ಚಿನ್ನ ಖರೀದಿಸುವ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರದ ಬಂಪರ್ ಆಫರ್!
ಬೆಂಗಳೂರು, ಮಾ. 21: ಹಳದಿ ಲೋಹಕ್ಕೆ ಬೆಲೆ ಕೊಂಚ ಕಡಿಮೆ ಆಗುತ್ತಿದ್ದಂತೆಯೆ ಚಿನ್ನ ಖರೀದಿಗೆ ರಾಜ್ಯ ಸರ್ಕಾರ ಒಂದರ ಹಿಂದೆ ಮತ್ತೊಂದರಂತೆ ಬಂಪರ್ ಆಫರ್ ಕೊಡುತ್ತಿದೆ. ಹಿಂದುಳಿದ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಆಭರಣ ತಯಾರಿಕೆಯ ಘಟಕ (ಜ್ಯುವೆಲರಿ ಪಾರ್ಕ್) ವನ್ನು ಪ್ರಾರಂಭಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ವಿಶೇಷವೆಂದರೆ ಎರಡು ದಿನಗಳ ಹಿಂದೆಯಷ್ಟೇ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಕಾರಿ ಒಡೆತನದ ಆಭರಣ ಮಳಿಗೆಗಳನ್ನು (ಜ್ಯುವೆಲ್ಲರಿ ಶಾಪ್) ತೆರೆಯಲು ತೀರ್ಮಾನಿಸಿದ ಬೆನ್ನಲ್ಲೇ, ಇಲಾಖೆ ಈ ಹೆಜ್ಜೆಯನ್ನು ಇಟ್ಟಿದೆ.
'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!
ವಿಕಾಸಸೌಧದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ವಿವಿಧ ಚಿನ್ನಾಭರಣ ತಯಾರಿಕೆಯ ಸಂಘಟನೆಗಳ ಮುಖ್ಯಸ್ಥರ ಜೊತೆ ನಡೆಸಿದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಮೊದಲ ಜ್ಯುವೆಲರಿ ಪಾರ್ಕ್
ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಇಲ್ಲವೇ ಬೀದರ್ ಜಿಲ್ಲೆಯಲ್ಲಿ ಸುಮಾರು 50 ರಿಂದ 75 ಎಕರೆ ಜಮೀನಿನಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಆಭರಣ ತಯಾರಿಕಾ ಸಂಘಟನೆಗಳ ಮುಖಂಡರ ಬೇಡಿಕೆಯನ್ನು ಸಚಿವ ಮುರುಗೇಶ್ ನಿರಾಣಿ ಅವರು ಒಪ್ಪಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಮೊದಲ ಆದ್ಯತೆ, ನಂತರ ಉಳಿದೆಡೆ ಪ್ರಾರಂಭಿಸುವ ಕುರಿತು ನೋಡೋಣ ಎಂದು ಸಚಿವ ಮುರುಗೇಶ್ ನಿರಾಣಿ ಅವರು ಭರವಸೆ ನೀಡಿದ್ದಾರೆ.
ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸಲಿದ್ದು, ಗ್ರಾಹಕರು ಒಂದೇ ಸೂರಿನಡಿ ಆಭರಣಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ.
ಬೆಂಗಳೂರು ಹೊರವಲಯದಲ್ಲಿ ಜ್ಯವೆಲ್ಲರಿ ಪಾರ್ಕ್
ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಹಾಗೂ ರೈಲ್ವೆ ಸಂಪರ್ಕ ಸಾಕಷ್ಟು ಉತ್ತಮವಾಗಿದೆ. ದೇಶ-ವಿದೇಶಗಳಿಂದ ಬಂದು ಹೋಗುವವರಿಗೆ ಎಲ್ಲಾ ಸೌಲಭ್ಯಗಳಿವೆ. ಜೊತೆಗೆ ರಾಜ್ಯ ಸರಕಾರ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ ಎಂದು ಸಚಿವ ನಿರಾಣಿ ಅವರು ಆಶ್ವಾಸನೆ ನೀಡಿದ್ದಾರೆ.
ಬೆಂಗಳೂರಿನ ಹೊರ ಭಾಗದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸುವುದಾದರೆ ತಮಗೆ ತೆರಿಗೆ ವಿನಾಯ್ತಿ ನೀಡಬೇಕೆಂಬ ಸಂಘಟನೆಗಳ ಮನವಿಯನ್ನು ಪುರಸ್ಕರಿಸಿದ ಸಚಿವ ನಿರಾಣಿ ಅವರು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಶೀಘ್ರದಲ್ಲೇ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಕಾನೂನು ಮತ್ತು ಸಂಸದೀಯ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ತೆರಿಗೆ ವಿನಾಯ್ತಿ ನೀಡಬೇಕೆಂದು ಮನವರಿಕೆ ಮಾಡಲಾಗುವುದು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಹೇಳಿದರು.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣ
ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಸರು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿಶ್ವದರ್ಜೆಯ ಆಭರಣ ತಯಾರಿಸಬೇಕು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ತಯಾರಿಸುವಂತೆ ಸಚಿವ ನಿರಾಣಿ ಸಲಹೆ ನೀಡಿದ್ದಾರೆ. ಈಗಾಗಲೇ ತೀರ್ಮಾನಿಸಿರುವಂತೆ ರಾಜ್ಯದ ಐದು ಕಡೆ ಸರ್ಕಾರಿ ಒಡೆತನದ ಜ್ಯುವೆಲರಿ ಮಳಿಗೆಗಳನ್ನು ತೆರೆಯಬೇಕೆಂಬ ಚಿಂತನೆ ಇದೆ. ಆದಷ್ಟು ಶೀಘ್ರ ಇದು ಕಾರ್ಯಾರಂಭಕ್ಕೆ ಬರಲಿದೆ.
ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ನೀಡುವ ಚಿನ್ನದ ನಾಣ್ಯಗಳನ್ನು ಹೊರ ತರಲು ತೀರ್ಮಾನಿಸಿದ್ದೇವೆ. ಇದರ ಒಂದು ಭಾಗದಲ್ಲಿ ಗಂಡಬೇರುಂಢ, ಮತ್ತೊಂದು ಭಾಗದಲ್ಲಿ ಕರ್ನಾಟಕದ ಸುಪ್ರಸಿದ್ದ ಐತಿಹಾಸಿಕ ಸ್ಥಳಗಳಾದ ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬೇಲೂರು, ಹಳೆಬೀಡು, ಮೈಸೂರು, ಜತೆಗೆ ಇತಿಹಾಸ ಪ್ರಸಿದ್ಧ ಪುರುಷರ ಚಿತ್ರವನ್ನು ಒಳಗೊಂಡ ನಾಣ್ಯಗಳನ್ನು ಹೊರತರುವಂತೆ ಸಚಿವ ನಿರಾಣಿ ಸೂಚಿಸಿದ್ದಾರೆ.
Recommended Video
ವರ್ಷಾಂತ್ಯಕ್ಕೆ 5 ಟನ್ ಕೆಜಿ ಚಿನ್ನ ಉತ್ಪಾದನೆ
ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಟ್ಟಿ ಚಿನ್ನದ ಗಣಿಗಾರಿಕೆಯಲ್ಲಿ ಅದಿರು ತೆಗೆಯುವುದನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆದಿದೆ. ಪ್ರಸ್ತುತ ಸರ್ಕಾರವೇ ಇದನ್ನು ನಿರ್ವಹಿಸಲಿದ್ದು. ಜಮೀನು, ಆಡಳಿತ ಮಂಡಳಿಯನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಈ ವರ್ಷಾಂತ್ಯಕ್ಕೆ 5 ಟನ್ ಕೆಜಿ ಚಿನ್ನ ಉತ್ಪಾದನೆ ಮಾಡಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಭೂಮಿಯ ಆಳದಲ್ಲಿ ಅದಿರನ್ನು ತೆಗೆಯಲು ಖಾಸಗಿಯವರಿಗೆ ನೀಡಿದರೆ ಇದರ ನಿರ್ವಹಣೆ ಇನ್ನಷ್ಟು ಉತ್ತಮವಾಗಲಿದೆ. ಜೊತೆಗೆ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಾಗಲಿದ್ದು, ಈಗಿರುವ ಕಾರ್ಮಿಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದು. ಸರ್ಕಾರ ಹಾಗೂ ಖಾಸಗಿಯವರಿಗೂ ಇದರಿಂದ ಲಾಭ ಬರಲಿದೆ ಎಂದು ಚರ್ಚೆ ನಡೆಸಲಾಗಿದೆ.
ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ನಿರೀಕ್ಷೆಗೆ ತಕ್ಕಂತೆ ಚಿನ್ನದ ಉತ್ಪಾದನಾ ಪ್ರಮಾಣ ಹೆಚ್ಚಳವಾಗಬೇಕಾದರೆ ಅದಿರು ತೆಗೆಯುವುದನ್ನು ಮಾತ್ರ ಖಾಸಗಿಯವರಿಗೆ ನೀಡುವ ಚಿಂತನೆ ಇದೆ ಎಂದು ಇದೇ ಸಂದರ್ಭದಲ್ಲಿ ಮುರುಗೇಶ್ ನಿರಾಣಿ ಹೇಳಿದ್ದಾರೆ. ಸಭೆಯಲ್ಲಿ ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್, ಕರ್ನಾಟಕ ಜ್ಯುವೆಲರಿ ಫೆಡರೇಷನ್, ಜ್ಯುವೆಲರಿ ಅಸೋಸಿಯೇಷನ್ ಮುಖಂಡರು ಭಾಗವಹಿಸಿದ್ದರು.