ಅಕ್ಕಿ ಮೇಲೆ ಆಸೆ ಇದ್ದರೆ ಕಡಿಮೆ ಮಾಡಿಕೊಂಡು ಬನ್ನಿ!
ನವದೆಹಲಿ, ನವೆಂಬರ್, 16: ಈರುಳ್ಳಿ, ಬೇಳೆಕಾಳು ನಂತರ ಇದೀಗ ಬೆಲೆ ಏರಿಕೆ ಗ್ರಹಣ ಅಕ್ಕಿಗೆ ತಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಮೂರು ತಿಂಗಳಲ್ಲಿ ಅಕ್ಕಿ ಬೆಲೆ ದುಪ್ಪಟ್ಟಾಗಲಿದೆ ಎಂದು ಅಸೋಚಾಮ್ ಎಚ್ಚರಿಸಿದೆ.
ಭತ್ತ ಬೆಳೆಯುವ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯಾಗಿಲ್ಲ. ಮಳೆ ಕೊರತೆ ಪರಿಣಾಮ ಬರ ಪರಿಸ್ಥಿತಿ ತಲೆದೋರಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಕಳೆದ 3 ವರ್ಷಗಳಿಂದ ಅಕ್ಕಿ ಉತ್ಪಾದನೆ ಕುಂಠಿತವಾಗಿದೆ. 2012ರಲ್ಲಿ 24.59 ಮೆಟ್ರಿಕ್ ಟನ್ ಇದ್ದ ಅಕ್ಕಿ ದಾಸ್ತಾನು ಈಗ 13.89 ಮೆಟ್ರಿಕ್ ಟನ್ ಇದೆ. ಮುಂಗಾರು ಕೊರತೆ ಪರಿಣಾಮ ಕೃಷಿ ಉತ್ಪನ್ನ ಮತ್ತು ಬೆಲೆ ಮೇಲೆ ನೇರ ಪರಿಣಾಮ ಬೀರಿದೆ. ದೇಶಕ್ಕೆ ಪ್ರತಿ ತಿಂಗಳಿಗೆ 8.5 ರಿಂದ 9 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಇದೇ ಬಗೆಯಲ್ಲಿ ಲೆಕ್ಕ ಮಾಡಿದರೆ ವಾರ್ಷಿಕವಾಗಿ 108 ಮೆಟ್ರಿಕ್ ಟನ್ ಅಕ್ಕಿ ಬೇಕು. ಆದರೆ ಈಗಿರುವ ಸಂಗ್ರಹ ಲೆಕ್ಕಾಚಾರಕ್ಕೆ ಹೊಂದಿಕೆಯಾಗುತ್ತಿಲ್ಲ.[ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]
ಭಾರತ ವಿದೇಶಕ್ಕೆ ಹೆಚ್ಚಿನ ಅಕ್ಕಿ ಪೂರೈಸುತ್ತಿದ್ದು, ದೇಶದಲ್ಲಿನ ಸುಧಾರಣಾ ಯೋಜನೆಗಳಿಗೆ ಸಂಬಂಧಿಸಿ ಅಕ್ಕಿ ಪೂರೈಕೆ ಮುಂದುವರಿದಿದೆ. ಇದರಿಂದ ದಾಸ್ತಾನು ಕಡಿಮೆಯಾಗುತ್ತಿದೆ. ಮಾರುಕಟ್ಟೆ ಮೇಲೆ ಸರ್ಕಾರಗಳು ಈಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ದರ ನಿಯಂತ್ರಂಣದ ಕಡೆ ಹೆಜ್ಜೆ ಇಡಬಹುದು. ಬೇಳೆ ಕಾಳಿಗೆ ದುಬಾರಿ ದರ ತೆತ್ತು ಹೈರಾಣಾದ ಗ್ರಾಹಕ ಇನ್ನು ಮುಂದೆ ಅಕ್ಕಿಗೆ ಹೆಚ್ಚಿನ ಬೆಲೆ ತೆರಬೇಕಾಗಿ ಬಂದರೂ ಆಶ್ಚರ್ಯವಿಲ್ಲ.