ಆರ್ ಬಿಐ ಗವರ್ನರ್ ಹುದ್ದೆಗೆ ನ. 19ರಂದು ಊರ್ಜಿತ್ ಪಟೇಲ್ ರಾಜೀನಾಮೆ?
ನವದೆಹಲಿ, ನವೆಂಬರ್ 7: ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಣ ತಿಕ್ಕಾಟ ಹೀಗೆಯೇ ಮುಂದುವರಿದರೆ ಕೇಂದ್ರ ಬ್ಯಾಂಕಿನ ಮುಂದಿನ ಮಂಡಳಿ ಸಭೆಯ ವೇಳೆ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಸರ್ಕಾರದೊಂದಿಗಿನ ಹಗೆತನದಿಂದ ತಾವು ಹೈರಾಣಾಗಿದ್ದು, ಅದು ತಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಊರ್ಜಿತ್ ಪಟೇಲ್ ಹೇಳಿಕೊಂಡಿರುವುದಾಗಿ ಮನಿಲೈಫ್ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.
ಊರ್ಜಿತ್ ಪಟೇಲ್ ರಾಜೀನಾಮೆ ಆಗ್ರಹಿಸುವುದಿಲ್ಲ ಎಂದ ಕೇಂದ್ರ
ಆರ್ ಬಿಐನ ಮುಂದಿನ ಸಭೆಯಲ್ಲಿ ಅವರು ರಾಜೀನಾಮೆ ನೀಡಲಿದ್ದಾರೆ. ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯ ಅವರ ಮೇಲೆ ಒತ್ತಡ ಹೆಚ್ಚಿಸಿ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅವರು ಈ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಲವು ವಾರಗಳಿಂದ ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಆರ್ ಬಿಐಗೆ ಎಷ್ಟರ ಮಟ್ಟಿಗೆ ಸ್ವಾಯತ್ತತೆ ಉಳಿದಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಭಿನ್ನಾಭಿಪ್ರಾಯ ತಾರಕಕ್ಕೆ
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಮತ್ತು ಆರ್ ಬಿಐ ಹೊಂದಿರುವ ನಿರ್ದಿಷ್ಟ ಉಳಿತಾಯದ ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸುವುದರ ಕುರಿತು ಈ ಘರ್ಷಣೆ ತೀವ್ರಗೊಂಡಿದೆ.
ಕಳೆದ ತಿಂಗಳು ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಭಾಷಣದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅದರ ಬಳಿಕ ಎರಡೂ ಕಡೆಗಿನ ಭಿನ್ನಾಭಿಪ್ರಾಯ ಬಹಿರಂಗವಾಗಿತ್ತು.
ಆರ್ ಬಿಐನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು.
ನಿಲುವು ಬದಲಿಸದ ಸರ್ಕಾರ
ಆರ್ ಬಿಐ ಮತ್ತು ರಾಜಕೀಯ ವಿರೋಧಗಳ ನಡುವೆಯೂ ಕೇಂದ್ರ ಸರ್ಕಾರ ಆರ್ ಬಿಐ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದೆ. ಇದರಿಂದ ಬೇಸೆತ್ತು ಊರ್ಜಿತ್ ಪಟೇಲ್ ರಾಜೀನಾಮೆ ನೀಡಲು ಮುಂದಾಗುವ ಸೂಚನೆ ಸಿಕ್ಕಿದ್ದರೂ, ಕೇಂದ್ರ ಸರ್ಕಾರ ತನ್ನ ನಡೆಯನ್ನು ಬದಲಿಸಿಲ್ಲ ಎನ್ನಲಾಗಿದೆ.
ಆದರೆ, ಸಮಸ್ಯೆಗಳನ್ನು ಬಗೆಹರಿಸಲು ಆರ್ ಬಿಐ ಕೂಡ ಸಹಕರಿಸುತ್ತಿಲ್ಲ ಎಂದು ಸರ್ಕಾರ ಆರೋಪಿಸಿದೆ. ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಆರ್ ಬಿಐ ನಿರಾಕರಿಸುತ್ತಿದ್ದು, ರಚನಾತ್ಮಕ ಮಾತುಕತೆಗೂ ಮುಂದಾಗುತ್ತಿಲ್ಲ. ಆರ್ ಬಿಐನ ಈ ನಡೆಯಿಂದ ಬೇಸೆತ್ತಿರುವುದಾಗಿ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!
ನಿಧಿ ನೀಡಲು ಒತ್ತಡ
ಹಣಕಾಸು ಮುಗ್ಗಟ್ಟಿನ ಸಂದರ್ಭಕ್ಕೆ ಉಪಯೋಗವಾಗುವಂತೆ ಉಳಿಸಿಕೊಂಡಿರುವ ಹೆಚ್ಚುವರಿ ಹಣವನ್ನು ತನಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರ ಆರ್ ಬಿಐ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು, ಅದನ್ನು ತಿರಸ್ಕರಿಸುತ್ತಿರುವುದಾಗಿ ಆರ್ ಬಿಐ ಮೂಲಗಳು ತಿಳಿಸಿದ್ದವು.
ರಘುರಾಂ ಆರೋಪ
ತಮ್ಮ ಅಧಿಕಾರದ ಅವಧಿಯಲ್ಲಿ 'ಇದಕ್ಕೆ ವಿನಾಯಿತಿ ನೀಡಿ, ಅದಕ್ಕೆ ವಿನಾಯಿತಿ ನೀಡಿ' ಎಂದು ಸರ್ಕಾರದಿಂದ ಲೆಕ್ಕವಿಲ್ಲದಷ್ಟು ಪತ್ರಗಳು ಬಂದಿದ್ದವು ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಮಂಗಳವಾರ ಸಂದರ್ಶನವೊಂದರಲ್ಲಿ ಹೇಳಿದ್ದರು.
ಆರ್ ಬಿಐ ಹಾಗೂ ಕೇಂದ್ರ ಸರಕಾರದ ಸಂಬಂಧ ವಿವರಿಸಿದ ರಘುರಾಮ್ ರಾಜನ್
ರಾಜೀನಾಮೆ ಕೇಳೊಲ್ಲ ಎಂದಿದ್ದ ಕೇಂದ್ರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವಿನ ಶೀತಲಸಮರ ತಾರಕಕ್ಕೇರಿದ್ದರೂ, ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು. ದೇಶದ ಉನ್ನತ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಘರ್ಷಣೆ ಇಂದು ನಿನ್ನೆಯದಲ್ಲ. ಹಿಂದೆ ಕೂಡ ಹಲವಾರು ಬಾರಿ ಈ ರೀತಿ ತಾಕಲಾಟಗಳು ಆಗಿವೆ. ನೆಹರೂ ಅವರ ಸರ್ಕಾರವಿದ್ದಾಗಲೂ ರಿಸರ್ವ್ ಬ್ಯಾಂಕ್ ಜೊತೆ ಭಿನ್ನಾಭಿಪ್ರಾಯಗಳಿದ್ದವು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದರು.