ಊರ್ಜಿತ್ ಪಟೇಲ್ ರಾಜೀನಾಮೆ ಇಲ್ಲ?: ಬಿಕ್ಕಟ್ಟಿಗೆ ತೇಪೆ ಹಚ್ಚಲು ಸರ್ಕಾರದ ಪ್ರಯತ್ನ
ನವದೆಹಲಿ, ನವೆಂಬರ್ 15: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವೆ ಉಂಟಾಗಿರುವ ಮನಸ್ತಾಪಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ನೀತಿ ನಿರ್ಣಯಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕೇಂದ್ರ ಮತ್ತು ಆರ್ಬಿಐ ಜತೆಯಾಗಿ ಕೆಲಸ ಮಾಡುತ್ತಿವೆ. ಹೀಗಾಗಿ ಕಳೆದ ವಾರ ವರದಿಯಾದಂತೆ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕ್ಷೀಣಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವೇ ನಡೆದಿತ್ತು ಮೋದಿ-ಊರ್ಜಿತ್ ಪಟೇಲ್ ಭೇಟಿ!
ಸೋಮವಾರ ನಡೆಯಲಿರುವ ಆರ್ಬಿಐ ಮಂಡಳಿಯ ಸಭೆಯಲ್ಲಿ ಈ ವಿವಾದ ಚರ್ಚೆಗೆ ಬರಲಿದ್ದು, ಅದರೊಳಗೆ ಈಗಾಗಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಹೀಗಾಗಿ ಊರ್ಜಿತ್ ಪಟೇಲ್ ಅವರ ರಾಜೀನಾಮೆ ವಿಚಾರ ತೆರೆಗೆ ಸರಿದಿದೆ ಎನ್ನಲಾಗಿದೆ.
ಕಳೆದ ವಾರ ನರೇಂದ್ರ ಮೋದಿ ಮತ್ತು ಊರ್ಜಿತ್ ಪಟೇಲ್ ನಡುವೆ ನಡೆದ ಸಭೆಯಲ್ಲಿ ಕೆಲವು ಪರಿಹಾರಗಳನ್ನು ತೆಗೆದುಕೊಳ್ಳಲಾಗಿದೆ. ಪಟೇಲ್ ಅವರಿಗೆ ಸರ್ಕಾರದ ದೃಷ್ಟಿಕೋನವನ್ನು ಮೋದಿ ವಿವರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ರೀತಿಯ ಸಭೆ ನಡೆದಿರುವುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಧಾನಿ ಕಚೇರಿ ಮತ್ತು ಆರ್ ಬಿಐ ಮೂಲಗಳು ಹೇಳಿವೆ.
ಆರ್ ಬಿಐನಿಂದ 3.6 ಲಕ್ಷ ಕೋಟಿ ಕೇಳುತ್ತಿಲ್ಲ, ಕೇಂದ್ರದಿಂದ ಸ್ಪಷ್ಟನೆ
ನವೆಂಬರ್ನಲ್ಲಿ 40,000 ಕೋಟಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಆರ್ಬಿಐ ತಿಳಿಸಿತ್ತು. ಅದರ ಮೊದಲ ಹಂತವಾಗಿ ನವೆಂಬರ್ 15ರಂದು 12,000 ಕೋಟಿಯನ್ನು ಬಿಡುಗಡೆ ಮಾಡಲಿದೆ.
ತೆರೆದ ಮಾರುಕಟ್ಟೆ ಕಾರ್ಯಾಚರಣೆಗಳ ಮೂಲಕ ಸರ್ಕಾರದ ಭದ್ರತೆಗಳನ್ನು ಖರೀದಿ ಮಾಡಲು ನಿರ್ಧರಿಸಿರುವುದಾಗಿ ಆರ್ಬಿಐ ತಿಳಿಸಿದೆ. ಅಕ್ಟೋಬರ್ನಲ್ಲಿ ಆರ್ಬಿಐ ಮಾರುಕಟ್ಟೆಗೆ 36,000 ಕೋಟಿ ರೂ.ಅನ್ನು ಬಿಡುಗಡೆ ಮಾಡಿತ್ತು.
ಆರ್ ಬಿಐ ಗವರ್ನರ್ ಹುದ್ದೆಗೆ ನ. 19ರಂದು ಊರ್ಜಿತ್ ಪಟೇಲ್ ರಾಜೀನಾಮೆ?
ಕೆಲವು ಬ್ಯಾಂಕುಗಳ ಸಾಲ ನೀಡಿಗೆ ನಿಯಮಗಳನ್ನು ಸಡಿಲಿಸುವುದನ್ನು ಆರ್ ಬಿಐ ಪರಿಗಣನೆಗೆ ತೆಗೆದುಕೊಂಡಿದೆ. 11 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲ ನೀಡುವಿಕೆ, ಕೆಟ್ಟ ಸಾಲವನ್ನು ಕಡಿಮೆಗೊಳಿಸಲು ಬೇಡಿಕೆ ಇರಿಸುವಿಕೆ ಮತ್ತು ಲಾಭ ಗಳಿಕೆಯ ಮೇಲೆ ಅದು ನಿರ್ಬಂಧ ಹೇರಿತ್ತು.