ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅನ್ನೋದು ಬಹಳ ಜನಪ್ರಿಯವಾದ ಗಾದೆ ಮಾತು. ಭಾರತದ ಷೇರು ಮಾರುಕಟ್ಟೆಗೆ ಇದು ತುಂಬ ಸರಿಯಾಗಿ ಅನ್ವಯಿಸುತ್ತದೆ. ನಿಮ್ಮ ಮುಂದೆ ಕೆಲವು ಲೆಕ್ಕಾಚಾರಗಳನ್ನು ಇಡ್ತೀವಿ. ಅದನ್ನು ಓದಿದ ಮೇಲೆ ನೀವೇ ನಿರ್ಧರಿಸಿ, ಕಟ್ಟುವ ಹಾಗೂ ಕೆಡುವುವ ಆಟದ ವೇಗ ಯಾವ ಪರಿ ಇರುತ್ತದೆ?
25 ದಿನದ ವಹಿವಾಟಿನಲ್ಲಿ 4600 ಅಂಶಕ್ಕೂ ಹೆಚ್ಚು ನಷ್ಟ ಅನುಭವಿಸಿದೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್). ಹೂಡಿಕೆದಾರರ ಲಕ್ಷಾಂತರ ಕೋಟಿ ರುಪಾಯಿ ಕೊಚ್ಚಿಹೋಗಿದೆ. ಆದರೆ ಇದು ಇಲ್ಲಿಗೇ ಕೊನೆ ಎಂದು ನಿಟ್ಟುಸಿರು ಬಿಡುವಂತಿಲ್ಲ. ಇನ್ನೂ ಭೀಕರ ದಿನಗಳು ಮುಂದೆ ಇವೆ.
ಮಾರುಕಟ್ಟೆ ತಜ್ಞರೊಬ್ಬರು ಹೇಳುವ ಪ್ರಕಾರ, ಇನ್ನು ಆರು ವಾರದೊಳಗೆ ಮತ್ತೊಂದು ಭೀಕರ ಸುನಾಮಿ ಷೇರು ಮಾರುಕಟ್ಟೆಯನ್ನು ನಡುಗಿಸಲಿದೆ. ಹಾಗಂತ ಇದು ಸುಮ್ಮನೆ ನನ್ನದೂ ಒಂದು ಮಾತಿರಲಿ ಎಂದು ಹೇಳಿರುವುದಲ್ಲ. ಅದಕ್ಕೆ ಸೂಕ್ತವಾದ ಕಾರಣಗಳನ್ನು ಸಹ ನೀಡಿದ್ದಾರೆ.
800ಕ್ಕೂ ಹೆಚ್ಚು ಅಂಶ ಕುಸಿತ ಕಂಡ ಸೆನ್ಸೆಕ್ಸ್ ಸಾರ್ವಕಾಲಿಕ 13 ದಾಖಲೆ
ಭಾರತದ ಷೇರು ಮಾರುಕಟ್ಟೆ ತುಂಬ ಸೂಕ್ಷ್ಮವಾಗಿ ಬಿಟ್ಟಿದೆ. ತೈಲ ಬೆಲೆ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ಇತರೆ ಕಾರ್ಪೊರೇಟ್ ಸುದ್ದಿಯ ಕಾರಣಕ್ಕೆ ಷೇರು ಮಾರುಕಟ್ಟೆ ದುರ್ಬಲವಾಗಿದೆ. ಮುಂಬರುವ ದಿನಗಳಲ್ಲಿ ತಲ್ಲಣ ಹುಟ್ಟಿಸುವಂಥ ಇನ್ನಷ್ಟು ಘಟನೆಗಳು ಕಣ್ಣೆದುರು ಇವೆ. ಅದರಲ್ಲಿ ಇರಾನ್ ಮೇಲೆ ಅಮೆರಿಕದ ಆರ್ಥಿಕ ದಿಗ್ಬಂಧನ, ಅಮೆರಿಕ ಮಧ್ಯಮವಾಧಿ ಚುನಾವಣೆ, ಭಾರತದಲ್ಲೇ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಸೇರಿಕೊಂಡಿದೆ.
9900 ಅಂಶಗಳತ್ತ ಸಾಗುತ್ತಿದೆ ನಿಫ್ಟಿ 50 ಸೂಚ್ಯಂಕ
ಐವತ್ತು ಷೇರುಗಳ ಗುಚ್ಛವಿರುವ ನಿಫ್ಟಿ 50 ಸೂಚ್ಯಂಕವು 9900 ಅಂಶಗಳತ್ತ ಸಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಭವಿಷ್ಯವನ್ನೇ ನಂಬಿ ಹೇಳುವುದಾದರೆ ಸದ್ಯಕ್ಕೆ ನಿಫ್ಟಿ ಇರುವ ಸ್ಥಿತಿಯಿಂದ ಇನ್ನೂ 400 ಅಂಶ ಹಾಗೂ ಸೆನ್ಸೆಕ್ಸ್ 1200 ಅಂಶದಷ್ಟು ಕುಸಿತ ಕಾಣಬಹುದು. ಮುಂದಿನ ಒಂದೂವರೆ ತಿಂಗಳು ಷೇರು ಹೂಡಿಕೆದಾರರಿಗೆ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅತಿ ದೊಡ್ಡ ಸಮಸ್ಯೆ ಇರುವುದು ಇರಾನ್ ಮೇಲೆ ಅಮೆರಿಕ ವಿಧಿಸಲಿರುವ ಆರ್ಥಿಕ ದಿಗ್ಬಂಧನದ್ದು. ಅದು ನವೆಂಬರ್ ನಾಲ್ಕರಿಂದ ಜಾರಿಗೆ ಬರಲಿದೆ. ಭಾರತದ ಶೇಕಡಾ ಹತ್ತರಿಂದ ಹನ್ನೆರಡರಷ್ಟು ತೈಲ ಆಮದು ಆಗುವುದು ಇರಾನ್ ನಿಂದಲೇ. ಆದ್ದರಿಂದ ತೈಲ ಸರಬರಾಜಿನಲ್ಲಿ ಭಾರೀ ವ್ಯತ್ಯಯ ಆಗಲಿದೆ. ಕಚ್ಚಾ ತೈಲ ಹೆಚ್ಚು ಉತ್ಪಾದನೆ ಮಾಡುವಂತೆ ಅಮೆರಿಕವು ರಷ್ಯಾ ಹಾಗೂ ಸೌದಿ ಅರೇಬಿಯಾಗೆ ಹೇಳಿದ್ದರೂ ಆ ಸೂಚನೆಯನ್ನು ಜಾರಿಗೆ ತಂದಿಲ್ಲ. ಆದ್ದರಿಂದ ತೈಲ ಬೆಲೆ ಏರಿಕೆ ಖಂಡಿತ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಇನ್ನು ಈಗಿಂದ ಆರು ವಾರ ಅಂದರೆ ನವೆಂಬರ್ ಮಧ್ಯದವರೆಗೆ ಆರ್ಥಿಕ ದಿಗ್ಬಂಧನದ ಪರಿಣಾಮ ಏನು ಎಂಬುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಅನುಭವಿ ಹೂಡಿಕೆದಾರರು.
ವಿದೇಶಿ ಹೂಡಿಕೆದಾರರಿಂದ 17,664 ಕೋಟಿ ರುಪಾಯಿ ಹಿಂತೆಗೆತ
ಈ ಮಧ್ಯೆ ಭಾರತ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ವಿದೇಶಿ ಹಣವನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷ ಇಲ್ಲಿಯವರೆಗೆ 17,664 ಕೋಟಿ ರುಪಾಯಿಯನ್ನು ವಿದೇಶಿ ಹೂಡಿಕೆದಾರರು ಮಾರುಕಟ್ಟೆಯಿಂದ ವಾಪಸ್ ತೆಗೆದುಕೊಂಡಿದ್ದಾರೆ. 2008ರಲ್ಲಿ ಒಮ್ಮೆ ಹೀಗೇ ಆಗಿತ್ತು. ಆ ಸಂದರ್ಭದಲ್ಲಿ 52,987 ಕೋಟಿ ರುಪಾಯಿ ಹಣವನ್ನು ಪಡೆದಿದ್ದರು. ಆ ನಂತರ ಬೀಳುತ್ತಿರುವ ದೊಡ್ಡ ಪೆಟ್ಟು ಇದು. ಕಳೆದ ಮೂರು ವಹಿವಾಟಿನಲ್ಲೇ ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆದಾರರು 1500ರಿಂದ 1600 ಕೋಟಿ ರುಪಾಯಿಯನ್ನು ಹಿಂತೆಗೆದುಕೊಂಡಿದ್ದಾರೆ. ಜಾಗತಿಕ ಪರಿಸ್ಥಿತಿ ಬಿಗಡಾಯಿಸುತ್ತಾ ಹೋದರೆ ವಿದೇಶಿ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಮುಂದುವರಿಸುತ್ತಾರೆ. BSE 200 ಸೂಚ್ಯಂಕದಲ್ಲಿ ವಿದೇಶಿ ಹೂಡಿಕೆದಾರರು $ 408 ಬಿಲಿಯನ್ ನಷ್ಟು ಷೇರುಗಳನ್ನು ಹೊಂದಿದ್ದಾರೆ. ಮಾರುಕಟ್ಟೆ ನಗದು ಮೂಲಕ ನಡೆಯುತ್ತದೆ. ಮ್ಯೂಚುವಲ್ ಫಂಡ್ ಗಳು ಈ ವರ್ಷ ನಷ್ಟದಲ್ಲಿವೆ. ಹೇಗೋ ಸ್ಥಳೀಯ ಹೂಡಿಕೆ ತರುವಲ್ಲಿ ಅವು ಯಶಸ್ವಿಯಾಗಿವೆ. ನಷ್ಟ ಆದರೂ ದೇಶೀ ಹೂಡಿಕೆದಾರರು ಮಾರದೆ ಉಳಿಸಿಕೊಳ್ಳಬಹುದಾ ಎಂಬ ಪ್ರಶ್ನೆ ಹಾಗೇ ಇದೆ. ಈ ಗೊಂದಲ ಬಹಳ ಕಾಲ ಇರುವುದಿಲ್ಲ ಎನ್ನುತ್ತಾರೆ ಹೂಡಿಕೆದಾರರಿಗೆ ಸಲಹೆ ಮಾಡುವವರು.
ಅಮೆರಿಕ ಮಧ್ಯಾವಧಿ ಚುನಾವಣೆ ಫಲಿತಾಂಶ ಏನಾಗಬಹುದು?
ಅಮೆರಿಕದ ಮಧ್ಯಾವಧಿ ಚುನಾವಣೆ ನಂತರ ಮಿತ್ರ ದೇಶಗಳ ಜತೆಗೆ ಹೇಗೆ ನಡೆದುಕೊಳ್ಳಬಹುದು ಎಂಬುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಚೀನಾದ ಜತೆಗಿನ ವ್ಯಾಪಾರ ಸಮರ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಅಮೆರಿಕದ ಮಧ್ಯಾವಧಿ ಚುನಾವಣೆ ಮೇಲೆ ಪರಿಣಾಮ ಬೀರಲಿವೆ. ಅಮೆರಿಕದ ಆಮದು ವಸ್ತುವಿನ ಮೇಲೆ ಸುಂಕ ಇಳಿಸಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ಭಾರತವು ನಿರ್ಧಾರ ಕೈಗೊಂಡಿಲ್ಲ. ನವೆಂಬರ್ ಹದಿನೆಂಟರವರೆಗೆ ಕಾದು ನೋಡಲು ತೀರ್ಮಾನಿಸಿದೆ. ಅಮೆರಿಕವು ಇರಾನ್ ಮೇಲಿನ ಆರ್ಥಿಕ ದಿಗ್ಬಂಧನದ ವಿಚಾರವಾಗಿ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲು ತೀರ್ಮಾನಿಸಿದೆ. 2013ರಲ್ಲಿ ಇರಾನ್ ಮೇಲಿನ ದಿಗ್ಬಂಧನದ ವಿಚಾರದಲ್ಲಿ ಭಾರತಕ್ಕೆ ಭಾಗಶಃ ವಿನಾಯಿತಿ ದೊರೆತಿತ್ತು. ದಿಗ್ಬಂಧನ ಮುಂದುವರಿದರೆ ಅಂತರರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಆಗುತ್ತದೆ. ಅದರಲ್ಲೂ ಭಾರತದ ಮೇಲೇ ಹೆಚ್ಚಿನ ಪರಿಣಾಮ ಆಗುತ್ತದೆ. ದೇಶೀಯವಾಗಿ ತೈಲಕ್ಕೆ ಹೆಚ್ಚಿನ ಬೇಡಿಕೆ, ಹಣದುಬ್ಬರ, ರುಪಾಯಿ ಮೌಲ್ಯ ಕುಸಿತ ಹೀಗೆ ನಾನಾ ಸವಾಲುಗಳಿವೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ವಿಧಾನಸಭೆ ಚುನಾವಣೆ ಫಲಿತಾಂಶ ಗಮನಿಸುವ ಹೂಡಿಕೆದಾರರು
ರಾಜಸ್ತಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್ ಗಢ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಮುಂದಿನ ವರ್ಷ ಮೇನಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಎಂಥ ಫಲಿತಾಂಶ ಬರಬಹುದು ಎಂಬ ಸುಳಿವನ್ನು ಈ ಚುನಾವಣೆಗಳು ಬಿಟ್ಟುಕೊಡಬಹುದು ಎಂಬ ನಿರೀಕ್ಷೆ ಇದೆ. ಒಂದು ವೇಳೆ ಹೂಡಿಕೆದಾರರ ನಿರೀಕ್ಷೆಗೆ ವಿರುದ್ಧವಾಗಿ ಏನಾದರೂ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದರೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಆಗುವುದು ನಿಶ್ಚಿತ. ಭಾರತದ ಷೇರು ಮಾರುಕಟ್ಟೆಯಲ್ಲಿ ಬಹಳ ಕುಸಿತ ಆಗಬಹುದು. ಜಾಗತಿಕ ಮಟ್ಟದ ಉಳಿದ ಷೇರು ಮಾರುಕಟ್ಟೆಯನ್ನು ಹೋಲಿಸಿದರೆ ಭಾರತದ ಸ್ಥಿತಿ ವಿಭಿನ್ನವಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ ಎರಡೂವರೆ ರುಪಾಯಿ ಕಡಿತ ಮಾಡಿದರೂ ಹೂಡಿಕೆದಾರರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆ ಕಾರಣಕ್ಕೆ ಬೇರೆ ಜನಪ್ರಿಯ ಯೋಜನೆಗಳನ್ನು ಘೋಷಿಸಬೇಕಾದ ಒತ್ತಡದಲ್ಲಿ ಸರಕಾರವಿದೆ. ಈ ಹಿಂದೆ ಗುಜರಾತ್, ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಹೂಡಿಕೆದಾರರು ನಕಾರಾತ್ಮಕವಾಗಿ ಸ್ಮಂದಿಸಿದ್ದರು.