ಆರ್ಬಿಐ ಹೊಸ ನಿಯಮದ ಜಾರಿ ಗಡುವು ಸೆ. 30ರವರೆಗೂ ವಿಸ್ತರಣೆ
ಮೊಬೈಲ್, ವಿದ್ಯುತ್ ಹಾಗೂ ಇನ್ನಿತರೆ ಬಿಲ್ಗಳ ಪಾವತಿಗಾಗಿ ಬ್ಯಾಂಕ್ ಖಾತೆಯಿಂದ ಮಾಡುತ್ತಿದ್ದ ಸ್ವಯಂಚಾಲಿತ ಪಾವತಿಗಳು (ಆಟೊ ಡೆಬಿಟ್) ನಿಯಮಗಳು ಹಾಗೂ ಒಟಿಟಿ ಪ್ಲಾಟ್ಫಾರಂ ಬಳಕೆ ಮೇಲೆ ಹೆಚ್ಚುವರಿ ದೃಢೀಕರಣ ಜಾರಿಗೆ ತರುವ ನಿರ್ಧಾರದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30ರವರೆಗೂ ವಿಸ್ತರಿಸಿದೆ.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಅಥವಾ ಇನ್ನಿತರ ಪ್ರಿಪೇಡ್ ಇನ್ಸ್ಟ್ರುಮೆಂಟ್ (ಪಿಪಿಐ) ಮೂಲಕ ಮಾಡುವ ಸ್ವಯಂಚಾಲಿತ ವಹಿವಾಟಿನ ಕುರಿತು ಆರ್ಬಿಐನ ಹೆಚ್ಚುವರಿ ದೃಢೀಕರಣದ ಸೂಚನೆಯನ್ನು ಅಳವಡಿಸಲು ಮತ್ತಷ್ಟು ಸಮಯ ಬೇಕು ಎಂದು ಬ್ಯಾಂಕ್ಗಳು ಹಾಗೂ ಪಾವತಿ ಗೇಟ್ವೇಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿದೆ. ಈ ಹಿಂದಿನ ನಿರ್ದೇಶನದಂತೆ ಏಪ್ರಿಲ್ 1ರಿಂದ ಈ ನಿಯಮಗಳು ಜಾರಿಗೆ ಬರಬೇಕಿತ್ತು.
ಏಪ್ರಿಲ್ 1ರಿಂದ ಬದಲಾಗಲಿದೆ ಸ್ವಯಂಚಾಲಿತ ಪಾವತಿ; ಆರ್ಬಿಐ ಹೊಸ ನಿಯಮದಲ್ಲಿ ಏನಿದೆ?
ಮಾರ್ಚ್ 31ರ ನಂತರ ಹೆಚ್ಚುವರಿ ದೃಢೀಕರಣ ಅಂಶಗಗಳು (ಎಎಫ್ಎ) ಕಡ್ಡಾಯ ಎಂದು ಆರ್ಬಿಐ ಈ ಹಿಂದೆ ಹೇಳಿತ್ತು. ಕಾರ್ಡ್ಗಳು ಅಥವಾ ಪ್ರೀಪೇಯ್ಡ್ ಪೇಮೆಂಟ್ ಸಾಧನ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮುಂತಾದವುಗಳನ್ನು ಬಳಸಿ ಮರುಕಳಿಸುವ ವಹಿವಾಟು ನಡೆಸುವ ಎಲ್ಲ ಬ್ಯಾಂಕುಗಳು, ಆರ್ಆರ್ಬಿ, ಎನ್ಬಿಎಫ್ಸಿ ಮತ್ತು ಪಾವತಿ ಸೌಲಭ್ಯಗಳಿಗೆ ಡಿಸೆಂಬರ್ 4ರಂದು ಸೂಚನೆ ನೀಡಿದ್ದ ಆರ್ಬಿಐ, ಎಎಫ್ಎ ಅನ್ನು ಪಾಲಿಸಲು ಸೂಕ್ತ ವ್ಯವಸ್ಥೆ ಮಾಡದೆ ಹೋದರೆ ಮಾರ್ಚ್ 31ರ ಬಳಿಕ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿತ್ತು.
2021ರ ಏಪ್ರಿಲ್ 1ರಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರಿಕರಿಂಗ್ ಪೇಮೆಂಟ್ ಮುಂದುವರಿಯಲು ಗ್ರಾಹಕರಿಂದ ಹೆಚ್ಚುವರಿ ದೃಢೀಕರಣದ ಅಗತ್ಯವಿರುತ್ತದೆ. ಈ ನಿಯಮವನ್ನು 5000ರೂ ಬೆಲೆಯ ರಿಕರಿಂಗ್ ವಹಿವಾಟಿಗೆ ಅನ್ವಯಿಸಲಾಗಿದೆ. ಈ ಮಿತಿಗಿಂತ ಹೆಚ್ಚಿನ ವಹಿವಾಟಿಗೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಅಗತ್ಯವಿರುತ್ತದೆ.
ಕ್ರೆಡಿಟ್ ಕಾರ್ಡ್ ಗಳು, ಡೆಬಿಟ್ ಕಾರ್ಡ್, ಇತರೆ ಪ್ರಿಪೇಡ್ ಪಾವತಿ ಸಾಧನಗಳ ಸೇವೆ ನೀಡುವ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಮಾತ್ರವಲ್ಲದೇ ಯುಪಿಐ ಆಧಾರಿತ ಪಾವತಿಗಳ ಮೊಬೈಲ್ ಪಾವತಿ, ವ್ಯಾಲೆಟ್ ಗಳಿಗೂ ಈ ನಿಯಮ ಅನ್ವಯಿಸುತ್ತದೆ.
ಏಪ್ರಿಲ್ 1ರಿಂದ ಬದಲಾಗಲಿದೆ ಸ್ವಯಂಚಾಲಿತ ಪಾವತಿ; ಆರ್ಬಿಐ ಹೊಸ ನಿಯಮದಲ್ಲಿ ಏನಿದೆ?
ಹೊಸ ಆರ್ಬಿಐ ನಿಯಮಗಳ ಪ್ರಕಾರ, ಬ್ಯಾಂಕುಗಳು ಮೊದಲ ಪಾವತಿ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮೊದಲು ನೋಟಿಫಿಕೇಶನ್ ಕಳುಹಿಸಬೇಕಾಗುತ್ತದೆ. ಗ್ರಾಹಕರು ಅದನ್ನು ಅನುಮೋದಿಸಿದಾಗ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ. ಒಂದು ವೇಳೆ ಪಾವತಿ 5000 ರೂ.ಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ಗ್ರಾಹಕರಿಗೆ ಒಟಿಪಿ (OTP) ಕಳುಹಿಸಬೇಕಾಗುತ್ತದೆ. ನೋಂದಣಿಯ ಸಮಯದಲ್ಲಿ ಗ್ರಾಹಕರು ಎಸ್ಎಂಎಂ ಅಥವಾ ಇ-ಮೇಲ್ ನಂಥ ಅಧಿಸೂಚನೆಯ ವಿಧಾನವನ್ನು ಆಯ್ಕೆ ಮಾಡುತ್ತಾರೆ. ಅಧಿಸೂಚನೆಗೆ ಮುಖ್ಯವಾಗಿ ಗ್ರಾಹಕರ ಒಪ್ಪಿಗೆಯ ಅವಶ್ಯಕತೆಯಿರುತ್ತದೆ. ಆನಂತರವಷ್ಟೇ ಪಾವತಿಗೆ ಅವಕಾಶವಿರುತ್ತದೆ. ಬ್ಯಾಂಕುಗಳು ಈ ಪಾವತಿಗಳನ್ನು ನಿರಾಕರಿಸಬಹುದಾಗಿದೆ ಎಂದು ನಿಯಮಗಳಲ್ಲಿ ಹೇಳಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ