ಆರ್ಥಿಕ ಸಮೀಕ್ಷೆ ಮಂಡನೆ: ಶೇ 7ರ ಜಿಡಿಪಿ ಬೆಳವಣಿಗೆ ನಿರೀಕ್ಷೆ
ನವದೆಹಲಿ, ಜುಲೈ: ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೂ ಒಂದು ದಿನ ಮುನ್ನ ದೇಶದ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಲಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ಅವರು ತಮ್ಮ ಮೊದಲ ಹಾಗೂ ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಚೊಚ್ಚಲ ಆರ್ಥಿಕ ಸಮೀಕ್ಷೆಯನ್ನು ಸಂಸತ್ಗೆ ಸಲ್ಲಿಸಿದ್ದಾರೆ.
ಕೇಂದ್ರ ಬಜೆಟ್: ನಿಮಗೆ ತಿಳಿದಿರಬೇಕಾದ 5 ಪ್ರಮುಖ ಸಂಗತಿಗಳು
2019ನೇ ಬಜೆಟ್ ಜುಲೈ 5ರಂದು ಮಂಡನೆಯಾಗಲಿದೆ. ಅದಕ್ಕೂ ಮುನ್ನ ಗುರುವಾರ ಸುಬ್ರಮಣಿಯನ್ ಅವರು ಸಲ್ಲಿಸಿರುವ 2018-19ರ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ 2019-2020ರ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ದರವನ್ನು ಶೇ 7ರಷ್ಟು ಅಂದಾಜಿಸಲಾಗಿದೆ.
ದೇಶದ ಜಿಡಿಪಿ ದರದಲ್ಲಿ ಇಳಿಕೆಯಾಗಿದ್ದು, ನಿರುದ್ಯೋಗದ ಪ್ರಮಾಣದ ತೀವ್ರಗತಿಯಲ್ಲಿ ಏರಿಕೆಯಾಗಿದೆ ಎಂದು ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಅಂಕಿ ಅಂಶಗಳು ಮಾಹಿತಿ ನೀಡಿರುವುದರಿಂದ 2019ರ ಆರ್ಥಿಕ ಸಮೀಕ್ಷೆ ಮತ್ತು ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣು ಕೇಂದ್ರೀಕರಿಸಿದೆ.
ಭಾರತದ ಭವಿಷ್ಯದ ಆರ್ಥಿಕತೆ ಸ್ಥಿತಿಗತಿ ಮತ್ತು ಮುಂದಿನ ಸವಾಲುಗಳ ಸಾಧ್ಯತೆಗಳ ಬಗ್ಗೆ ಆರ್ಥಿಕ ಸಮೀಕ್ಷೆ ಮಾಹಿತಿ ನೀಡಿದೆ. ಉದ್ಯೋಗ, ಕೃಷಿ ವಲಯ, ಉತ್ಪಾದಕತೆ, ಸೇವೆಗಳು, ಶಿಕ್ಷಣ ಸೇರಿದಂತೆ ವಿವಿಧ ಎಲ್ಲ ಕ್ಷೇತ್ರಗಳಲ್ಲಿನ ಏರಿಳಿತಗಳ ಬಗ್ಗೆ ಸಮೀಕ್ಷೆ ಮಾಹಿತಿ ಒದಗಿಸಿದೆ.
ಬಜೆಟ್ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಮಾಹಿತಿಯ ಸರಳ ವಿವರಣೆ
ಆರ್ಥಿಕ ಸಮೀಕ್ಷೆಯು ಭಾರತಕ್ಕೆ ಸೂಕ್ತ ಆರ್ಥಿಕ ಮಾದರಿಯನ್ನು ತಯಾರಿಸುವ ಉದ್ದೇಶದಿಂದ 'ನೀಲಾಕಾಶದ ಚಿಂತನೆ'ಯ ಉತ್ಸಾಹದಿಂದ ಮೂಡಿರುವುದು. ಇದನ್ನು ಸಮೀಕ್ಷೆ ವರದಿಯ ಆಕಾಶ ನೀಲಿ ಬಣ್ಣದ ಮುಖಪುಟದಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2025ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ತಲುಪಬೇಕೆಂದು ಗುರಿ ಹೊಂದಿರುವುದಾಗಿ ಪ್ರಕಟಿಸಿದ್ದರು. ಈ ನಿಟ್ಟಿನಲ್ಲಿ ಗುರಿ ಸಾಧಿಸಲು ಭಾರತ ಸರಾಸರಿ ಶೇ 8ರ ಜಿಡಿಪಿ ಬೆಳವಣಿಗೆ ದರ ಹೊಂದಿರಬೇಕಾಗುತ್ತದೆ.
ಆಂತರಿಕ ಉತ್ಪನ್ನ (ಜಿಡಿಪಿ) ಶೇ 7
ಬೃಹತ್ ಆರ್ಥಿಕ ಸ್ಥಿತಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 7ರ ಸ್ಥಿರ ದರದಲ್ಲಿ ಇರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ವರ್ಷ ಶೇ 6.8ರ ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿತ್ತು. ಈ ಮಟ್ಟದ ಬೆಳವಣಿಗೆಯು ಚೀನಾವನ್ನು ಹಿಂದಿಕ್ಕುವ ಮೂಲಕ ಜಗತ್ತಿನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ಪಟ್ಟವನ್ನು ಭಾರತ ಮರಳಿಪಡೆದುಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
2018-19ರ ವಿತ್ತೀಯ ಕೊರತೆಯನ್ನು ಆರ್ಥಿಕ ಸಮೀಕ್ಷೆಯು ಶೇ 5.8ಕ್ಕೆ ನಿಗದಿಪಡಿಸಿದೆ. ಇದು ಪರಿಷ್ಕೃತ ಬಜೆಟ್ ಅಂದಾಜಿಸಿದ್ದ ಶೇ 3.4ಕ್ಕಿಂತ ಅಧಿಕವಾಗಿದೆ.
ಪಿಎಫ್ಐ ನಿರ್ಬಂಧ ಸಡಿಲಿಕೆ
ಪ್ರಸಕ್ತ ಸಾಲಿನಲ್ಲಿನ ಜಿಡಿಪಿ ಇಳಿಕೆಯಾದರೆ ಕಂದಾಯ ಸಂಗ್ರಹಕ್ಕೆ ಹಿನ್ನಡೆಯುಂಟಾಗಲಿದೆ. 2018ರ ಮಧ್ಯ ಭಾಗದಿಂದ ಗ್ರಾಮೀಣ ಭಾಗದ ಕೂಲಿ ಬೆಳವಣಿಗೆಯಲ್ಲಿ ಏರಿಕೆಯಾಗಿದೆ. ಆರ್ಥಿಕತೆಗೆ ಉಳಿತಾಯ, ಹೂಡಿಕೆ, ರಫ್ತು ಮತ್ತು ಹೂಡಿಕೆಯೊಂದಿಗಿನ ಬೆಳವಣಿಗೆಯ ಚಕ್ರದ ಅಗತ್ಯವಿದೆ. ಉಳಿತಾಯ ಮತ್ತು ಬೆಳವಣಿಗೆ ಪರಸ್ಪರ ಸಕಾರಾತ್ಮಕವಾಗಿ ನಂಟು ಹೊಂದಿವೆ.
ವಿದೇಶಿ ನೇರ ಹೂಡಿಕೆ (ಪಿಎಫ್ಐ) ಮೇಲಿರುವ ಇನ್ನೂ ಅನೇಕ ನಿಯಂತ್ರಣಗಳನ್ನು ತೆಗೆದುಹಾಕುವಂತೆ ಸರ್ಕಾರಕ್ಕೆ ಸಮೀಕ್ಷೆ ಮನವಿ ಮಾಡಿದೆ. ಹೂಡಿಕೆಯು ಆರ್ಥಿಕಾಭಿವೃದ್ಧಿಗೆ ಪ್ರಮುಖವಾಗಿದ್ದು, ಸಣ್ಣ ಉದ್ದಿಮೆಗಳ ಮೇಲೆ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ.
ದಾಖಲೆ ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಮುಂದಾದ ಮೋದಿ ಸರ್ಕಾರ
ಜನರು ಜನರಿಂದ ಜನರಿಗಾಗಿ...
ಊಹಿಸಲು ಸಾಧ್ಯವಾಗದ ಜಗತ್ತಿನಲ್ಲಿ ನೀತಿ ನಿರೂಪಣೆಗೆ 1. ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ಮುಟ್ಟಿಸಲು ಸ್ಪಷ್ಟ ದೃಷ್ಟಿಕೋನ 2. ಕಾರ್ಯತಂತ್ರದ ನೀಲನಕ್ಷೆ: ಆರ್ಥಿಕ ಸಮೀಕ್ಷೆ 3. ಪ್ರಸ್ತುತದ ಮಾಹಿತಿಗಳ ಆಧಾರದಲ್ಲಿ ಸ್ಥಿರ ಮಾಪನಾಂಕ ನಿರ್ಣಯಕ್ಕೆ ತಾಂತ್ರಿಕ ಸಾಧನಗಳು ಬೇಕು. ಸಾರ್ವಜನಿಕ ಒಳಿತಿಗಾಗಿ 'ಜನರು, ಜನರಿಂದ, ಜನರಿಗಾಗಿ' ಮಾಹಿತಿಗಳನ್ನು ಸಿದ್ಧಪಡಿಸಬೇಕು ಎಂದು ಕೆವಿ ಸುಬ್ರಮಣಿಯನ್ ಹೇಳಿದ್ದಾರೆ.
ಎಂಎಸ್ಎಂಇಗಳಿಗೆ ಮುಕ್ತ ಅವಕಾಶ ಬೇಕು
ಭಾರತದ ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳನ್ನು ಕುಬ್ಜಗೊಳಿಸುವ ಅಡೆತಡೆಗಳಿಂದ ಮುಕ್ತಗೊಳಿಸಬೇಕಿದೆ. ಎಂಎಸ್ಎಂಇಗಳನ್ನು ಆವಿಷ್ಕಾರ, ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೂಲಗಳನ್ನಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದ್ದಾರೆ.
ಕಿರಿದಾದ ತರ್ಕಬದ್ಧ ಲೆಕ್ಕಾಚಾರಗಳಿಗಿಂತ ನೈಜ ಜನರು ಸಂದರ್ಭಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ. ಮುನ್ನಡೆಯುವ ವರ್ತನೆಯು ಲಿಂಗ ಸಮಾನತೆ, ವ್ಯವಹಾರ ಸಂಸ್ಕೃತಿ, ನೈರ್ಮಲ್ಯ ಸಂಸ್ಕೃತಿ, ಆರೋಗ್ಯ ಸಂಸ್ಕೃತಿ ಮುಂತಾದವುಗಳನ್ನು ಸರಳವಾಗಿ ಬದಲಿಸಬಲ್ಲದು ಎಂದು ಸುಬ್ರಮಣಿಯನ್ ಹೇಳಿದ್ದಾರೆ.
ಗುರಿ ದೊಡ್ಡದು, ಆದರೆ ಅಸಾಧ್ಯವಲ್ಲ!
ಐದು ಟ್ರಿಲಿಯನ್ ಆರ್ಥಿಕತೆಯ ಗುರಿಗೆ ಇರುವ ಅತಿ ದೊಡ್ಡ ಅಡ್ಡಿ ಎಂದರೆ ಒಪ್ಪಂದಗಳ ದುರ್ಬಲ ಅಳವಡಿಕೆ ಮತ್ತು ವಿವಾದ ನಿರ್ಣಯಗಳು. ಕಾನೂನು ಪ್ರಕ್ರಿಯೆಯನ್ನು ವೇಗಗೊಳಿಸುವುದು ಪ್ರಮುಖ ಆದ್ಯತೆಯಾಗಬೇಕು. ದೇಶದಲ್ಲಿ 3.53 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಈ ಗುರಿ ಸಾಧಿಸಲು ದಕ್ಷತೆ ಮತ್ತು ನೇಮಕಾತಿ ದೊಡ್ಡ ಪ್ರಮಾಣದಲ್ಲಿ ಅಗತ್ಯವಿದೆ. ಆದರೆ, ಇದು ಅಸಾಧ್ಯವೇನಲ್ಲ. ಪ್ರಾಣಿಗಳ ಉತ್ಸಾಹದೊಂದಿಗೆ ಮುನ್ನಡೆದರೆ ಇದು ಸಾಧ್ಯ.
ಬಯಲು ಶೌಚ ಮುಕ್ತ ಹಳ್ಳಿಗಳು
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ 9.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ 5.5 ಬಯಲು ಶೌಚಮುಕ್ತ ಹಳ್ಳಿಗಳಿವೆ. ಸ್ವಚ್ಛ ಭಾರತ ಅಭಿಯಾನದ ನೆರವಿನ ಮೂಲಕ 93.1% ಸಮುದಾಯಗಳು ಶೌಚಾಲಯದ ಸೌಲಭ್ಯ ಪಡೆದುಕೊಂಡಿವೆ. ಬಯಲು ಶೌಚಾಲಯದ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಅತಿಸಾರ ಮತ್ತು ಮಲೇರಿಯಾದಂತಹ ರೋಗಗಳು ಕಡಿಮೆಯಾಗಿವೆ.
ವಾಹನಗಳ ಮಾರಾಟಕ್ಕೆ ಹಿನ್ನಡೆ
ಆರ್ಥಿಕ ಸಮೀಕ್ಷೆಯು 2018-19ನೇ ಸಾಲಿನಲ್ಲಿ 283.4 ಮಿಲಿಯನ್ ಟನ್ಗಳಷ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ನಿರೀಕ್ಷಿಸಿದೆ. ಇದು ಕಳೆದ ಸಾಲಿಗಿಂತ ಕಡಿಮೆಯಾಗಿದೆ. 2017-18ರ ಸಾಲಿನಲ್ಲಿ 285 ಮಿಲಿಯನ್ ಟನ್ ಅಹಾರ ಧಾನ್ಯ ಉತ್ಪಾದನೆ ಅಂದಾಜಿಸಲಾಗಿತ್ತು.
ಬೃಹತ್ ಆರ್ಥಿಕತೆಯ ಸ್ಥಿರತೆ, ಫಲಾನುಭವಿಗಳತ್ತ ಗಮನ ಮತ್ತು ಯೋಜನೆಗಳನ್ನು ತಲುಪಿಸುವಿಕೆ, ಮೂಲಸೌಕರ್ಯ ಅಭಿವೃದ್ಧಿ, ವಿತ್ತೀಯ ವ್ಯವಸ್ಥೆಗಳನ್ನು ಕಳೆದ ಐದು ವರ್ಷಗಳಲ್ಲಿ ಸಾಧಿಸಲಾಗಿದೆ. ಗ್ರಾಹಕ ದರ ಸೂಚ್ಯಂಕವು 2017-18ನೇ ಸಾಲಿನ ಶೇ 3.6ರಿಂದ 2018-19ನೇ ಸಾಲಿನಲ್ಲಿ ಶೇ 3.4ಕ್ಕೆ ಕುಸಿದಿದೆ.
ಆಟೊಮೊಬೈಲ್ ವಲಯದ ಅನೇಕ ವಿಭಾಗಗಳಲ್ಲಿ ಮಾರಾಟ ಬೆಳವಣಿಗೆ ಕುಗ್ಗಿದೆ. ಇದರಲ್ಲಿ ಪ್ರಯಾಣಿಕ ವಾಹನಗಳು, ಟ್ರ್ಯಾಕ್ಟರ್, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳು ಸೇರಿವೆ.
ಹವಾಮಾನ ಬದಲಾವಣೆ ವಿಚಾರಕ್ಕೆ ಗಮನ
ಹವಾಮಾನ ಬದಲಾವಣೆಗೆ ರಾಷ್ಟ್ರೀಯ ಕಾರ್ಯ ಯೋಜನೆ (ಎನ್ಎಪಿಸಿಸಿ) ಸೇರಿದಂತೆ ಹವಾಮಾನ ಬದಲಾವಣೆಯ ಕುರಿತು ಗಮನ ಹರಿಸಲು ಪ್ರಮುಖ ಯೋಜನೆಗಳು ಮತ್ತು ನೀತಿಗಳನ್ನು ರೂಪಿಸಲಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಕೇರಳ ಮತ್ತು ಹಿಮಾಚಲ ಪ್ರದೇಶ ಮುಂಚೂಣಿಯಲ್ಲಿವೆ. 2014ರಲ್ಲಿ ಜಾರಿಯಾದ ಹವಾಮಾನ ಬದಲಾವಣೆ ಕಾರ್ಯ ಯೋಜನೆಗೆ 290 ಕೋಟಿ ರೂ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. 2017-18ರಿಂದ 2019-20ರವರೆಗೆ ಮೂರು ವರ್ಷಗಳಲ್ಲಿ ಇದಕ್ಕಾಗಿ 132.40 ಕೋಟಿ ರೂ. ವೆಚ್ಚದಲ್ಲಿ ಸಿಸಿಎಪಿ ಯೋಜನೆಯನ್ನು ಬಜೆಟ್ನಲ್ಲಿ ನೀಡಲಾಗಿತ್ತು.