ಕರ್ನಾಟಕ-ಅಮೆರಿಕ ವಾಣಿಜ್ಯ ಸಂಬಂಧ ಬಲವರ್ಧನೆಗೆ ಕಾರ್ಯತಂಡ
ಬೆಂಗಳೂರು, ನವೆಂಬರ್ 30 : ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗಾಗಿ ಸದ್ಯದಲ್ಲೇ ಅಧಿಕಾರಿಗಳು ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳನ್ನು ಒಳಗೊಂಡ ಕಾರ್ಯತಂಡವನ್ನು ರಚಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯ ಸರಕಾರ ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ನಿಯೋಗದ ನಡುವೆ ನಡೆದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.
ಐಟಿ ಕ್ಷೇತ್ರದಲ್ಲಿ 2025ರ ಹೊತ್ತಿಗೆ 30 ಲಕ್ಷ ಉದ್ಯೋಗ ಸೃಷ್ಟಿ : ಆರ್ವಿಡಿ
ಈ ಸಭೆಯಲ್ಲಿ, 'ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ಅಗತ್ಯವಾರ ಕೌಶಲ್ಯ ಮರುಪೂರಣೆ' ಕುರಿತು ಪ್ರಧಾನವಾಗಿ ಚರ್ಚಿಸಲಾಯಿತು. ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ಸಚಿವ ದೇಶಪಾಂಡೆ, ಈ ಕಾರ್ಯತಂಡವು ಸದ್ಯದಲ್ಲೇ ಮಾಡಿಕೊಳ್ಳಲು ಉದ್ದೇಶಿಸಿರುವ ಒಡಂಬಡಿಕೆಗೆ ಅಗತ್ಯವಾದ ನೀಲಿ ನಕಾಶೆಯನ್ನು ಸಿದ್ಧಪಡಿಸಲಿದೆ ಎಂದರು.
ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ವೇಗವನ್ನು ಒದಗಿಸುವುದರಿಂದ ಕೌಶಲ್ಯಾಭಿವೃದ್ಧಿ, ವಾಣಿಜ್ಯ ವಹಿವಾಟು ಮತ್ತು ಬಂಡವಾಳ ಹೂಡಿಕೆಗೆ ದಾರಿ ಸುಗಮವಾಗಲಿದೆ. ಇದು ಸಾಧ್ಯವಾಗಬೇಕಾದರೆ ಕೌಶಲ್ಯಾಭಿವೃದ್ಧಿ, ಸಮುದಾಯ ಕೌಶಲ್ಯ ಡಿಪ್ಲೊಮಾ, ಉದ್ಯಮಶೀಲತೆಯ ಪರಿಪೋಷಣೆ, ಸಾಗರೋತ್ತರ ಉದ್ಯೋಗಾವಕಾಶ ಸೌಲಭ್ಯ ಮತ್ತು ಪ್ರಶಿಕ್ಷಣ (ಅಪ್ರೆಂಟಿಸ್ ಶಿಪ್) ಮುಂತಾದವುಗಳ ಪರಸ್ಪರ ವಿನಿಮಯದೊಂದಿಗೆ ಇದನ್ನು ಆರಂಭಿಸಬೇಕಾದ ಅಗತ್ಯವಿದೆ ಎಂದು ಸಚಿವರು ವಿವರಿಸಿದರು.
ತಂತ್ರಜ್ಞಾನದಿಂದ ಮನುಷ್ಯ ಸಂಬಂಧಗಳು ಬೆಸೆದಿವೆ: ಸಚಿವ ದೇಶಪಾಂಡೆ
ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಜಾಗತಿಕ ಮಟ್ಟದಲ್ಲಿರುವ ಸಂದರ್ಭ/ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗಿಗಳಿಗೆ ಅಗತ್ಯವಾದ ಕೌಶಲ್ಯ ಮರುಪೂರಣೆ, ಮಧ್ಯಾವಧಿ ತರಬೇತಿಗಳ ಕಡೆಗೂ ಗಮನ ಹರಿಸಲಾಗುವುದು. ಜೊತೆಗೆ, ಅಮೆರಿಕದ ಶಿಕ್ಷಣ ಸಂಸ್ಥೆಗಳೊಂದಿಗೆ ಕಮ್ಯುನಿಟಿ ಸ್ಕಿಲ್ ಡಿಪ್ಲೊಮಾ ಕುರಿತು ಸಹಕಾರ ಮತ್ತು ಸಹಭಾಗಿತ್ವ ಸ್ಥಾಪನೆಯ ಸಾಧ್ಯತೆಯತ್ತ ನೋಡಲಾಗುವುದು ಎಂದು ದೇಶಪಾಂಡೆ ನುಡಿದರು.
ಉದ್ಯಮಶೀಲತೆ ಮತ್ತು ನವೋದ್ಯಮ ಸ್ಥಾಪನೆಗೆ ಬೇಕಾದ ವಾತಾವರಣ ರಾಜ್ಯದಲ್ಲಿ ಈಗಾಗಲೇ ಇದ್ದು, ಇದನ್ನು ಮತ್ತಷ್ಟು ಸುಧಾರಿಸಲಾಗುವುದು. ಉದ್ಯಮಿ ಮತ್ತು ಉದ್ದಿಮೆಗಳನ್ನು ಒಂದು ಜಾಲಕ್ಕೆ ತರುವ ಮೂಲಕ ರಾಜ್ಯದ ಯುವಜನರಿಗೆ ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹಾಗೂ ಉದ್ದಿಮೆ ನಡೆಸಲು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸ್ವಸಹಾಯ ಗುಂಪುಗಳ ಮತ್ತು ಕೃಷಿರಂಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಪರಸ್ಪರ ಕೈಜೋಡಿಸಿ ಬ್ರ್ಯಾಂಡಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಬೇಕಾಗಿದೆ ಎಂದು ದೇಶಪಾಂಡೆ ಪ್ರತಿಪಾದಿಸಿದರು.
ದುಂಡು ಮೇಜಿನ ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಇಂಡೊ-ಅಮೆರಿಕ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಎಸ್.ಕೆ.ಸರ್ಕಾರ್, ರಾಜ್ಯ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಮಾಂಥಾ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ರಫುಲ್ ಹಸನ್ ಮುಂತಾದವರು ಪಾಲ್ಗೊಂಡಿದ್ದರು.