ದೇಶಭ್ರಷ್ಟ ಆರ್ಥಿಕ ಅಪರಾಧಿ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾ!
ನವದೆಹಲಿ, ಆ. 31: ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು(ಆಗಸ್ಟ್ 31) ವಜಾಗೊಳಿಸಿದೆ.
Recommended Video
ಕೋರ್ಟ್ ಅದೇಶವನ್ನು ಉಲ್ಲಂಘಿಸಿ ಮಲ್ಯ ಅವರು ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಮೊತ್ತವನ್ನು ವರ್ಗಾವಣೆ ಮಾಡಿರುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕೋರ್ಟ್ ಅದೇಶ ಉಲ್ಲಂಘಿಸಿಲ್ಲ ಎಂದು ಮಲ್ಯ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಜಸ್ಟೀಸ್ ಯು. ಯು ಲಲೀತ್ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ಮಲ್ಯ ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಕ್ತಾಯಗೊಳಿಸಿ, ತೀರ್ಪು ಕಾಯ್ದಿರಿಸಿತ್ತು.
ದೇಶಭ್ರಷ್ಟ ಆರ್ಥಿಕ ಅಪರಾಧಿ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರ್ತಿಲ್ಲ
ಮಲ್ಯ ಅವರು ಆಸ್ತಿ ವಿವರ ಹಾಗೂ ಹಣ ವರ್ಗಾವಣೆ ಕುರಿತಂತೆ ಸಮರ್ಪಕ ಮಾಹಿತಿ ನೀಡಿಲ್ಲ, ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಮಲ್ಯರನ್ನು ದೋಷಿ ಎಂದು 2017ರ ಮೇ 9ರಂದು ಕೋರ್ಟ್ ಘೋಷಿಸಿತ್ತು. ಈ ಕುರಿತಂತೆ ಮಲ್ಯ ಅವರ ತಕರಾರು ಅರ್ಜಿಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಏಕೆ ಎಂದು ರಿಜಿಸ್ಟ್ರಿ ಅಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬ್ರಿಟಿಷ್ ಸಂಸ್ಥೆ ಡಿಯಾಜಿಯೋ ನಡುವಿನ ವ್ಯವಹಾರದಿಂದ ಬಂದ ಮೊತ್ತ 40 ಮಿಲಿಯನ್ ಡಾಲರ್ ಗಳನ್ನು ತನ್ನ ಮಕ್ಕಳಿಗೆ(ಸಿದ್ದಾರ್ಥ್, ಲೀನಾ, ತಾನ್ಯಾ) ಮಲ್ಯ ವರ್ಗಾವಣೆ ಮಾಡಿದ್ದಾರೆ ಇದು ಕರ್ನಾಟಕ ಹೈಕೋರ್ಟ್ ಆದೇಶದ ಉಲ್ಲಂಘನೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.