ಸಾಲ ವಿನಾಯ್ತಿ ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಣೆ
ನವದೆಹಲಿ, ಮಾರ್ಚ್ 23: ಸರ್ಕಾರ ಮತ್ತು ಆರ್ಬಿಐನ ಸಾಲ ವಿನಾಯ್ತಿ ನೀತಿಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ. ಯೋಜನೆಯಡಿ ಸಾಲಗಾರರಿಗೆ ಮತ್ತಷ್ಟು ವರ್ಗಗಳನ್ನು ತರಲು ಅಥವಾ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವ ವಿಚಾರದಲ್ಲಿ ಯಾವುದೇ ನಿರ್ದೇಶನ ನೀಡಲು ಕೂಡ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಾಲದ ಮೊತ್ತವನ್ನು ಪರಿಗಣಿಸದೆ, ಯಾವುದೇ ಸಾಲಗಾರನ ಮೇಲಿನ ಸಾಲದ ಮರುಪಾವತಿ ಅವಧಿಯಲ್ಲಿ ದಂಡದ ಬಡ್ಡಿ ಅಥವಾ ಬಡ್ಡಿ ಮೇಲಿನ ಬಡ್ಡಿಗಳು ಇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಲ್ಲದೆ. ಈಗಾಗಲೇ ಅಂತಹ ಬಡ್ಡಿಗಳನ್ನು ಸಂಗ್ರಹಿಸಿದ್ದರೆ ಅವುಗಳನ್ನು ಸಾಲಗಾರರಿಗೆ ಮರಳಿಸುವಂತೆಯೂ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಮರುಪಾವತಿ ಸಾಧ್ಯವಾಗದೆ ಇದ್ದರೆ, ಆ ಬಡ್ಡಿ ಮೊತ್ತವನ್ನು ಸಾಲದಲ್ಲಿ ಹೊಂದಾಣಿಕೆ ಮಾಡಬೇಕು ಎಂದು ಆದೇಶಿಸಿದೆ.
ಸಾಲ ವಿನಾಯ್ತಿ ಅವಧಿಯ ವಿಸ್ತರಣೆ ಮತ್ತು ಬಡ್ಡಿಯ ಮನ್ನಾಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ.ಆರ್ ಶಾ, 'ಆರ್ಥಿಕ ನೀತಿಯ ವಿಚಾರಗಳ ಜಾರಿಯಲ್ಲಿ ನ್ಯಾಯಾಲಯಗಳು ಸಲಹೆಗಾರರಲ್ಲ. ಸಾಂಕ್ರಾಮಿಕವು ಎಲ್ಲ ವಲಯಗಳಿಗೂ ತೊಂದರೆಯುಂಟುಮಾಡಿದೆ. ಸರ್ಕಾರವು ವಲಸಿಗರಿಗೆ ಸಾರಿಗೆ ಒದಗಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಕ್ಕೂ ಯಾವುದೇ ಬೆಂಬಲ ಇರಲಿಲ್ಲ. ಜಿಎಸ್ಟಿ ನಷ್ಟವೂ ಉಂಟಾಗಿತ್ತು' ಎಂದರು.
ಸಂಪೂರ್ಣ ಬಡ್ಡಿ ಮನ್ನಾ ಸಾಧ್ಯವಿಲ್ಲ
'ನಾವು ಪರಿಹಾರಗಳನ್ನು ಸ್ವತಂತ್ರವಾಗಿ ಪರಿಗಣಿಸಿದ್ದೇವೆ. ಖಾತೆದಾರರಿಗೆ ಮತ್ತು ಪಿಂಚಣಿದಾರರಿಗೆ ಬ್ಯಾಂಕುಗಳು ಬಡ್ಡಿ ಪಾವತಿಸಬೇಕಿರುವುದರಿಂದ ಬಡ್ಡಿ ಮೇಲಿನ ಸಂಪೂರ್ಣ ಮನ್ನಾ ಸಾಧ್ಯವಿಲ್ಲ. ಆರ್ಥಿಕ ನೀತಿ ಅಥವಾ ಆರ್ಥಿಕ ಪ್ಯಾಕೇಜ್ ಹೇಗಿರಬೇಕು ಎಂಬುದನ್ನು ಸರ್ಕಾರ ಮತ್ತು ಆರ್ಬಿಐ ಸಮಗ್ರ ಚರ್ಚೆಯ ಬಳಿಕ ನಿರ್ಧರಿಸುತ್ತವೆ' ಎಂದು ನ್ಯಾಯಪೀಠ ಹೇಳಿತು.
ವಿನಾಯ್ತಿ ಸಾಧ್ಯವಿಲ್ಲ
'ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೇಂದ್ರ ಮತ್ತು ಆರ್ಬಿಐಗಳು ವಿವಿಧ ಕ್ರಮಗಳನ್ನು ತೆಗೆದುಕೊಂಡಿವೆ. ಹೀಗಾಗಿ ಅರ್ಜಿದಾರರು ಬಡ್ಡಿ ಮೇಲಿನ ಬಡ್ಡಿ ಮನ್ನಾ, ಸಾಲದ ವಿನಾಯ್ತಿ ಅವಧಿಯ ವಿಸ್ತರಣೆ ಅಥವಾ ವಲಯಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿನಾಯ್ತಿಗಳಿಗೆ ಅರ್ಹರಾಗಿರುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
ಅನುತ್ಪಾದಕ ಸಾಲ
2020ರ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ, ಆಗಸ್ಟ್ 31ರವರೆಗಿನ ಅನುತ್ಪಾದಕ ಅಸ್ತಿ (ಎನ್ಪಿಎ) ಅಲ್ಲದ್ದನ್ನು ಮುಂದಿನ ಆದೇಶದವರೆಗೂ ಪರಿಗಣಿಸಬಾರದು ಎಂದು ಸೂಚಿಸಿತ್ತು. ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರವು ವಿವಿಧ ವಲಯಗಳಲ್ಲಿನ 2 ಕೋಟಿ ರೂಪಾಯಿವರೆಗಿನ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿತ್ತು.
ಕೆವಿ ಕಾಮತ್ ಸಮಿತಿ ಶಿಫಾರಸು
ಆರು ತಿಂಗಳ ಸಾಲ ವಿನಾಯ್ತಿ ಅವಧಿಯಲ್ಲಿನ ಸಾಲ ಇಎಂಐಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಮತ್ತು ಸಾಲ ವಿನಾಯ್ತಿಯನ್ನು ವಿಸ್ತರಿಸುವಂತೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ವಿವಿಧ ವಲಯಗಳಲ್ಲಿನ ಕೋವಿಡ್-19 ಸಂಬಂಧಿತ ಒತ್ತಡಗಳು ಹಾಗೂ ಸಾಲ ವಿನಾಯ್ತಿಗೆ ಸಂಬಂಧಿಸಿದಂತೆ ಇದುವರೆಗೂ ಹೊರಡಿಸಲಾದ ಅಧಿಸೂಚನೆ ಮತ್ತು ಸುತ್ತೋಲೆಗಳ ಮೇಲಿನ ಸಾಲ ಮರುಸಂರಚನೆಗೆ ಕೆ.ವಿ. ಕಾಮತ್ ಸಮಿತಿ ಶಿಫಾರಸುಗಳನ್ನು ಸಲ್ಲಿಸುವಂತೆ ಸೂಚಿಸಿದ್ದರ ಆಧಾರದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.