ಮಧ್ಯಂತರ ಲಾಭಾಂಶ 30ರಿಂದ 40 ಸಾವಿರ ಕೋಟಿ ಆರ್ ಬಿಐನಿಂದ ಸರಕಾರಕ್ಕೆ
ನವದೆಹಲಿ, ಜನವರಿ 7: ಕಳೆದ ತಿಂಗಳಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತದಲ್ಲಿ ಬದಲಾವಣೆ ಆಗಿದೆ. ಅದು ಕೂಡ ಕೇಂದ್ರ ಸರಕಾರದ ಜತೆಗೆ ತಿಕ್ಕಾಟ ನಡೆದ ನಂತರದ ಬೆಳವಣಿಗೆಯಿದು. ಇದೀಗ ಗಮನಕ್ಕೆ ತರಬೇಕಾದ ವಿಚಾರ ಏನೆಂದರೆ, ಮಾರ್ಚ್ ಹೊತ್ತಿಗೆ 30ರಿಂದ 40 ಸಾವಿರ ಕೋಟಿ ರುಪಾಯಿ ಮಧ್ಯಂತರ ಲಾಭಾಂಶ ಸರಕಾರಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಪಾವತಿಸಿದ ಮೊತ್ತಕ್ಕೆ ಹೋಲಿಸಿದರೆ ಈ ಬಾರಿಯದು ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ಮೊತ್ತ ಎಂಬುದು ಗಮನಿಸಬೇಕಾದ ಅಂಶ. ಇದರಿಂದ ಸರಕಾರಕ್ಕೆ ವಿತ್ತೀಯ ಕೊರತೆ ತುಂಬಿಕೊಳ್ಳಲು ಅನುಕೂಲ ಆಗುತ್ತದೆ. ಇದರ ಜತೆಗೆ 2017ರಲ್ಲಿ ಜಾರಿ ಮಾಡಿದ ಜಿಎಸ್ ಟಿ ಹಾಗೂ ಬಂಡವಾಳ ಹಿಂತೆಗೆತದಿಂದ ಕೂಡ ಹಣ ಹೊಂದಿಸುವ ಪ್ರಯತ್ನ ಆಗುತ್ತಿದೆ.
ನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ
ಅಪನಗದೀಕರಣದ ವೇಳೆ ಮೋದಿ ಅವರ ಜತೆಗೇ ಇದ್ದ ಶಕ್ತಿಕಾಂತ್ ದಾಸ್ ರನ್ನು ಕರೆತಂದು ಆರ್ ಬಿಐ ಗವರ್ನರ್ ಮಾಡಲಾಗಿದೆ. ಲಾಭಾಂಶ ವಿತರಣೆ ಮತ್ತಿತರ ವಿಚಾರಗಳಲ್ಲಿ ಈ ಹಿಂದಿನ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಕೇಂದ್ರ ಸರಕಾರದ ಮಧ್ಯೆ ತಿಕ್ಕಾಟ ಏರ್ಪಟ್ಟ ಮೇಲೆ ಪಟೇಲ್ ರಾಜೀನಾಮೆ ನೀಡಿದ್ದರು.
ಇನ್ನು ಆರ್ ಬಿಐ ಬಳಿ ಎಷ್ಟು ಮೀಸಲು ನಿಧಿ ಇರಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಹಾಗೂ ಹೆಚ್ಚುವರಿ ಮೊತ್ತವನ್ನು ಸರಕಾರಕ್ಕೆ ವರ್ಗಾವಣೆ ಮಾಡುವುದಕ್ಕೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. "ನಮಗೆ ಖಾತ್ರಿ ಇದೆ. ಮಧ್ಯಂತರ ಲಾಭಾಂಶವಾಗಿ 30 ಸಾವಿರ ಕೋಟಿಗಿಂತ ಹೆಚ್ಚು ಮೊತ್ತವನ್ನು ಮಾರ್ಚ್ ಅಂತ್ಯಕ್ಕೂ ಮೊದಲೇ ಪಾವತಿಸುತ್ತೇವೆ" ಎಂದು ಮೂಲಗಳು ತಿಳಿಸಿವೆ.
ಶೀಘ್ರದಲ್ಲಿ 20 ರೂ ನೋಟು ಚಾಲ್ತಿಗೆ, ಏನಿದರ ವಿಶೇಷತೆ?
ಆದರೆ, ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಆರ್ಥಿಕ ಸಚಿವಾಲಯ ನಿರಾಕರಿಸಿದೆ. ಇನ್ನು ಇಮೇಲ್ ಮೂಲಕ ಕೇಳಲಾದ ಪ್ರಶ್ನೆಗೆ ರಿಸರ್ವ್ ಬ್ಯಾಂಕ್ ಕೂಡ ಉತ್ತರ ನೀಡಿಲ್ಲ.