ಉಕ್ರೇನ್ ಯುದ್ಧದಿಂದಾಗಿ ಭಾರತದಲ್ಲಿ ಅಡುಗೆ ಎಣ್ಣೆ ಕೊರತೆ?
ನವದೆಹಲಿ, ಮಾರ್ಚ್ 09: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ನಡುವೆ ಅದರ ಪರಿಣಾಮವು ವಿಶ್ವದ ಹಲವಾರು ದೇಶಗಳ ಮೇಲೆ ಬೀರುತ್ತಿದೆ. ಭಾರತದ ಮೇಲೆಯೂ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಬೀರುತ್ತಿದೆ. ಉಕ್ರೇನ್ ಯುದ್ಧದ ನಡುವೆ ಭಾರತೀಯರು ಅಡುಗೆ ಎಣ್ಣೆ, ಇಂಧನ ಕೊರತೆಯ ಆತಂಕವನ್ನು ಎದುರಿಸುತ್ತಿದ್ದಾರೆ.
ಭಾರತವು ತನ್ನ ಸೂರ್ಯಕಾಂತಿ ಎಣ್ಣೆಯ ಶೇಕಡಾ 90 ಕ್ಕಿಂತ ಹೆಚ್ಚು ರಷ್ಯಾ ಮತ್ತು ಉಕ್ರೇನ್ನಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಉಭಯ ರಾಷ್ಟ್ರಗಳಲ್ಲಿ ಯುದ್ಧದ ಹಿನ್ನೆಲೆಯಿಂದಾಗಿ ಭಾರತದಲ್ಲಿ ಖಾದ್ಯ ತೈಲದ ಕೊರತೆಯನ್ನು ಉಂಟುಮಾಡಬಹುದು ಎಂಬ ಆತಂಕ ಉಂಟಾಗಿದೆ. ಈಗಾಗಲೇ ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆ ಆಮದನ್ನು ಸ್ಥಗಿತ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಲವಾರು ಮಂದಿ ಈಗಲೇ ಎಣ್ಣೆಗಳನ್ನು ಸಂಗ್ರಹ ಮಾಡಲು ಆರಂಭ ಮಾಡಿದ್ದಾರೆ.
ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತ, ಮುಂದೇನು?
ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯ ನಡುವೆ ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳು ಮುಕ್ತಾಯವಾದ ಹಿನ್ನೆಲೆ ಭಾರತದಲ್ಲಿ ಇಂಧನ ಬೆಲೆಯು ತೀವ್ರ ಮಟ್ಟದಲ್ಲಿ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಾಟ್ಸಾಪ್ನಲ್ಲೂ ಕೆಲವು ಸಂದೇಶಗಳು ಹರಿದಾಡುತ್ತಿದೆ.
ವಾಟ್ಸಾಪ್ನಲ್ಲಿ ಏನು ಹರಿದಾಡುತ್ತಿದೆ?
ವಾಟ್ಸಾಪ್ನಲ್ಲಿ, ಯುದ್ಧದ ಕಾರಣ ಅಡುಗೆ ಎಣ್ಣೆಯ ಕೊರತೆ ಉಂಟಾಗಬಹುದು ಎಂಬ ಸಂದೇಶಗಳು ಹರಿದಾಡುತ್ತಿದೆ. ಈ ಕಾರಣದಿಂದಾಗಿ ಜನರು ಆತಂಕಕ್ಕೆ ಒಳಗಾಗಿ ಈಗಲೇ ಎಣ್ಣೆಯನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಆದರೆ ಜನರು ಅಗತ್ಯಕ್ಕಿಂತ ಹೆಚ್ಚು ಎಣ್ಣೆಯನ್ನು ಸಂಗ್ರಹ ಮಾಡಿಕೊಳ್ಳುವ ಕಾರಣದಿಂದಾಗಿಯೇ ಅಡುಗೆ ಎಣ್ಣೆ ಕೊರತೆ ಉಂಟಾಗಬಹುದು. ಇದರಿಂದಾಗಿ ತೈಲ ಬೆಲೆಯು ಏರಿಕೆ ಆಗಬಹುದು.
ಈ ಬಗ್ಗೆ ಮಾತನಾಡಿದ ಮುಂಬೈ ಮೂಲದ ಗೃಹಿಣಿ ರೇಖಾನಾ ಖಾನ್, "ವಾಟ್ಸಾಪ್ನಲ್ಲಿ, ಯುದ್ಧದ ಕಾರಣ ಅಡುಗೆ ಎಣ್ಣೆಯ ಕೊರತೆ ಉಂಟಾಗಬಹುದು ಎಂಬ ಸಂದೇಶಗಳನ್ನು ನಾನು ಓದಿದ್ದೇನೆ. ಹಾಗಾಗಿ, ನಾನು ಎಣ್ಣೆಯನ್ನು ಖರೀದಿಸಲು ಧಾವಿಸಿದ್ದೇನೆ," ಎಂದು ತಿಳಿಸಿದ್ದಾರೆ. ಈ ಮಹಿಳೆಯು 10 ಲೀಟರ್ ಖಾದ್ಯ ಎಣ್ಣೆಯನ್ನು ಖರೀದಿ ಮಾಡಿದ್ದಾರೆ. ತಾವು ಮಾಸಿಕ ಖರೀದಿ ಮಾಡುವುದಕ್ಕಿಂತ ಐದು ಪಟ್ಟು ಅಧಿಕ ಎಣ್ಣೆಯನ್ನು ಖರೀದಿ ಮಾಡಿದ್ದಾರೆ.
ರಷ್ಯಾ- ಉಕ್ರೇನ್ ಯುದ್ಧೋನ್ಮಾದ: ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಸಾಧ್ಯತೆ!
ಜನರಲ್ಲಿ ಆತಂಕ ಸೃಷ್ಟಿ ಮಾಡಿದ ವಾಟ್ಸಾಪ್ ಸಂದೇಶ
ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಸಾಮಾಜಿಕ ಮಾಧ್ಯಮದಲ್ಲಿನ ಕೊರತೆಯ ಬಗ್ಗೆ ನಕಲಿ ವೈರಲ್ ಸಂದೇಶಗಳು ಕೂಡಾ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಆತಂಕಕ್ಕೆ ಒಳಾಗಾಗಿದ್ದಾರೆ. ಅಗತ್ಯಕ್ಕಿಂತ ಅಧಿಕ ಖರೀದಿ ಮಾಡಲು ಜನರು ಮುಂದಾಗಿದ್ದು, ಇದರಿಂದಾಗಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ಜನರು ಅಗತ್ಯಕ್ಕಿಂತ ಅಧಿಕ ಎಣ್ಣೆಯನ್ನು ಈಗಲೇ ಸಂಗ್ರಹ ಮಾಡುವುದರಿಂದ ಮೂರನೇ ಎರಡರಷ್ಟು ಬೇಡಿಕೆಯು ಅಧಿಕವಾಗಲಿದೆ.
ರಷ್ಯಾ, ಉಕ್ರೇನ್ನಿಂದ ಆಮದು
ಭಾರತವು ತನ್ನ ಸೂರ್ಯಕಾಂತಿ ಎಣ್ಣೆಯ ಶೇಕಡಾ 90 ಕ್ಕಿಂತ ಹೆಚ್ಚು ರಷ್ಯಾ ಮತ್ತು ಉಕ್ರೇನ್ನಿಂದ ಆಮದು ಮಾಡಿಕೊಳ್ಳುತ್ತದೆ. ಆದರೂ ಸೂರ್ಯಕಾಂತಿ ಎಣ್ಣೆಯು ಅದರ ಒಟ್ಟು ಖಾದ್ಯ ತೈಲ ಆಮದುಗಳಲ್ಲಿ ಸುಮಾರು 14 ಪ್ರತಿಶತವನ್ನು ಹೊಂದಿದೆ. ಇತರ ಖಾದ್ಯ ತೈಲಗಳಾದ ತಾಳೆ, ಸೋಯಾ, ರೇಪ್ಸೀಡ್ ಎಣ್ಣೆ ಮತ್ತು ನೆಲಗಡಲೆಯ ಸರಬರಾಜುಗಳು ಸಾಕಾಗುತ್ತದೆ. ಭಯಪಡುವ ಅಗತ್ಯವಿಲ್ಲ ಎಂದು ಮುಂಬೈ ಮೂಲದ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಮೆಹ್ತಾ ಹೇಳಿದ್ದಾರೆ.
ಈ ನಡುವೆ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳ ಮಧ್ಯೆ, ದೇಶೀಯ ಮಾರುಕಟ್ಟೆಯನ್ನು ನಿಯಂತ್ರಿಸುವ ಸರ್ಕಾರಿ ತೈಲ ಕಂಪನಿಗಳು ನವೆಂಬರ್ 4 ರಿಂದ ಬೆಲೆಗಳನ್ನು ಹೆಚ್ಚಿಸಿಲ್ಲ. (ಒನ್ಇಂಡಿಯಾ ಸುದ್ದಿ)
Recommended Video