ವಿಶ್ವದ ಅತಿಶ್ರೀಮಂತನಿಗೆ ಅತ್ಯುತ್ತಮ ಹೂಡಿಕೆ ಸಲಹೆ ಕೊಟ್ಟ ಭಾರತೀಯ ಉದ್ಯಮಿ
ಬೆಂಗಳೂರು, ಮೇ 8: ಮಂಗಳ ಗ್ರಹದಲ್ಲಿ ಮಾನವನ ವಸಾಹತು ನಿರ್ಮಿಸುವ ಧ್ಯೇಯೋದ್ದೇಶ ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಈಗ ಟ್ವಿಟ್ಟರ್ ಮೇಲೆ ಹೂಡಿಕೆ ಮಾಡುತ್ತಿರುವುದು ಹಲವರಿಗೆ ಅರಿವಿರಬಹುದು. ಟ್ವಿಟ್ಟರ್ನಂಥ ಆದಾಯ ಕಾಣದ ಕಂಪನಿಗೆ ಮಸ್ಕ್ ಹೇಗೆ ಹೂಡಿಕೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ಮಂದಿ ಅಚ್ಚರಿ ಪಟ್ಟಿರುವುದುಂಟು. ಇದೇ ಹೊತ್ತಲ್ಲಿ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸುವ ಸೀರಂ ಸಂಸ್ಥೆಯ (Serum Institute of India) ಸಿಇಒ ಆದಾರ್ ಪೂನಾವಾಲ ಅವರು ಎಲಾನ್ ಮಸ್ಕ್ಗೆ ಒಂದು ಅದ್ಭುತ ಹೂಡಿಕೆ ಸಲಹೆ ಕೊಟ್ಟಿದ್ದಾರೆ. ಎಲೆಕ್ಟ್ರಿಕ್ ಕಾರುಗಳನ್ನ ತಯಾರಿಸುವ ಟೆಸ್ಲಾ ಕಂಪನಿಯ ಮಾಲೀಕರೂ ಆದ ಎಲಾನ್ ಮಸ್ಕ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಎಂದು ಪೂನಾವಾಲ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಎಲಾನ್ ಮಸ್ಕ್ ಅವರನ್ನ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಆದಾರ್ ಪೂನವಾಲ, "...ಒಂದು ವೇಳೆ ನೀವು ಟ್ವಿಟ್ಟರ್ ಖರೀದಿಸದೇ ಹೋದಲ್ಲಿ, ಆ ಬಂಡವಾಳದ ಕೆಲ ಹಣವನ್ನು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಟೆಸ್ಲಾ ಕಾರುಗಳ ತಯಾರಿಕೆಗೆ ಹೂಡಬಹುದಾ ನೋಡಿ... ಇದು ನಿಮ್ಮ ಪಾಲಿಗೆ ಅತ್ಯುತ್ತಮ ಹೂಡಿಕೆ ಆಗುತ್ತದೆಂಬುದನ್ನು ನಾನು ಖಾತ್ರಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಟ್ವಿಟ್ಟರ್ ಮಾರಾಟ: ವಿವಾದದಲ್ಲಿ ವಿನೀತಾ ಹೆಸರು- ಯಾರು ಈ ಭಾರತೀಯ ಮೂಲದ ಮಹಿಳೆ?
ಭಾರತದಲ್ಲಿ ಈಗ ಎಲೆಕ್ಟ್ರಿಕ್ ಕಾರುಗಳಿಗೆ ಸರಕಾರ ಉತ್ತೇಜನ ಕೊಡುತ್ತಿದೆ. ಈ ಸಂದರ್ಭದಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಮುಂದಾದರೆ ಒಳ್ಳೆಯ ಲಾಭ ಗಿಟ್ಟಿಸಬಹುದು ಎಂಬುದು ಎಸ್ಐಐ ಸಿಇಒ ಅನಿಸಿಕೆ.
ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಭಾರತ ಸರಕಾರ ಆಮದು ಸುಂಕ ವಿಧಿಸುತ್ತದೆ. ಇದರಿಂದ ಟೆಸ್ಲಾ ಕಾರುಗಳನ್ನ ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಇದನ್ನು ತಪ್ಪಿಸಲು ಆಮದು ಸುಂಕವನ್ನು ಕಡಿಮೆಗೊಳಿಸಿ ಎಂದು ಎಲಾನ್ ಮಸ್ಕ್ ಭಾರತ ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ, ಭಾರತದಲ್ಲಿ ತಯಾರಾಗದ ಕಾರುಗಳಿಗೆ ಆಮದು ಸುಂಕದ ಪ್ರಮಾಣ ಇಳಿಸಲು ಸಾಧ್ಯ ಇಲ್ಲ ಎಂದು ಸರಕಾರ ಬಹಳ ಸ್ಪಷ್ಟವಾಗಿ ಹೇಳಿದೆ.
ಟ್ವೀಟ್ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲ
ಚೀನಾದಲ್ಲಿ ತಯಾರಾಗುವ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳನ್ನ ಭಾರತಕ್ಕೆ ರಫ್ತು ಮಾಡಲಾಗುತ್ತದೆ. ಈ ವಿಚಾರವನ್ನು ಪ್ರಸ್ತಾಪಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, "ಟೆಸ್ಲಾ ಕಂಪನಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನ ಭಾರತದಲ್ಲಿ ತಯಾರಿಸಲು ಸಿದ್ಧವಿದ್ದರೆ ಸರಿ. ಆದರೆ, ಚೀನಾದಿಂದ ಕಾರುಗಳನ್ನ ಆಮದು ಮಾಡಬಾರದು ಅಷ್ಟೇ," ಎಂದು ಖಡಾಖಂಡಿತವಾಗಿ ಅವರು ಹೇಳಿದ್ದರು.
ಆದರೆ, ಮಸ್ಕ್ ವಾದ ಬೇರೆ. "ಭಾರತದಲ್ಲಿ ಆಮದು ಮಾಡಿಕೊಂಡ ಟೆಸ್ಲಾ ವಾಹನಗಳು ಯಶಸ್ವಿಯಾದಲ್ಲಿ ಇಲ್ಲಿ ಕಾರು ಉತ್ಪಾದನೆ ಘಟಕ ಸ್ಥಾಪಿಸುವ ಆಲೋಚನೆ ಮಾಡಬಹುದು. ಆದರೆ, ಸದ್ಯ ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಬಿಡುಗಡೆ ಮಾಡಬೇಕೆಂದರೆ ಭಾರತದಲ್ಲಿರುವ ಆಮದು ಸುಂಕ ವಿಶ್ವದಲ್ಲೇ ಅತ್ಯಂತ ದುಬಾರಿಯದ್ದಾಗಿದೆ" ಎಂದು ಎಲಾನ್ ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು.
(ಒನ್ಇಂಡಿಯಾ ಸುದ್ದಿ)