ಮಧ್ಯಂತರ ಬಜೆಟ್ ಮನವೊಲಿಕೆಯದ್ದಲ್ಲ, ಅನಾರೋಗ್ಯದ ಮಧ್ಯೆಯೂ ಜೇಟ್ಲಿ ಹೇಳಿದ್ದೇನು?
ಫೆಬ್ರವರಿ 1ನೇ ತಾರೀಕು ಮಂಡಿಸಲಿರುವ ಕೇಂದ್ರದ ಮಧ್ಯಂತರ ಬಜೆಟ್ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸುವುದಿಲ್ಲ. ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಅದರಲ್ಲೂ ಕೃಷಿ ವಲಯದ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.
ಟಿ.ವಿ. ಚಾನಲ್ ವೊಂದು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರ ವಿಡಿಯೋ ಲಿಂಕ್ ವೊಂದು ಬಂದಿದೆ. ಇದರ ಜತೆಗೆ ಅನಾರೋಗ್ಯದ ಕಾರಣಕ್ಕೆ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸುವುದಕ್ಕೆ ಸಾಧ್ಯವಾ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲೆಂದು ವಿಪಕ್ಷ ನಾಯಕರ ಹಾರೈಕೆ
ಈಚೆಗಷ್ಟೇ ವೈದ್ಯಕೀಯ ತಪಾಸಣೆ ಸಲುವಾಗಿ ಅರುಣ್ ಜೇಟ್ಲಿ ನ್ಯೂಯಾರ್ಕ್ ತೆರಳಿದ್ದಾರೆ. ಆದರೆ ತಮ್ಮ ಮಾತಿನ ವೇಳೆ ಬಜೆಟ್ ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ ಎಂಬುದೇನೂ ಅವರು ಹೇಳಿಲ್ಲ. ಚುನಾವಣೆ ವರ್ಷದಲ್ಲಿ ಮಂಡಿಸುವುದಾದರಿಂದ ಇದು ಮಧ್ಯಂತರ ಬಜೆಟ್. ದೇಶದ ಹಿತಾಸಕ್ತಿಯಿಂದ ಏನೆಲ್ಲ ಒಳಗೊಂಡಿರಬೇಕೋ ಅವೆಲ್ಲವನ್ನೂ ಈ ಮಧ್ಯಂತರ ಬಜೆಟ್ ಒಳಗೊಂಡಿರುತ್ತದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.
ಕೃಷಿ ವಲಯಕ್ಕೆ ಪ್ರೋತ್ಸಾಹ ನೀಡುವ ಘೋಷಣೆಗಳು
ಸದ್ಯದ ಸವಾಲುಗಳ ಪೈಕಿ ಕೃಷಿ ವಲಯ ಕೂಡ ಒಂದು. ಆದ್ದರಿಂದ ಈ ಸಂಬಂಧ ಗಟ್ಟಿಯಾದ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚಿನ ಉತ್ಪಾದನೆ ಸಮಸ್ಯೆ ಹಾಗೂ ಮುಖ್ಯ ಕೃಷಿ ಉತ್ಪನ್ನಗಳಲ್ಲಿನ ಬೆಲೆಯಲ್ಲಿ ನಿಧಾನ ಗತಿಯ ಏರಿಕೆ ಬಗ್ಗೆ ಗಮನ ಹರಿಸಬೇಕಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಕೃಷಿ ವಲಯದ ಮೇಲೆ ಅವಲಂಬಿತವಾಗಿದೆ. ಆದರೆ ಜಿಡಿಪಿಯಲ್ಲಿ ಅದರ ಕೊಡುಗೆ ಐದನೇ ಒಂದು ಭಾಗಕ್ಕಿಂತ ಕಡಿಮೆ ಇದೆ. ಆದರೆ ಕೃಷಿ ವಲಯಕ್ಕೆ ಸೂಕ್ತ ಪ್ರೋತ್ಸಾಹ ನೀಡುವ ಘೋಷಣೆಗಳನ್ನು ಸರಕಾರವು ಈ ಬಾರಿ ಬಜೆಟ್ ನಲ್ಲಿ ಮಾಡಲೇಬೇಕು. ಇತ್ತೀಚಿನ ವಾರಗಳಲ್ಲಿ ಹೊಸ ಸುದ್ದಿ ಬೇರೆ ಹರಿದಾಡುತ್ತಿದೆ. ಮಧ್ಯಮ ವರ್ಗದವರ ಓಲೈಕೆಗಾಗಿ ವೇತನ ಪಡೆಯುವ ವರ್ಗದವರಿಗೆ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಬಹುದು ಎಂಬ ಸುದ್ದಿ ಅದು.
ಕೃಷಿ ಸಾಲ ಮನ್ನಾಕ್ಕೆ ಮೋದಿ ಸರಕಾರ ಒಪ್ಪಿಕೊಂಡಿಲ್ಲ
ಆದರೆ, ಆರ್ಥಿಕ ಸ್ಥಿರತೆಗೆ ನಾವು ಕಟಿ ಬದ್ಧರಾಗಿದ್ದೇವೆ ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಸರಕಾರಗಳು ಆರ್ಥಿಕ ಶಿಸ್ತು ಅನುಸರಿಸದೆ ಆದ ಪರಿಣಾಮಗಳನ್ನು ನಾವು ನೋಡಿದ್ದೇವೆ ಎಂದು ಕೂಡ ಸೇರಿಸಿದ್ದಾರೆ. ಈ ಮಧ್ಯೆ ರಾಷ್ಟ್ರ ಮಟ್ಟದಲ್ಲಿ ಕೃಷಿ ಸಾಲ ಮನ್ನಾ ಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆ ಬೇಡಿಕೆಗೆ ಈ ವರೆಗೆ ನರೇಂದ್ರ ಮೋದಿ ಸರಕಾರ ಒಪ್ಪಿಲ್ಲ. ಪ್ರಗತಿ ದರವನ್ನು ಎಂಟು ಪರ್ಸೆಂಟ್ ಗೆ ಹೆಚ್ಚಿಸಬೇಕು ಎಂಬ ನಿರೀಕ್ಷೆ ಬಗ್ಗೆ ಮಾತನಾಡಿರುವ ಅವರು, ನಕಾರಾತ್ಮಕ ರಾಜಕಾರಣದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಕಾರಾತ್ಮಕತೆಯ ನವಾಬರೆಲ್ಲ ಒಟ್ಟಿಗೆ ಬಂದರೂ ಜತೆಯಾಗಿರಲು ಸಾಧ್ಯವಿಲ್ಲ ಅಥವಾ ಅವರು ವಿಶ್ವಾಸಾರ್ಹತೆ ಹೊಂದಿಲ್ಲ.
ಜಗತ್ತಿನ ಉಳಿದ ರಾಷ್ಟ್ರಗಳಿಗಿಂತ ಹೆಚ್ಚಿನ ಬಡ್ಡಿ ಇಲ್ಲಿರಬಾರದು
ಹಣದುಬ್ಬರ ಕಡಿಮೆ ಆಗಿರುವುದರ ಹಿನ್ನೆಲೆಯಲ್ಲಿ ಬಡ್ಡಿ ದರ ಇಳಿಕೆ ಆಗಬಹುದಾ ಎಂಬ ಪ್ರಶ್ನೆಗೆ, ಯಾವುದೇ ಸಬೂಬುಗಳನ್ನು ಹೇಳದೆ ಆರ್ಥಿಕ ನೀತಿ ಬದಲಿಸಿಕೊಳ್ಳುವ ಅಗತ್ಯ ಆರ್ ಬಿಐಗೆ ಇತ್ತು. ಜಗತ್ತಿನ ಯಾವುದೇ ರಾಷ್ಟ್ರಗಳಿಗಿಂತ ಹೆಚ್ಚಿನ ಬಡ್ಡಿ ದರ ನಮ್ಮಲ್ಲಿ ಇರಬಾರದು. ಆದ್ದರಿಂದ ಈಗಾಗಲೇ ಆರ್ ಬಿಐ ಭಾಗೀದಾರರ ಜತೆಗಿನ ಚರ್ಚೆ ಶುರುವಾಗಿದೆ ಎಂದಿದ್ದಾರೆ.
ಊರ್ಜಿತ್ ಪಟೇಲ್ ರಾಜೀನಾಮೆ ಪ್ರಹಸನ
ತಮ್ಮ ಅಧಿಕಾರಾವಧಿ ಮುಗಿಯುವ ಒಂಬತ್ತು ತಿಂಗಳ ಮುಂಚೆಯೇ ಈ ಹಿಂದಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಾಜೀನಾಮೆ ನೀಡಿದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಬ್ಯಾಂಕ್ ಹಾಗೂ ಕೇಂದ್ರ ಸರಕಾರದ ಮಧ್ಯೆ ಆಗಾಗ ವಿವಿಧ ದೃಷ್ಟಿಕೋನಗಳು ಇರುತ್ತವೆ. ಆದರೆ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.