ಎಲ್ಲರಿಗೂ ಮನೆಯೇನೋ ಸರಿ, ಬಜೆಟ್ ನಲ್ಲಿ ಇದಕ್ಕೆಲ್ಲ ಏನು ಮಾಡ್ತೀರಿ?
ಕೇಂದ್ರ ಬಜೆಟ್ ಬಂತೆಂದರೆ ಒಂದಿಷ್ಟು ನಿರೀಕ್ಷೆ, ಆಶಾವಾದ, ದೇಶದ ಆರ್ಥಿಕತೆಯಲ್ಲೇ ಬದಲಾವಣೆ ಆಗಬಹುದು ಎಂಬ ಭರವಸೆ ಒಟ್ಟೊಟ್ಟಿಗೆ ಮೂಡುತ್ತವೆ. ಕೆಲ ಬಾರಿ ಗಂಭೀರವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಆಡಳಿತ ನಡೆಸುವ ಸರಕಾರಕ್ಕೂ ಅನಿವಾರ್ಯ ಆಗುತ್ತದೆ. ಆದರೆ ಒಟ್ಟಾರೆ ನೋಡಿದಾಗ ಬಜೆಟ್ ನ ಉದ್ದೇಶವೇ ಜನರನ್ನು ಸಂಪ್ರೀತಿ ಮಾಡುವುದು.
ಯಾವುದೇ ಸರಕಾರ ತನ್ನ ಅಧಿಕಾರದ ಅವಧಿಯನ್ನು ಮುಗಿಸುವ ಹೊತ್ತಿಗೆ, ಸಾರ್ವತ್ರಿಕ ಚುನಾವಣೆ ಬರುವ ವೇಳೆಗೆ ಮತ್ತಿತರ ಕಾರಣಗಳಿಗಾಗಿ ಈ ರೀತಿಯಲ್ಲಿ ಜನರನ್ನು ಖುಷಿಗೊಳಿಸುವ ಬಜೆಟ್ ಕೊಡುತ್ತಲೇ ಇದ್ದಾರೆ. ಈಗಿನ ಕೇಂದ್ರ ಸರಕಾರ ರಿಯಲ್ ಎಸ್ಟೇಟ್ ಗಾಗಿ ಸಾಕಷ್ಟು ಮಾಡಿದೆ.
ಅದು ಅಪನಗದೀಕರಣ ಇರಬಹುದು ಅಥವಾ ರೇರಾ ಕಾಯ್ದೆ ಇರಬಹುದು. ಆದರೆ ಈ ಬಾರಿ ರಿಯಲ್ ಎಸ್ಟೇಟ್ ವಲಯದಲ್ಲಿ ಕೇಂದ್ರ ಬಜೆಟ್ ನ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ. ವೈಯಕ್ತಿಕ ಹಣಕಾಸು ವಲಯ ಅಷ್ಟೇ ಅಲ್ಲ, ರಿಯಲ್ ಎಸ್ಟೇಟ್ ನಲ್ಲಿ ಬಂಡವಾಳ ಹೂಡುವುದಕ್ಕೂ ಪ್ರೋತ್ಸಾಹಕರ ವಾತಾವರಣ ನಿರ್ಮಾಣ ಆಗಬೇಕು ಎಂಬುದು ಆ ವಲಯದ ಅಪೇಕ್ಷೆ, ನಿರೀಕ್ಷೆ, ತುರ್ತು ಎಲ್ಲವೂ ಆಗಿದೆ.
ಜಿಎಸ್ ಟಿ ಹೊಡೆತಕ್ಕೆ ಹುಬ್ಬಳ್ಳಿ- ಧಾರವಾಡ ರಿಯಲ್ ಎಸ್ಟೇಟ್ ಮಕಾಡೆ
ಇಡೀ ರಿಯಲ್ ಎಸ್ಟೇಟ್ ವಲಯದಲ್ಲೇ ಸ್ವಚ್ಛತಾ ಅಭಿಯಾನ ಆಗಿಬಿಡಬೇಕು ಎಂಬ ಬಗ್ಗೆ ಸರಕಾರ ಚಿಂತಿಸುತ್ತಿದ್ದು, ಈ ಬಾರಿಯ ಬಜೆಟ್ ನಲ್ಲಿ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿಬಿಟ್ಟರೆ ಬಹಳ ಸಮಸ್ಯೆ ಆಗುತ್ತದೆ ಎಂಬುದು ರಿಯಲ್ ಎಸ್ಟೇಟ್ ವಲಯದವರ ದುಗುಡ.
ಒಂದೇ ಕಡೆ ಯೋಜನೆ ಒಪ್ಪಿಗೆ
2022ರ ಹೊತ್ತಿಗೆ 'ಎಲ್ಲರಿಗೂ ಮನೆ' ಎಂಬ ದೊಡ್ಡ ಕನಸಿಟ್ಟುಕೊಂಡಿದೆ ಕೇಂದ್ರ ಸರಕಾರ. ಸದ್ಯಕ್ಕೆ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಗಬೇಕಾದ ಒಪ್ಪಿಗೆ, ಅನುಮತಿ ಇವೆಲ್ಲಕ್ಕೂ ಬಹಳ ಸಮಯ ಹಿಡಿಸುತ್ತಿದೆ. ಈ ವಲಯದ ವ್ಯವಹಾರಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ.
ಆದರೆ, ವಸತಿ ಯೋಜನೆಯ ಎಲ್ಲ ಬಗೆಯ ಒಪ್ಪಿಗೆ, ಪರವಾನಗಿ, ಅನುಮತಿ ಒಂದೇ ಸೂರಿನಡಿ ಸಿಗುವಂತಾಗಬೇಕು. ಆ ಬೇಡಿಕೆ ಈಡೇರಬೇಕು. ಒಂದು ವೇಳೆ ಇದು ಸಾಧ್ಯವಾದರೆ ಒಂದು ಯೋಜನೆ ಪೂರ್ಣಗೊಳ್ಳುವುದಕ್ಕೆ ತೆಗೆದುಕೊಳ್ಳುತ್ತಿರುವ ಸಮಯ ಕಡಿಮೆ ಆಗುತ್ತದೆ. ಡೆವಲಪರ್ ಗಳು ತಮ್ಮ ಮುಖ್ಯ ಕೆಲಸದ ಮೇಲೆ ಗಮನ ಹರಿಸಬಹುದು. ರೇರಾ ಜಾರಿ ನಂತರ ಮಂಜೂರಾತಿ ಹಾಗೂ ಅನುಮತಿ ವಿಚಾರದಲ್ಲಿ ಕೆಲಸಗಳು ಎಷ್ಟು ಸಲೀಸು ಹಾಗೂ ಬೇಗ ಮುಗಿದರೆ ಅಷ್ಟು ಒಳ್ಳೆಯದು.
ಕೈಗಾರಿಕೆ ಸ್ಥಾನ ಮಾನ
ರಿಯಲ್ ಎಸ್ಟೇಟ್ ವಲಯಕ್ಕೆ ಕೈಗಾರಿಕಾ ಸ್ಥಾನ ಮಾನ ಸಿಕ್ಕಿಲ್ಲ. ಹಾಗೆ ನೋಡಿದರೆ ದೇಶದ ಜಿಡಿಪಿಗೆ, ಉದ್ಯೋಗ ಸೃಷ್ಟಿಗೆ ಈ ವಲಯದ ಕೊಡುಗೆ ಅಪಾರವಾಗಿದೆ. ಇದು ಬಹು ಕಾಲದಿಂದ ಹಾಗೇ ಇರುವ ಬೇಡಿಕೆ. ಒಂದು ವೇಳೆ ಕೈಗಾರಿಕೆ ಸ್ಥಾನ ಮಾನ ನೀಡಿದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
ಒಟ್ಟಾರೆ ವಸತಿ ಯೋಜನೆಯ ವೆಚ್ಚ ಕಡಿಮೆ ಆಗುತ್ತದೆ. ಇದರಿಂದ ಬೇಡಿಕೆ ಹೆಚ್ಚುತ್ತದೆ. ಇದರಿಂದ ರಿಯಲ್ ಎಸ್ಟೇಟ್ ವಲಯದ ಪ್ರಗತಿಯಾಗಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ.
ತೆರಿಗೆ ನಿಯಮದಲ್ಲಿ ಬದಲಾವಣೆಯಾಗಬೇಕು
ಇಂದಿನವರೆಗೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ತೆರಿಗೆ ನಿಯಮಗಳು ಸರಳವಾಗಿಲ್ಲ. ಈಗಿನ ತುರ್ತು ಅಗತ್ಯಗಳಲ್ಲಿ ಇದೂ ಒಂದು. ಇದರಿಂದ ಇಡೀ ರಿಯಲ್ ಎಸ್ಟೇಟ್ ವಲಯಕ್ಕೆ ಅನುಕೂಲ ಆಗುತ್ತದೆ. ಅದೇನು ಆದಾಯ ತೆರಿಗೆ ನಿಯಮ ಎಂಬ ಪ್ರಶ್ನೆ ಬರುವುದು ಸಹಜ.
ಮೊದಲ ಸಲಕ್ಕೆ ಮನೆ ಖರೀದಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಬೇಕು. ಇದು ವಸತಿ ಯೋಜನೆಗಳನ್ನು ರೂಪಿಸುವ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಸಂಗತಿ. ಸದ್ಯಕ್ಕೆ ಮೊದಲ ಮನೆ ಖರೀದಿಸುವವರು ಹೆಚ್ಚುವರಿಯಾಗಿ ಐವತ್ತು ಸಾವಿರ ರುಪಾಯಿಯನ್ನು ಒಂದು ಆರ್ಥಿಕ ವರ್ಷದಲ್ಲಿ ಕ್ಲೇಮ್ ಮಾಡಬಹುದು. ಸೆಕ್ಷನ್ 80EE ಅಡಿಯಲ್ಲಿ. ಅದರಲ್ಲೂ ಕೆಲ ನಿಯಮಗಳನ್ನು ಪೂರೈಸಬೇಕಾಗುತ್ತದೆ. ಆದ್ದರಿಂದ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ನೀಡುವ ತೆರಿಗೆ ವಿನಾಯಿತಿಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಬೇಕು.
ಜಿಎಸ್ ಟಿ ದರ ತಗ್ಗಿಸಬೇಕು
ನಿರ್ಮಾಣ ಹಂತದ ಕಟ್ಟಡಗಳಿಗೆ ಸದ್ಯಕ್ಕೆ ಶೇ 12ರಷ್ಟು ಜಿಎಸ್ ಟಿ ಹಾಕಲಾಗುತ್ತಿದೆ. ಈ ಹಿಂದೆ ಇದ್ದ ತೆರಿಗೆ ಪ್ರಮಾಣಕ್ಕಿಂತ ಇದು ಹೆಚ್ಚು. ಆದ್ದರಿಂದ ಜಿಎಸ್ ಟಿ ಪ್ರಮಾಣದಲ್ಲಿ ಇಳಿಕೆ ಮಾಡದ ಹೊರತು ರಿಯಲ್ ಎಸ್ಟೇಟ್ ವಲಯ ಕುದುರಿಕೊಳ್ಳುವುದು ಕಷ್ಟ. ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆ ಹಾಗೂ ಪಾರದರ್ಶಕತೆ ತಂದರೆ ಅದರಿಂದಲೂ ಅನುಕೂಲವಾಗುತ್ತದೆ.
ಪರಿಸರಸ್ನೇಹಿ ಕಟ್ಟಡಗಳಿಗೆ ಹೆಚ್ಚಿನ ಸಹಾಯಧನ
ಪರಿಸರಸ್ನೇಹಿ ಕಟ್ಟಡಗಳ ನಿರ್ಮಾಣ ಮಾಡುವುದು ಈಗಿನ ಸನ್ನಿವೇಶದ ತುರ್ತು. ಆ ರೀತಿಯ ಕಟ್ಟಡ ನಿರ್ಮಾಣಕ್ಕೆ ವೆಚ್ಚ ಹೆಚ್ಚು ತಗುಲುತ್ತದೆ. ಆದ್ದರಿಂದ ಡೆವಲಪರ್ಸ್ ಗಳನ್ನು ಮತ್ತು ಖರೀದಿದಾರರನ್ನು ಉತ್ತೇಜಿಸುವ ಕಾರಣಕ್ಕೆ ಸರಕಾರದಿಂದ ಕೆಲ ಅನುಕೂಲಗಳನ್ನು ಮಾಡಿಕೊಡಬೇಕು. ಪರಿಸರಸ್ನೇಹಿ ಕಟ್ಟಡ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು.