'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!
ನವದೆಹಲಿ, ಅಕ್ಟೋಬರ್ 30 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸ್ವಾತಂತ್ರಕ್ಕೆ ಧಕ್ಕೆ ತಂದರೆ, ಅದರ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸಿದರೆ, ಹಣಕಾಸು ಮಾರುಕಟ್ಟೆಯ ಆಕ್ರೋಶ ಎದುರಿಸಬೇಕಾಗುತ್ತದೆ, ದೇಶದ ಆರ್ಥಿಕತೆಗೆ ಬೆಂಕಿ ಬೀಳುತ್ತದೆ ಎಂದು ಆರ್ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ಇಂಥದೇ ಎಚ್ಚರಿಕೆಯನ್ನು ಹಿಂದಿನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ನೀಡಿದ್ದರು. ಆದರೆ, ವಿರಲ್ ಆಚಾರ್ಯ ಅವರು, ಎಡಿ ಶ್ರಾಫ್ ಮೆಮೋರಿಯಲ್ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸವೊಂದರಲ್ಲಿ ರಾಜನ್ ಅವರ ಹೆಸರನ್ನು ಪ್ರಸ್ತಾಪಿಸದೆ, ಕೇಂದ್ರ ಸರಕಾರ ಮಾಡುತ್ತಿರುವ ಅನಗತ್ಯದ ಹಸ್ತಕ್ಷೇಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಂದಾಣಿಕೆ ಕೊರತೆ: ಆರ್ ಬಿಐಗೂ ಮೋದಿ ಸರ್ಕಾರಕ್ಕೂ ಶುರುವಾಗಿದೆಯೇ ತಿಕ್ಕಾಟ?
ಅರ್ಜೆಂಟಿನಾದಲ್ಲಿ ಸರಕಾರದ ಹಸ್ತಕ್ಷೇಪದಿಂದ ಬ್ಯಾಂಕಿಂಗ್ ವಲಯದಲ್ಲಿ ಹೇಗೆ ಅಲ್ಲೋಲಕಲ್ಲೋಲವಾಗಿದ್ದನ್ನು ವಿವರಿಸಿರುವ ಅವರು, ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸದಿದ್ದರೆ ಅಂಥದೇ ದುರಂತ ಸಂಭವಿಸಲಿದೆ ಎಂದಿದ್ದಾರೆ.
ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಮೇಲೆ ಆರ್ಬಿಐಗೆ ಇರುವ ಇತಿಮಿತಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಪಿಎಸ್ಬಿಗಳ ಆಸ್ತಿ ವಿತರಣೆ, ಮ್ಯಾನೇಜ್ಮೆಂಟ್ ಮತ್ತು ಬೋರ್ಡ್ ಬದಲಾವಣೆ, ಲೈಸೆನ್ಸ್ ನವೀಕರಣ, ಬ್ಯಾಂಕ್ ಗಳ ವಿಲೀನೀಕರಣ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ, ಖಾಸಗಿ ಬ್ಯಾಂಕ್ ಗಳ ಮೇಲಿರುವ ಹಿಡಿತ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಮೇಲಿಲ್ಲ ಎಂದಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ
ವಿರಲ್ ಆಚಾರ್ಯ ಅವರ ಅಭಿಪ್ರಾಯಕ್ಕೆ ರಿಸರ್ವ್ ಬ್ಯಾಂಕ್ ಉದ್ಯೋಗಿಗಳಿಂದಲೇ ಬೆಂಬಲ ದೊರೆತಿದೆ. ಸೆಂಟ್ರಲ್ ಬ್ಯಾಂಕ್ ಅಧಿಕಾರವನ್ನು ಕಿತ್ತುಕೊಂಡರೆ ಅಥವಾ ತುಳಿಯಲು ಯತ್ನಿಸಿದರೆ ಭಾರೀ ದುರಂತ ಸಂಭವಿಸೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಆರ್ಬಿಐನ ಮಾಜಿ ಗವರ್ನರ್ ಸುಬ್ಬಾರಾವ್ ಅವರು ಪುಸ್ತಕವೊಂದರಲ್ಲಿ, ಬಡ್ಡಿ ದರವನ್ನು ನಿಯಂತ್ರಿಸುವ ವಿಷಯದಲ್ಲಿ ತಮ್ಮ ಮೇಲೆ ಯುಪಿಎ ಸರಕಾರವಿದ್ದಾಗ, ಅಂದಿನ ಅರ್ಥ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಮತ್ತು ಪಿ ಚಿದಂಬರಂ ಅವರು ಹೇಗೆ ಒತ್ತಡ ಹೇರುತ್ತಿದ್ದರು ಎಂದು ಬರೆದಿದ್ದಾರೆ. ಯಾವುದೇ ಆಗ್ರಹ, ಒತ್ತಡಕ್ಕೆ ಪ್ರತಿಯಾಗಿ 'ಇಲ್ಲ, ಸಾಧ್ಯವಿಲ್ಲ' ಎಂದು ಹೇಳುವ ರಿಸರ್ವ್ ಬ್ಯಾಂಕ್ ನ ಅಧಿಕಾರವನ್ನು ಸಂರಕ್ಷಿಸಬೇಕು ಎಂದು ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಕೂಡ ಹೇಳಿದ್ದರು.
ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸುವಂತಿಲ್ಲ ಎಂದ ಆರ್ ಬಿಐ
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ ಇಬ್ಬರು ಪ್ರಮುಖ ನಿರ್ದೇಶಕರನ್ನು ಕಿತ್ತೊಗೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿವಾದದ ಸುಳಿಯಲ್ಲಿ ಕೇಂದ್ರ ಸರಕಾರ ಸಿಲುಕಿರುವ ಸಂದರ್ಭದಲ್ಲಿಯೇ, ಕೇಂದ್ರ ಸರಕಾರದ ವಿರುದ್ಧ ಆರ್ಬಿಐ ಡೆಪ್ಯೂಟಿ ಗವರ್ನರ್ ಆಕ್ರೋಶ ವ್ಯಕ್ತಪಡಿಸಿರುವುದು ವಿರೋಧ ಪಕ್ಷಗಳ ಬಾಯಿಗೆ ಅನಾಯಾಸವಾಗಿ ಜಾಮೂನು ಬಿದ್ದಂತಾಗಿದೆ. ಬೇರೆ ಸಂದರ್ಭದಲ್ಲಾಗಿದ್ದರೆ, ಆರ್ಬಿಐ ವಿವಾದ ಹೆಚ್ಚು ವಿವಾದವಾಗುತ್ತಿರಲೇ ಇಲ್ಲ.