ಏಪ್ರಿಲ್ 1ರಿಂದ ಏನೆಲ್ಲ ಬದಲಾಗಲಿದೆ?: ನಿಮಗೆ ತಿಳಿದಿರಬೇಕಾದ 5 ಪ್ರಮುಖ ಸಂಗತಿಗಳು
ನವದೆಹಲಿ, ಮಾರ್ಚ್ 27: ಇನ್ನೇನು ಮಾರ್ಚ್ ತಿಂಗಳು ಕೊನೆಯಾಗುತ್ತಿದೆ. 2020-21ರ ಆರ್ಥಿಕ ವರ್ಷವೂ ಮುಗಿಯುತ್ತಿದ್ದು, ಏಪ್ರಿಲ್ ತಿಂಗಳಿನಿಂದ 2021-22 ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ.
ಈ ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಕೆಲವು ಬಹುದೊಡ್ಡ ಮಾರ್ಪಾಡುಗಳೂ ಆಗುತ್ತಿವೆ. ವ್ಯಕ್ತಿಯ ವೈಯಕ್ತಿಕ ಆರ್ಥಿಕತೆ, ಆದಾಯದ ಮೇಲೂ ಪರಿಣಾಮ ಬೀರಬಹುದಾದ ಈ ಅಂಶಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಿದೆ. ಅಡುಗೆ ಅನಿಲ ದರದಲ್ಲಿ ಬದಲಾವಣೆ, ಬ್ಯಾಂಕಿಂಗ್ ನಿಯಮಗಳು, ತೆರಿಗೆ ನಿಯಮಗಳು, ಟಿಡಿಎಸ್/ಟಿಸಿಎಸ್ ಕಡಿತ ಹೀಗೆ ಕೆಲವು ಪ್ರಮುಖ ಅಂಶಗಳು ಏಪ್ರಿಲ್ 1ರಿಂದ ಬದಲಾಗಲಿವೆ. ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಲಿರುವ ಐದು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ...
ಬಜೆಟ್ 2021: ಭವಿಷ್ಯ ನಿಧಿ ಬಡ್ಡಿದರದ ಮೇಲೆ ತೆರಿಗೆ ಹೊರೆ
ಅಡುಗೆ ಅನಿಲಕ್ಕೆ ಹೆಚ್ಚು ಬೆಲೆ ತೆರಬೇಕು
ಪ್ರತಿ ತಿಂಗಳ ಮೊದಲ ದಿನ ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಘೋಷಿಸುತ್ತದೆ. ಹಾಗೆಯೇ ಮಾರ್ಚ್ 2021ರಲ್ಲಿ ಎಲ್ಪಿಜಿ ಅನಿಲ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. 769 ರೂ ಇದ್ದ ಸಿಲಿಂಡರ್ ಬೆಲೆಯನ್ನು 819 ರೂಪಾಯಿಗೆ ಏರಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆ ಏರಿಕೆಯಾದ ಕಾರಣ, ಎಲ್ಪಿಜಿ ದರದಲ್ಲಿಯೂ ಏರಿಕೆ ಮಾಡಿರುವುದಾಗಿ ಕೇಂದ್ರ ತಿಳಿಸಿದೆ.
ಏಳು ಬ್ಯಾಂಕ್ಗಳ ಪಾಸ್ಬುಕ್, ಚೆಕ್ ಬುಕ್ ಕಾರ್ಯನಿರ್ವಹಿಸಲ್ಲ
ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್- ಈ ಏಳು ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರು ಕೊಂಚ ಗಮನ ಹರಿಸಬೇಕಿದೆ. ಬೇರೆ ಬ್ಯಾಂಕ್ಗಳೊಂದಿಗೆ ಈ ಬ್ಯಾಂಕ್ಗಳು ವಿಲೀನಗೊಳ್ಳುತ್ತಿರುವುದರಿಂದ ಈ ಬ್ಯಾಂಕ್ಗಳ ಪಾಸ್ಬುಕ್ ಹಾಗೂ ಚೆಕ್ಬುಕ್ಗಳು ಏಪ್ರಿಲ್ 1ರಿಂದ ಕಾರ್ಯರಹಿತವಾಗುತ್ತವೆ.
ಲಾಕ್ಡೌನ್ ವೇಳೆ ದೇಶದಲ್ಲಿ 39,400 ಕೋಟಿ ಪಿಎಫ್ ಹಣ ವಿತ್ಡ್ರಾ ಆಗಿದೆ: ಕರ್ನಾಟಕದಲ್ಲಿ ಎಷ್ಟು?
ಇಪಿಎಫ್ ಖಾತೆಯಲ್ಲಿನ ಹೂಡಿಕೆಗೆ ತೆರಿಗೆ
ಏಪ್ರಿಲ್ 1ರಿಂದ ಇಪಿಎಫ್ ಖಾತೆಯ ಹೂಡಿಕೆ ತೆರಿಗೆ ರಹಿತವಾಗಿರುವುದಿಲ್ಲ. ಈ ಆರ್ಥಿಕ ವರ್ಷದಲ್ಲಿ ಇಪಿಎಫ್ ನಲ್ಲಿ 2.5 ಲಕ್ಷ ರೂಗಿಂತ ಹೆಚ್ಚಿನ ಹೂಡಿಕೆ ಇದ್ದರೆ ನಿರ್ದಿಷ್ಟ ಮಟ್ಟದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಬದಲಾಗುತ್ತಿದೆ ಟಿಡಿಎಸ್ ಆದಾಯ ತೆರಿಗೆ ನಿಯಮ
ಟಿಡಿಎಸ್ ಆದಾಯ ತೆರಿಗೆ ನಿಯಮ ಏಪ್ರಿಲ್ 1ರಿಂದ ಬದಲಾಗಲಿದೆ. ಒಬ್ಬ ವ್ಯಕ್ತಿಯು ಆದಾಯ ತೆರಿಗೆ ದಾಖಲಿಸದಿದ್ದರೆ, (ITR) ಆ ವ್ಯಕ್ತಿಯ ಬ್ಯಾಂಕ್ ಠೇವಣಿ ಮೇಲಿನ ಟಿಡಿಎಸ್ ದರ ದ್ವಿಗುಣಗೊಳ್ಳುತ್ತದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಂದರೆ, ವ್ಯಕ್ತಿಯು ಗಳಿಸುವ ಆದಾಯ ಮಟ್ಟವು ತೆರಿಗೆ ಅಡಿಯಲ್ಲಿ ಬರದಿದ್ದರೂ, ಅವರ ಬ್ಯಾಂಕ್ ಖಾತೆ ಮೇಲೆ ಟಿಡಿಎಸ್ ದರವನ್ನು ದ್ವಿಗುಣಗೊಳಿಸಲಾಗುತ್ತದೆ ಎನ್ನಲಾಗಿದೆ.
ಎಲ್ಟಿಸಿ ಬದಲು ಸರಕು, ಸೇವೆ ಪಡೆಯಲು ಅರ್ಹ
ಕೇಂದ್ರ ಸರ್ಕಾರ ಪರಿಚಯಿಸಿರುವ ರಜೆ ಪ್ರಯಾಣ ರಿಯಾಯಿತಿ (ಎಲ್ಟಿಸಿ) ಅಥವಾ ಎಲ್ಟಿಸಿ ನಗದು ಯೋಜನೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು ರಜೆ ಪ್ರಯಾಣದ ರಿಯಾಯಿತಿ ಅಥವಾ ರಜೆ ಪ್ರಯಾಣ ಭತ್ಯೆ ತೆರಿಗೆ ವಿನಾಯಿತಿ ಬದಲಾಗಿ ಸರಕು ಮತ್ತು ಸೇವೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಕೊರೊನಾ ಕಾರಣವಾಗಿ ಪ್ರಯಾಣಕ್ಕೆ ನಿರ್ಬಂಧವಿರುವುದರಿದ ಕೇಂದ್ರ ಸರ್ಕಾರಿ ನೌಕರರು ಎಲ್ಟಿಸಿ ಶುಲ್ಕ ಮತ್ತು ರಜೆ ಭತ್ಯೆಗೆ ಸಮನಾದ ನಗದು ಪಡೆಯುವ ಆಯ್ಕೆ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಇದು ಮಾರ್ಚ್ 31ರವರೆಗೆ ಮಾತ್ರ ಲಭ್ಯವಿರಲಿದೆ.