ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!
ರೊಟೊಮ್ಯಾಕ್ ಪೆನ್ಸ್ ನ ವಂಚನೆ ಪ್ರಕರಣದಲ್ಲಿ ಸಿಬಿಐ ವಿಚಾರಣೆಯಿಂದ ಬಹಳ ಕುತೂಹಲಕರವಾದ ಅಂಶ ಬಯಲಾಗಿದೆ. ರಫ್ತು ಮಾಡುವ ಸಲುವಾಗಿ ಅದರಲ್ಲೂ ನಿರ್ದಿಷ್ಟ ಆರ್ಡರ್ ನ ರಫ್ತಿಗಾಗಿ ಮಂಜೂರಾದ ಸಾಲ ಹೇಗೆ ವಿದೇಶದಲ್ಲಿನ ಕಂಪೆನಿಗಳಿಗೆ ಹೋಗುತ್ತಿತ್ತು? ಆ ನಂತರ ವಸ್ತು ರಫ್ತೇ ಆಗದೆ ಅದೇ ಹಣ ಕಾನ್ಪುರದ ಕಂಪೆನಿಯೊಂದಕ್ಕೆ ಹೇಗೆ ವಾಪಸಾಗುತ್ತಿತ್ತು ಅನ್ನೋದನ್ನು ಸಿಬಿಐ ಪತ್ತೆ ಹಚ್ಚಿದೆ.
ರೊಟೊಮ್ಯಾಕ್ ಪೆನ್ಸ್ ಹಗರಣದ ಒಟ್ಟು ಮೊತ್ತ 2,919 ಕೋಟಿ ಎಂದು ಸಿಬಿಐ ವಿಚಾರಣೆ ಕೈಗೆತ್ತಿಕೊಂಡಿದೆ. ಆದರೆ ಸಾಲ, ಬಡ್ಡಿ ಎಲ್ಲವೂ ಸೇರಿ ಆ ಮೊತ್ತ 3,695 ಕೋಟಿ ರುಪಾಯಿಗೆ ಬಂದು ನಿಂತಿದೆ. ರೊಟೊಮ್ಯಾಕ್ ನ ಮಾಲೀಕ ವಿಕ್ರಮ್ ಕೊಠಾರಿ ಮತ್ತು ಅವರ ಕುಟುಂಬದ ಮೇಲೆ ವಿಶ್ವಾಸದ್ರೋಹದ ಕ್ರಿಮಿನಲ್ ಪ್ರಕರಣವನ್ನು ಸಿಬಿಐ ದಾಖಲಿಸಿದೆ.
ಬ್ಯಾಂಕಿಗೆ 800 ಕೋಟಿ ರೂ. ವಂಚಿಸಿದ ಮತ್ತೋರ್ವ ಉದ್ಯಮಿ ಮೇಲೆ ಸಿಬಿಐ ಎಫ್ಐಆರ್
ಇದರ ಜತೆಗೆ ಅಕ್ರಮ ಹಣ ವರ್ಗಾವಣೆ, ದುರುಪಯೋಗ ಹಾಗೂ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯ ಪ್ರಕರಣ ಕೂಡ ದಾಖಲಾಗಿದೆ. ರೊಟೊಮ್ಯಾಕ್ ನ ವೆಬ್ ಸೈಟ್ ಪ್ರಕಾರ, ಕಾನ್ಪುರ, ಲಖನೌ, ಡೆಹ್ರಾಡೂನ್ ಮತ್ತು ಅಹ್ಮದಾಬಾದ್ ನಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳು ಸೇರಿದ ಹಾಗೆ ವಿವಿಧ ವ್ಯವಹಾರಗಳನ್ನು ಮುನ್ನಡೆಸುತ್ತಿರುವವರು ಕೊಠಾರಿ.
ಸಾಲದ ಮೊತ್ತವನ್ನು ರಫ್ತಿಗೆ ಬಳಸಿಲ್ಲ
ಈಗ ಸಿಬಿಐನವರು ಹೇಳುತ್ತಿರುವುದು ಏನೆಂದರೆ, ರಫ್ತು ಮಾಡುವ ಸಲುವಾಗಿ ಸರಕು ಖರೀದಿಗೆಂದು ಬ್ಯಾಂಕ್ ಗಳಿಂದ ಯಾವ ಸಾಲದ ಮೊತ್ತ ಬಿಡುಗಡೆ ಆಯಿತೋ ಆ ಹಣವನ್ನು ಅದಕ್ಕಾಗಿ ಬಳಸಿಲ್ಲ. ಅಷ್ಟೇ ಅಲ್ಲ, ಯಾವುದೇ ರಫ್ತು ಆರ್ಡರ್ ರೊಟೊಮ್ಯಾಕ್ ನವರು ನೀಡಿಲ್ಲ. ಅಂಥ ಯಾವ ಏಜೆನ್ಸಿಯೂ ಪತ್ತೆಯಾಗಿಲ್ಲ.
ಬಡ್ಡಿ ದರವು ಸ್ಥಳೀಯ ಹಾಗೂ ವಿದೇಶಿ ಕರೆನ್ಸಿ ಲೆಕ್ಕಾಚಾರದಲ್ಲಿ ವ್ಯತ್ಯಾಸ
ಇನ್ನು ಬ್ಯಾಂಕ್ ಗಳಿಂದ ಮುಂಗಡವಾಗಿ ಹಣ ಸಾಲ ಪಡೆಯಲು ನೀಡಿದ ನಕಲಿ ದಾಖಲೆಗಳನ್ನು ಕೊಡಲಾಗಿತ್ತೇ ಎಂಬುದನ್ನು ಪತ್ತೆ ಮಾಡಲು ಸಹ ತನಿಖೆ ಆರಂಭಿಸಲಾಗಿದೆ. ಬಹಳ ವಹಿವಾಟನ್ನು ನಿಯಮಿತ ಸಂಖ್ಯೆಯ ಖರೀದಿದಾರರು ಮತ್ತು ಕಂಪೆನಿಗಳ ಜತೆ ಮಾಡಿದ್ದು, ಬಡ್ಡಿ ದರವು ಸ್ಥಳೀಯ ಹಾಗೂ ವಿದೇಶಿ ಕರೆನ್ಸಿ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ.
ಬ್ಯಾಂಕ್ ಗಳಿಗೆ ಸಲ್ಲಿಸಿದ ಬಿಲ್ ಗಳು ನಕಲು ಪ್ರತಿಗಳು
ಆದ್ದರಿಂದ ಸಿಬಿಐ ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಕೂಡ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಬಿಐಗೆ ಮತ್ತೊಂದು ಪ್ರಮುಖ ಅಂಶವೂ ಗಮನಕ್ಕೆ ಬಂದಿದೆ. ಕೊಠಾರಿ ಬ್ಯಾಂಕ್ ಗಳಿಗೆ ಸಲ್ಲಿಸಿದ ಬಿಲ್ ಗಳು ನಕಲು ಪ್ರತಿಗಳು ಎಂಬ ಸಂಗತಿ ಬಯಲಾಗಿದೆ. ಸರಕುಗಳಿಗೆ ಮಾಡಿಸಬೇಕಾದ ವಿಮೆಯ ದಾಖಲೆ ಪ್ರತಿಗಳನ್ನು ಸಹ ಕೊಠಾರಿ ಬ್ಯಾಂಕ್ ಗೆ ಸಲ್ಲಿಸಿಲ್ಲ.
ಜಾರಿ ನಿರ್ದೇಶನಾಲಯದಿಂದಲೂ ತನಿಖೆ
ಸಿಬಿಐ ಜತೆಗೆ ಜಾರಿ ನಿರ್ದೇಶನಾಲಯ ಕೂಡ ತನಿಖೆಗೆ ಕೈ ಜೋಡಿಸಿದೆ. ಅಕ್ರಮ ಹಣ ವರ್ಗಾವಣೆ ಆಗಿದೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಕೈಗೊಳ್ಳುತ್ತಾರೆ. ಅಕ್ರಮವಾದ ಅಸ್ತಿಗಾಗಿ ಅಥವಾ ಕಪ್ಪು ಹಣವಾಗಿ ಬ್ಯಾಂಕ್ ನಿಂದ ಮಂಜೂರಾದ ಸಾಲ ಬಳಕೆ ಆಗಿದೆಯಾ ಎಂಬ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.