ಒಂದು ನಿಲ್ದಾಣ ಒಂದು ಉತ್ಪನ್ನ: ನಿಲ್ದಾಣದಲ್ಲಿ ಯಾವ ಉತ್ಪನ್ನ ಸಿಗಲಿದೆ?
ಬೆಂಗಳೂರು ಜು.7: 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ ನೈಋತ್ಯ ರೈಲ್ವೆ ವಿಭಾಗವು ತನ್ನ ವ್ಯಾಪ್ತಿಯ ಹಲವು ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ಚಟುವಟಿಕೆಗಾಗಿ ಅರ್ಜಿ ಆಹ್ವಾನಿಸಿದೆ.
ಕೈಗೆಟುವ ಬೆಲೆಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಬೆಳೆದ ಅಥವಾ ತಯಾರಿಸಿದ ಕರಕುಶಲ ವಸ್ತು, ಆಹಾರ ಪದಾರ್ಥಗಳನ್ನು ರೈಲು ನಿಲ್ದಾಣದಲ್ಲಿ ಮಾರಾಟ ಮಾಡಲು ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರ ತನ್ನ 2022-23ರ ಬಜೆಟ್ನಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆ ಘೋಷಣೆ ಮಾಡಿತ್ತು.
ಸ್ಥಳೀಯ ಉತ್ಪನ್ನಗಳನ್ನು 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆ ಮೂಲಕ ರೈಲು ನಿಲ್ದಾಣಗಳ ಮೂಲಕ ಜನಪ್ರಿಯಗೊಳಿಸಲು, ದೇಶದ ಆಹಾರ, ಸಂಸ್ಕೃತಿ ಪರಂಪರೆ ಪ್ರಯಾಣಿಕರಿಗೆ ತಲುಪಿಸುವ ಉದ್ದೇಶ ಹೊಂದಿರುವ ಯೋಜನೆ ಇದಾಗಿದೆ. ಇದನ್ನು ನೈಋತ್ಯ ರೈಲ್ವೆ ಇಲಾಖೆ ವ್ಯಾಪ್ತಿಯ ನಿಲ್ದಾಣಗಳಲ್ಲಿ ಜಾರಿ ತರಲಾಗುತ್ತಿದೆ. ಈ ಕುರಿತು ರೈಲ್ವೆ ಇಲಾಖೆ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ನಿಲ್ದಾಣಗಳ ಮಳಿಗೆಗಾಗಿ ಅರ್ಜಿ ಸಲ್ಲಿಸಿ
ಸ್ಥಳೀಯ ಉತ್ಪನ್ನ ಮಾರಾಟ, ಪ್ರಚಾರ ಚಟುವಟಿಕೆಗಾಗಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 'ಚನ್ನಪಟ್ಟಣ ಬೊಂಬೆಗಳು' ಮತ್ತು 'ಇಳಕಲ್ ಸೀರೆ', ಯಶವಂಪುರ ರೈಲು ನಿಲ್ದಾಣದಲ್ಲಿ 'ಚನ್ನಪಟ್ಟಣ ಬೊಂಬೆಗಳು', ಬೆಂಗಳೂರು ಕಂಟೋನ್ಮೆಂಟ 'ಕರ್ನಾಟಕ ಬುಡಕಟ್ಟು ಉತ್ಪನ್ನಗಳು', ಹೊಸೂರಿನಲ್ಲಿ 'ಕೃಷಿ ಉತ್ಪನ್ನಗಳು (ರೋಸ್)', ಧರ್ಮಪುರಿಯಲ್ಲಿ 'ಕರಕುಶಲ ವಸ್ತುಗಳು', ಕೆಂಗೇರಿ ರೈಲು ನಿಲ್ದಾಣಗಳಲ್ಲಿ 'ಚೆನ್ನಪಟ್ಟಣ ಬೊಂಬೆಗಳು', ಕೆ.ಆರ್.ಪುರಂನಲ್ಲಿ 'ಬುಡಕಟ್ಟು ಉತ್ಪನ್ನಗಳು', ಚನ್ನಪಟ್ಟಣ ನಿಲ್ದಾಣದಲ್ಲಿ 'ಚನ್ನಪಟ್ಟಣ ಬೊಂಬೆಗಳು', ರಾಮನಗರದಲ್ಲಿ 'ಚನ್ನಪಟ್ಟಣ ಬೊಂಬೆಗಳು' ಹಾಗೂ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ 'ಶಿವಾರಪೇಟೆ ಕಲ್ಲು (ಕೆತ್ತನೆ ವಿಗ್ರಹಗಳು)' ಉತಪ್ಪನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಾಲ್ಕು ಹಂತದಲ್ಲಿ ಅವಧಿ ವಿಂಗಡಣೆ
ಇಷ್ಟು ರೈಲು ನಿಲ್ದಾಣಗಳಲ್ಲಿ ಉತ್ಪನ್ನಗಳ ಮಾರಾಟಕ್ಕೆ ಒಂದು ಅವಧಿಗೆ 15 ದಿನ ಎಂಬಂತೆ ಒಟ್ಟು ನಾಲ್ಕು ಅವಧಿಗಳನ್ನು ಮಾಡಲಾಗಿದೆ. ಇದರಲ್ಲಿ ಮೊದಲ ಅವಧಿ ಜುಲೈ 8ರಿಂದ ಜು.22ರವರೆಗೆ ಇರಲಿದೆ. ಎರಡನೇ ಅವಧಿ ಜು.23ರಿಂದ ಆಗಸ್ಟ್ 6 ರವರೆಗೆ, ಮೂರನೇ ಅವಧಿ ಆಗಸ್ಟ್ 7 ರಿಂದ ಆಗಸ್ಟ್ 21 ರವರೆಗೆ ಮತ್ತು ನಾಲ್ಕನೇ ಅವಧಿ ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರವರೆಗೆ ವಿಂಗಡಿಸಲಾಗಿದೆ. ಅರ್ಜಿ ಸಲ್ಲಿಸುವವರು ಆಯಾ ಅವಧಿ ನೋಡಿಕೊಂಡು ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹತ್ತಿರ ರೈಲು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ರೈಲ್ವೆ ಇಲಾಖೆ ತಿಳಿಸಿದೆ.
15 ದಿನದ ಅವಧಿಗೆ ಅವಕಾಶ
ಯೋಜನೆಯಡಿ ಉತ್ಪನ್ನ ಮಾರಾಟ ಮಾಡುವ ಉತ್ಪಾದಕರು ಮೊದಲು ನಿಲ್ದಾಣ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು. ನಿಲ್ದಾಣಗಳಲ್ಲಿನ ಮಳಿಗೆ ಬಳಕೆಗಾಗಿ 15 ದಿನಗಳ ಒಂದು ಅವಧಿಗೆ 1000 ರೂ. ನೀಡಿ ಮಳಿಗೆ ಬಳಸಬಹುದು. ಸದ್ಯಕ್ಕೆ ಮಾರಾಟಕ್ಕಾಗಿ 15 ದಿನಗಳ ಒಂದು ಅವಧಿಯ ರೀತಿಯಲ್ಲಿ ಅವಕಾಶ ನೀಡಲಾಗಿದೆ. ಯಾವುದೇ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಎಂದು ರೈಲ್ವೆ ಇಲಾಖೆ ಯ ಪ್ರಕಟಣೆ ತಿಳಿಸಿದೆ.
ರೈತ ಉತ್ಪಾದಕರಿಗೆ ಅನುಕೂಲ
'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯನ್ನು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ಈಗಾಗಲೇ ತನ್ನ ವ್ಯಾಪ್ತಿಯ ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ 71 ರೈಲು ನಿಲ್ದಾಣಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ. ಇದರಿಂದ ರೈತರಿಗೆ, ಉತ್ಪಾದಕರಿಗೆ ಅನುಕೂಲವಾಗಲಿದ್ದು, ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿದು ಬಂದಿದೆ.
Recommended Video