ಆಸ್ತಿ ಉಳಿಸಿಕೊಳ್ಳಲು ಭಾರತಕ್ಕೆ ಬರಲು ಮುಂದಾದ ಮಲ್ಯ!
ಬೆಂಗಳೂರು, ಆಗಸ್ಟ್ 28: ಭಾರತದ ಹತ್ತು ಹಲವು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು ಸಾಲ ಮಾಡಿ, ಯುಕೆಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಭಾರತಕ್ಕೆ ವಾಪಸ್ ಬರಲು ಮನಸ್ಸು ಮಾಡಿರುವ ಸುದ್ದಿ ಬಂದಿದೆ. ಮಲ್ಯರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರ ಮಾಡುವ ಕೋರ್ಟಿನ ವಿಚಾರಣೆ ಕೊನೆ ಹಂತದಲ್ಲಿದೆ. ಈ ನಡುವೆ, ಭಾರತದಲ್ಲಿರುವ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಮಲ್ಯ ಆಗಮಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.
ಪ್ರಧಾನಿ ಮೋದಿ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಆರ್ಥಿಕ ಅವ್ಯವಹಾರಗಳ ಅಪರಾಧಿ ಕಾಯ್ದೆ ಅನ್ವಯ ಸರ್ಕಾರದ ತನಿಖಾ ಸಂಸ್ಥೆಗಳು, ಆರೋಪಿ ವ್ಯಕ್ತಿಯು ಸುಸ್ತಿದಾರ ಎನಿಸಿ, ಘೋಷಿತ ಅಪರಾಧಿಯಾಗಿ ಪರಾರಿಯಾದರೆ, ಆರೋಪಿಯ ಆಸ್ತಿಯನ್ನು ಜಪ್ತಿ ಮಾಡಬಹುದಾಗಿದೆ.
ಮಲ್ಯರನ್ನು ಇರಿಸುವ ಮುಂಬೈ ಜೈಲಿನಲ್ಲಿ ಏನೇನುಂಟು?
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜತೆ ಮಲ್ಯ ಅವರು ಮಾತುಕತೆ ನಡೆಸುತ್ತಿದ್ದಾರೆ, ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವ ಭರವಸೆ ನೀಡಿದ್ದಾರೆ.
ಭಾರತ ನೆಲದ ಕಾನೂನಿನ ಎಲ್ಲಾ ಪ್ರಕ್ರಿಯೆಗೆ ಒಳಪಟ್ಟು ಸಾಲ ಹಿಂತಿರುಗಿಸುವುದು ನಿಧಾನಗತಿಯ ಪ್ರಕ್ರಿಯೆಯಾಗಲಿದ್ದು, ಮಾತುಕತೆ ಮೂಲಕ ಬೇಗ ಇತ್ಯರ್ಥ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಲ್ಯ ಅವರಿಗೆ ಸೇರಿರುವ 12,000 ಕೋಟಿ ರು ಆಸ್ತಿಯನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಮುಂದಾಗಿದ್ದು, ಕೋರ್ಟಿನ ಅನುಮತಿ ಕೋರಿದೆ.
ಆದರೆ, ಮಲ್ಯ ಮೇಲೆ ಸುಸ್ತಿದಾರ ಎಂಬ ಟ್ಯಾಗ ಅಷ್ಟೇ ಆಲ್ಲ, ಮನಿಲಾಂಡ್ರಿಂಗ್ ನಲ್ಲಿ ಭಾಗಿರುವ ಆರೋಪವಿದೆ.
ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.