ತೆರಿಗೆದಾರರಿಗೆ ಕಾದಿದೆ ಬಂಪರ್ ಸುದ್ದಿ! Tax Slab ನಲ್ಲಿ ಮಹತ್ವದ ಬದಲಾವಣೆ?
ನವದೆಹಲಿ, ಅಕ್ಟೋಬರ್ 03: ಹಿಂಜರಿತ ಕಾಣುತ್ತಿರುವ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರುವ ಪಣತೊಟ್ಟಿರುವ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕಾರ್ಪೋರೇಟ್ ಟ್ಯಾಕ್ಸ್ ಅನ್ನು ಕಡಿತಗೊಳಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಇದೀಗ ವೈಯಕ್ತಿಕ ಆದಾಯ ತೆರಿಗೆಯ ಸ್ಲ್ಯಾಬ್ ಗಳಲ್ಲೂ ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ಸರ್ಕಾರದ ಕೆಲವು ಮೂಲಗಳು ತಿಳಿಸಿವೆ.
ವಿಷ ಸೇವಿಸುವ ಮಾತನಾಡಿದ ಯುವಕನಿಗೆ ನಿರ್ಮಲಾ ಸೀತಾರಾಮನ್ ಬುದ್ಧಿವಾದ
ಈಗಾಗಲೇ ಇರುವ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ 5 ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆಯಿಲ್ಲ. ಅದಕ್ಕಿಂತ ಹೆಚ್ಚಿನ ಆದಾಯ ತೆರಿಗೆ ಹೊಂದಿರುವವರಿಗೆ 2.5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆಯಿಲ್ಲ. 2.5 ಲಕ್ಷ ರೂ.ನಿಂದ 5 ಲಕ್ಷ ರೂ. ವರೆಗೆ ಶೇ. 5, 5 ರಿಂದ 10 ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಶೇ. 20 ಮತ್ತು 10 ಲಕ್ಷ ರೂ. ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. 30 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.
ತೆರಿಗೆದಾರರಿಗೆ ಅನುಕೂಲ ಮಾಡಿಕೊಡುವ ಚಿಂತನೆ
ಆದರೆ ಈ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಮಾಡುವ ಮೂಲಕ ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಟ್ಯಾಕ್ಸ್ ಸ್ಲ್ಯಾಬ್ ನಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಕೆಲವು ವದಂತಿಗಳ ಪ್ರಕಾರ ಬದಲಾವಣೆಯಾಗಲಿರುವ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ, ಈಗಾಗಲೂ ಇರುವ ಮೂರು ಟ್ಯಾಕ್ಸ್ ಸ್ಲ್ಯಾಬ್ ಗಳ ಜೊತೆ ಸರ್ಕಾರ ಮತ್ತೆರಡು ಟ್ಯಾಕ್ಸ್ ಸ್ಲ್ಯಾಬ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ.
ಗೃಹ ನಿರ್ಮಾಣ ನೆರವಿಗೆ 10,000 ಕೋಟಿ: ನಿರ್ಮಲಾ ಸೀತಾರಾಮನ್
ಬದಲಾವಣೆ ಏನು?
ಈಗಾಗಲೇ 2.5 ರಿಂದ 5ಲಕ್ಷ ರೂ.ವರೆಗೆ ಇರುವ ಶೇ. 5 ರ ಟ್ಯಾಕ್ಸ್ ಸ್ಲ್ಯಾಬ್ ಅನ್ನು ಹಾಗೆಯೇ ಉಳಿಸಿಕೊಂಡು, 5-10 ಲಕ್ಷದವರೆಗಿನ ಆದಾಯಕ್ಕೆ ಇರುವ ಶೇ.20ರ ಟ್ಯಾಕ್ಸ್ ಸ್ಲ್ಯಾಬ್ ಅನ್ನು ಶೇ.10 ಕ್ಕೆ ಇಳಿಸಲಿದೆ ಎಂಬ ವದಂತಿ ಹಬ್ಬಿದೆ. ಜೊತೆಗೆ 10 ಲಕ್ಷ ರೂ. ಗಿಂತ ಹೆಚ್ಚಿನ ಆದಾಯಕ್ಕೆ ಇರುವ ಶೇ.30 ರ ಆದಾಯ ತೆರಿಗೆಯನ್ನು 10-20 ಲಕ್ಷದವರೆಗಿನ ಆದಾಯಕ್ಕೆ ಶೇ. 20 ರಷ್ಟು ಎಂದು ಇಳಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ.
ಹೊಸ ಸ್ಲ್ಯಾಬ್ ಗಳು
20 ಲಕ್ಷ ರೂ.ಯಿಂದ 2 ಕೋಟಿ ರೂ. ವರೆಗಿನ ಆದಾಯಕ್ಕೆ ಶೇ. 30 ರಷ್ಟು ಆದಾಯ ತೆರಿಗೆ ಮತ್ತು 2 ಕೋಟಿಗಿಂತ ಹೆಚ್ಚಿನ ಆದಾಯಕ್ಕೆ ಶೇ. 35 ರಷ್ಟು ಆದಾಯ ತೆರಿಗೆ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇದು ಸತ್ಯವಾದರೆ ಈಗಾಗಲೇ ಶೇ.20 ಮತ್ತು 30ಷ್ಟು ತೆರಿಗೆ ಕಟ್ಟುತ್ತಿರುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಅತೀ ಹೆಚ್ಚಿನ ಅನುಕೂಲವಾಗಲಿದೆ.
ಕಾರ್ಪೋರೇಟ್ ಟ್ಯಾಕ್ಸ್ ಇಳಿಕೆ
ಭಾರತೀಯ ದೇಸೀ ಕಂಪೆನಿಗಳ ಮೇಲಿನ ಕಾರ್ಪೋರೇಟ್ ಟ್ಯಾಕ್ಸ್ ಅನ್ನು ಸರ್ಕಾರ ಇತ್ತೀಚೆಗಷ್ಟೇ ಶೇ.30 ರಿಂದ ಶೇ. 22 ಗೆ ಇಳಿಸಿತ್ತು. ಭಾರತದ ಕಂಪೆನಿಗಳಿಗೆ ಈ ಮೂಲಕ ಉತ್ತೇಜನ ನೀಡಿದ ಸರ್ಕಾರದ ನಡೆಯನ್ನು ಉದ್ಯಮಿಗಳು ಸ್ವಾಗತಿಸಿದ್ದರು.