ಕೋವಿಡ್ ಬಾಧಿತ ರಾಜ್ಯಗಳಿಗೆ ರಿಲಯನ್ಸ್ನಿಂದ ಆಮ್ಲಜನಕ ಪೂರೈಕೆ
ನವದೆಹಲಿ, ಏಪ್ರಿಲ್ 21: ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ತನ್ನ ಜಾಮ್ನಗರ ತೈಲ ಸಂಸ್ಕರಣೆ ಘಟಕವನ್ನು ವೈದ್ಯಕೀಯ ಶ್ರೇಣಿಯ ಆಮ್ಲಜನಕ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಿದೆ.
ಪ್ರತಿ ದಿನ ಇಲ್ಲಿ 700 ಟನ್ಗೂ ಅಧಿಕ ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದು, ಕೋವಿಡ್-19ರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ.
ಆಸ್ಪತ್ರೆಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಆರಂಭಿಸಿದ BPCL
ಗುಜರಾತ್ನ ಜಾಮ್ನಗರದಲ್ಲಿರುವ ಸಂಸ್ಕರಣಾಗಾರವು ಆರಂಭದಲ್ಲಿ 100 ಟನ್ನಷ್ಟು ವೈದ್ಯಕೀಯ ಶ್ರೇಣಿಯ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಇದನ್ನು ಕೂಡಲೇ 700 ಟನ್ ಸಾಮರ್ಥ್ಯಕ್ಕೆ ವೃದ್ಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಇದು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 70,000ಕ್ಕೂ ಅಧಿಕ ರೋಗಿಗಳಿಗೆ ಪ್ರತಿ ದಿನ ನೆಮ್ಮದಿ ಒದಗಿಸುತ್ತಿದೆ. ಕಂಪೆನಿಯು ವೈದ್ಯಕೀಯ ಶ್ರೇಣಿಯ ಆಮ್ಲಜನಕ ಉತ್ಪಾದನೆ ಸಾಮರ್ಥ್ಯವನ್ನು 1,000 ಟನ್ಗೆ ಹೆಚ್ಚಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಯಾವುದೇ ಸಮಯದ ವಿವರವನ್ನು ನೀಡಿಲ್ಲ.
'ಗುಜರಾತ್ಗೆ ರಿಲಯನ್ಸ್ ಜಾಮ್ನಗರದಿಂದ ಪ್ರತಿ ದಿನವೂ 400 ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಇದು ಗುಜರಾತ್ ಕುರಿತ ನಮ್ಮ ಬದ್ಧತೆಯನ್ನು ತೋರಿಸುತ್ತದೆ' ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ರಿಲಯನ್ಸ್ ಮಾಲೀಕರ ಜತೆ ನಿಕಟ ಸಂಬಂಧ ಹೊಂದಿರುವ ಧನರಾಜ್ ನಥ್ವಾನಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಕೋವಿಡ್ 19ಕ್ಕೆ ಚಿಕಿತ್ಸೆ ಪ್ಲಾಸ್ಮಾ ಹುಡುಕಾಟ ಇಲ್ಲಿವೆ Helplines
ರಿಲಯನ್ಸ್ ಫೌಂಡೇಷನ್ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ನ (ಬಿಎಂಸಿ) ಸಹಯೋಗದಲ್ಲಿ ಮುಂಬೈನಲ್ಲಿ ದೇಶದ ಮೊದಲ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಿತ್ತು. 100 ಹಾಸಿಗೆಗಳ ಆಸ್ಪತ್ರೆಯನ್ನು ಕೇವಲ ಎರಡು ವಾರದಲ್ಲಿ ಸ್ಥಾಪಿಸಲಾಗಿತ್ತು. ಶೀಘ್ರದಲ್ಲೇ ಅದನ್ನು 250 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿತ್ತು.