ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್
ನವದೆಹಲಿ, ಡಿಸೆಂಬರ್ 10: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಗವರ್ನರ್ ಹುದ್ದೆಯನ್ನು ಊರ್ಜಿತ್ ಪಟೇಲ್ ತೊರೆದಿದ್ದಾರೆ. ಗವರ್ನರ್ ಸ್ಥಾನಕ್ಕೆ ಊರ್ಜಿತ್ ಅವರು ರಾಜೀನಾಮೆ ಸಲ್ಲಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಡಿಸೆಂಬರ್ 14ರಂದು ಆರ್ ಬಿಐನ ಮಹತ್ವದ ಸಭೆಗೂ ಮುನ್ನ ಊರ್ಜಿತ್ ಪಟೇಲ್ ಅವರ ನಡೆ ಅಚ್ಚರಿ, ಆಘಾತ, ಕುತೂಹಲ ಮೂಡಿಸಿದೆ.
ಊರ್ಜಿತ್ ಪಟೇಲ್ ಪ್ರಬುದ್ಧತೆ, ಹಣಕಾಸು ಸಚಿವಾಲಯದ ಪಟ್ಟು; ಗೆದ್ದಿದ್ದು ಯಾರು?
ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವೆ ಉಂಟಾಗಿರುವ ಮನಸ್ತಾಪಗಳು ವಿಕೋಪಕ್ಕೆ ತಿರುಗಿದಾಗ, ಸರ್ಕಾರದೊಂದಿಗಿನ ಹಗೆತನದಿಂದ ತಾವು ಹೈರಾಣಾಗಿದ್ದು, ಅದು ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಊರ್ಜಿತ್ ಪಟೇಲ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎಂಬ ಸುದ್ದಿಯೂ ಇದೆ.
Urjit R. Patel: On account of personal reasons, I have decided to step down from my current position (RBI Governor) effective immediately. It has been my privilege and honour to serve in the Reserve Bank of India in various capacities over the years (File pic) pic.twitter.com/PAxQIiQ3hV
— ANI (@ANI) December 10, 2018
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಆರ್ಥಿಕತೆಯ ಚಂಚಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಉನ್ನತ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ತನ್ನ ಪ್ರಸ್ತುತದ ನಗದು ಸಂಗ್ರಹದ ಮಟ್ಟವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಗವರ್ನರ್ ಊರ್ಜಿತ್ ಪಟೇಲ್ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.
ನಿರ್ದಿಷ್ಟ ಉಳಿತಾಯ ಹಣ ಬಳಕೆ ಬಗ್ಗೆ ಮನಸ್ತಾಪ
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಮತ್ತು ಆರ್ ಬಿಐ ಹೊಂದಿರುವ ನಿರ್ದಿಷ್ಟ ಉಳಿತಾಯದ ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸುವುದರ ಕುರಿತು ಈ ಘರ್ಷಣೆ ತೀವ್ರಗೊಂಡಿತ್ತು. ಹಣಕಾಸು ಮುಗ್ಗಟ್ಟಿನ ಸಂದರ್ಭಕ್ಕೆ ಉಪಯೋಗವಾಗುವಂತೆ ಉಳಿಸಿಕೊಂಡಿರುವ ಹೆಚ್ಚುವರಿ ಹಣವನ್ನು ತನಗೆ ಒಪ್ಪಿಸುವಂತೆ ಆರ್ ಬಿಐ ಮೇಲೆ ಕೇಂದ್ರ ಸರ್ಕಾರವು ನಿರಂತರ ಒತ್ತಡ ಹೇರುತ್ತಿದ್ದು, ಅದನ್ನು ತಿರಸ್ಕರಿಸುತ್ತಿರುವುದಾಗಿ ಆರ್ ಬಿಐ ಮೂಲಗಳು ತಿಳಿಸಿದ್ದವು
ಆರ್ ಬಿಐನಿಂದ ಸರ್ಕಾರವು ಕೇಳಿರುವ ಮೊತ್ತವೆಷ್ಟು?
ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯದ ತಿಕ್ಕಾಟಕ್ಕೆ ಮುಖ್ಯ ಕಾರಣವೊಂದು ಇಲ್ಲಿದೆ. ಆರ್ ಬಿಐ ಬಳಿ ಇರುವ ಒಟ್ಟು ಮೀಸಲು ನಿಧಿ 9.59 ಲಕ್ಷ ಕೋಟಿ ರುಪಾಯಿ ಪೈಕಿ 1/3 ಭಾಗಕ್ಕಿಂತ ಹೆಚ್ಚಿನ ಮೊತ್ತವಾದ 3.6 ಲಕ್ಷ ಕೋಟಿಯನ್ನು ವರ್ಗಾವಣೆ ಮಾಡುವಂತೆ ಆರ್ಥಿಕ ಸಚಿವಾಲಯ ಕೇಳಿತ್ತು.ಸರಕಾರದ ಪ್ರಯತ್ನದಿಂದ ಆರ್ ಬಿಐ ಮೀಸಲು ನಿಧಿ ಸಂಗ್ರಹದಲ್ಲಿ ಇಳಿಕೆಯಾದರೆ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತದೆ. ಆ ಕಾರಣದಿಂದಲೇ ಆರ್ ಬಿಐನಿಂದ ಪ್ರಸ್ತಾವವನ್ನು ತಿರಸ್ಕರಿಸುತ್ತಾ ಬಂದಿತ್ತು. ಅಲ್ಲದೆ, ಆರ್ ಬಿಐ ಒಂದು ಸ್ವಾಯುತ್ತ ಸಂಸ್ಥೆಯಂತೆ ನಡೆದುಕೊಳ್ಳಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಪ್ರಸ್ತಾಪ
ಆರ್ ಬಿಐ ಒಂದು ಸಂಸ್ಥೆಯಾಗಿ ಸರಕಾರದಿಂದ ಸ್ವತಂತ್ರವಾದದ್ದು. ಅದರ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳಬೇಕು. ಆದರೆ ಕೆಲ ಸನ್ನಿವೇಶಗಳಲ್ಲಿ ಅದು ಸರಕಾರದ ಮಾತನ್ನು ಕೇಳಿಸಿಕೊಳ್ಳಬೇಕು. ಆರ್ ಬಿಐ ಕಾಯ್ದೆಯ ಸೆಕ್ಷನ್ 7ರಲ್ಲಿ ಕೆಲವು ವಿಚಾರ ತಿಳಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕಾಲದಿಂದ ಕಾಲಕ್ಕೆ ಸರಕಾರವು ಇಂಥ ಸೂಚನೆ ನೀಡಬಹುದು. ಅದು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಜತೆಗೆ ಚರ್ಚೆ ನಡೆಸಿದ ನಂತರ. ಇಂಥ ನಿರ್ದೇಶನಗಳು, ಸಾಮಾನ್ಯ ಮೇಲುಸ್ತುವಾರಿ ಹಾಗೂ ಬ್ಯಾಂಕ್ ಸಂಬಂಧಿಸಿದ ವ್ಯವಹಾರ ಹಾಗೂ ವಿಚಾರಗಖನ್ನು ಕೇಂದ್ರ ನಿರ್ದೇಶಕರ ಮಂಡಳಿಗೆ ವಹಿಸಬಹುದು. ಆ ಮಂಡಳಿಯ ನಿರ್ದೇಶಕರು ತಮ್ಮ ಎಲ್ಲ ಅಧಿಕಾರ ಬಳಸಬಹುದು. ಆ ನಂತರ ಬ್ಯಾಂಕ್ ಕಾರ್ಯಗಳನ್ನು ನಿರ್ವಹಿಸಬಹುದು.
ರಘುರಾಂ ರಾಜನ್ ಸ್ಥಾನಕ್ಕೆ ಬಂದ ಆರ್ ಬಿಐ ಗವರ್ನರ್
ಆರ್ ಬಿಐ ಗವರ್ನರ್ ರಘುರಾಂ ರಾಜನ್ ಸ್ಥಾನಕ್ಕೆ 2016ರ ಆಗಸ್ಟ್ ನಲ್ಲಿ ಆಯ್ಕೆಯಾಗುವುದಕ್ಕೂ ಮುನ್ನ ಊರ್ಜಿತ್ ಪಟೇಲ್ ಅವರು ಆರ್ ಬಿಐನಲ್ಲಿ ಡೆಪ್ಯುಟಿ ಗವರ್ನರ್ ಆಗಿದ್ದರು.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಎಂ ಫಿಲ್ ಹಾಗೂ ಯೇಲ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿರುವ ಊರ್ಜಿತ್ ಪಟೇಲ್ ಅವರು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ನಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.ಪಟೇಲ್ ಅವರು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನ ಇಂಧನ ಹಾಗೂ ಮೂಲಸೌಕರ್ಯ ವಿಭಾಗ ಸಲಹೆಗಾರರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.