಿತ್ತು, ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಧಾನಿ ತನ್ನ ತವರು ರಾಜ್ಯದ ಬ್ಯಾಂಕನ್ನು ಉಳಿಸುವ ಸಲುವಾಗಿ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ ಎಂದು ಖಾದರ್ ಆರೋಪಿಸಿದರು.
ರಿಟರ್ನ್ ಆಫ್ ಅಸೆಟ್
ವಿಜಯಾ ಬ್ಯಾಂಕಿನ ರಿಟರ್ನ್ ಆನ್ ಅಸೆಟ್ ಬಹಳ ಹೆಚ್ಚಿದೆ, ಅತಿಹೆಚ್ಚು ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಇರುವ ಅತ್ಯಂತ ಸುರಕ್ಷಿತ ಬ್ಯಾಂಕ್ ಇದು. ಒಳ್ಳೆ ಬ್ಯಾಂಕ್ ಎಂಬ ಹಣೆಪಟ್ಟಿಯಿರುವ ಕಾರಣಕ್ಕೇ ವಿಜಯಾ ಬ್ಯಾಂಕ್ ಗೆ ಸಿಕ್ಕುತ್ತಿರುವ ಶಿಕ್ಷೆ ಇದು. ಇತರ ವಿಚಾರಗಳನ್ನು ಇಟ್ಟುಕೊಂಡು ಸಂಸತ್ತಿನ ಹೊರಗಡೆ ಪ್ರತಿಭಟನೆ ಮಾಡುವ ನಮ್ಮ ಜನಪ್ರತಿನಿಧಿಗಳು ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ನಿಲ್ಲಿಸುವುದು ಯಾವಾಗ?