ಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತ
ಮುಂಬೈ, ಡಿಸೆಂಬರ್ 10 : ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮತ್ತು ಆರ್ಬಿಐ ಗೌರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಯಿಂದ ಹೂಡಿಕೆದಾರರಿಗೆ ಆತಂಕ ಎದುರಾಗಿದೆ. ದೇಶದಲ್ಲಿನ ಈ ಬೆಳವಣಿಗೆಗಳು ಷೇರು ಪೇಟೆಯ ಮೇಲೆ ಪ್ರಭಾವ ಬೀರಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಆರಂಭದ ವಹಿವಾಟಿನ ವೇಳೆ ಸುಮಾರು 500 ಅಂಶಗಳ ಕುಸಿತ ದಾಖಲಿಸಿತು. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿ.11ರ ಮಂಗಳವಾರ ಪ್ರಕಟವಾಗಲಿದೆ.
ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್
ಸೋಮವಾರ ಮಧ್ಯಾಹ್ನ ಆರ್ಬಿಐ ಗೌರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದರು. ಈ ಬೆಳವಣಿಗೆ ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ನಾಲ್ಕು ವರ್ಷಗಳಲ್ಲೇ ಕಡಿಮೆ ಬೆಲೆಗೆ ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗುತ್ತದೆ ಎಂಬ ವರದಿ ಬಂದ ಬೆನ್ನಲ್ಲೇ ಷೇರು ಮಾರುಕಟ್ಟೆ ಕುಸಿತಕಂಡಿತ್ತು. ಎರಡು ತಿಂಗಳಿನಲ್ಲಿಯೇ ಷೇರು ಮಾರುಕಟ್ಟೆ ಕಡಿಮೆ ದರಕ್ಕೆ ಕುಸಿದಿದೆ.
ಮೋದಿಯಿಂದ ಆರ್ ಬಿಐ ಮುಚ್ಚಲಿದೆ: ರಾಹುಲ್, ಸಿದ್ದರಾಮಯ್ಯ ವಾಗ್ದಾಳಿ
ಕೋಟಕ್ ಮಹೀಂದ್ರಾ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಥ ಲಕ್ಷ್ಮೀ ಐಯ್ಯರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಇದು ಅಲೋಚನೆಗೆ ನಿಲುಕದ ಕುಸಿತವಾಗಿದೆ. ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆ ಆದರೆ ಇನ್ನೂ ಕುಸಿತವನ್ನು ಕಾಣಬೇಕಾಗುತ್ತದೆ' ಎಂದು ಹೇಳಿದ್ದಾರೆ.