ವಿವಾದ ತಾರಕಕ್ಕೇರುವ ಮೊದಲೇ ಊರ್ಜಿತ್ ರಾಜೀನಾಮೆ ನೀಡ್ತಾರಾ?
ಬೆಂಗಳೂರು, ಅಕ್ಟೋಬರ್ 31 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ವಿವಾದದ ಕಂದಕ ದೊಡ್ಡದಾಗುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ನ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಒಂದು ಮೂಲ ತಿಳಿಸಿದೆ.
ಆದರೆ, ರಿಸರ್ವ್ ಬ್ಯಾಂಕ್ ನ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರ ಪ್ರಕಾರ, ದೀಢೀರನೆ ಊರ್ಜಿತ್ ಪಟೇಲ್ ಅವರು ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕಡಿಮೆ. ಊರ್ಜಿತ್ ಪಟೇಲ್ ತಕ್ಷಣ ರಾಜೀನಾಮೆ ನೀಡುವ ಸಾಧ್ಯತೆಯನ್ನು ಆ ಅಧಿಕಾರಿ ತಳ್ಳಿಹಾಕಿದ್ದಾರೆ.
ಆರ್ಬಿಐ - ಸರಕಾರದ ನಡುವೆ ಭುಗಿಲೆದ್ದ ಬಿಕ್ಕಟ್ಟು : ಮುಂದೆ ಏನಾಗಲಿದೆ?
ಊರ್ಜಿತ್ ಪಟೇಲ್ ಅವರೂ ಭಾಗಿಯಾಗಿದ್ದ, ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೆಂಟ್ರಲ್ ಬ್ಯಾಂಕ್ ನ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ಅವರು ರಾಜೀನಾಮೆ ಸಲ್ಲಿಸಬಹುದು ಎಂಬ ಗಾಳಿಸುದ್ದಿ ಹಬ್ಬಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕೇಂದ್ರ ಸರಕಾರ ತನ್ನ ಸ್ವಾತಂತ್ರ್ಯ ಕಸಿದುಕೊಂಡಿದ್ದು, ಸ್ವಾಯತ್ತತೆಗೆ ಧಕ್ಕೆ ತಂದಿದೆ, ಹೀಗಾದರೆ ಭಾರತದ ಅರ್ಥ ವ್ಯವಸ್ಥೆಗೆ ಬೆಂಕಿ ಬೀಳಲಿದೆ, ಹಣಕಾಸು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಲಿದೆ ಎಂದು ಆರೋಪಿಸಿದೆ.
ಆರ್ಥಿಕತೆ ಬಗ್ಗೆ ಜೇಟ್ಲಿ ಅಧ್ಯಕ್ಷತೆಯ ಮಹತ್ವದ ಸಭೆಯಲ್ಲಿ ಕೇಳಿದ್ದೇನು?
ಇದಕ್ಕೆ ಪ್ರತಿಯಾಗಿ, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, 2008ರಿಂದ 2014ರ ಅವಧಿಯಲ್ಲಿ, ಬ್ಯಾಂಕ್ ಗಳು ಬೇಕಾಬಿಟ್ಟಿ ಸಾಲ ನೀಡಿದ್ದವು, ಅಲ್ಲದೆ ಕೆಟ್ಟ ಸಾಲಗಳನ್ನು ನಿಯಂತ್ರಿಸುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ವಿಫಲವಾಯಿತು. ಆಗ ಸೆಂಟ್ರಲ್ ಬ್ಯಾಂಕ್ ಏನು ಮಾಡುತ್ತಿತ್ತೋ ಗೊತ್ತಿಲ್ಲ, ಸತ್ಯವನ್ನು ಕಾರ್ಪೆಟ್ ಕೆಳಗೆ ತಳ್ಳುತ್ತಲೇ ಬಂದಿತು. ಅದರ ಪರಿಣಾಮ ನಾವೀಗ ಅನುಭವಿಸುತ್ತಿದ್ದೇವೆ ಎಂದು ಅರುಣ್ ಜೇಟ್ಲಿ ಅವರು ನೇರವಾಗಿಯೇ ಊರ್ಜಿತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕೇಂದ್ರದ ಮೇಲೆ ಪರೋಕ್ಷವಾಗಿ ದಾಳಿ ನಡೆಸಿರುವ ಸೆಂಟ್ರಲ್ ಬ್ಯಾಂಕ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ಕೇಂದ್ರೀಕರಿಸಿದ್ದು, ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಹಣದ ಕೊರತೆ ಸೃಷ್ಟಿಯಾಗಿರುವುದರಿಂದ, ಸಣ್ಣ ಮತ್ತು ಮಧ್ಯಮ ವರ್ತಕರಿಗೆ ಯಾವುದೇ ಸಹಾಯವಾಗುತ್ತಿಲ್ಲ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ನೀಡಲಿದೆ. ಈ ಕಾರಣದಿಂದಾಗಿ ಸೆಂಟ್ರಲ್ ಬ್ಯಾಂಕ್ ಅನ್ನು ಟೀಕಿಸುತ್ತಿದೆ ಎಂದು ವಾದಿಸಿದೆ.
'ಹಸ್ತಕ್ಷೇಪ ಮಾಡಿದರೆ ದೇಶದ ಆರ್ಥಿಕತೆಗೆ ಬೆಂಕಿ ಬಿದ್ದೀತು ಹುಷಾರ್'!
ಈ ಎಲ್ಲ ಬೆಳವಣಿಗೆಗಳಿಂದ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ದ್ವಾರಗಳೂ ಮುಕ್ತವಾಗಿದ್ದು, ಏನು ಬೇಕಾದರೂ ಸಂಭವಿಸಬಹುದು ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಅಲ್ಲದೆ, ಊರ್ಜಿತ್ ಅವರ ಸೇವಾವಧಿ ಮುಂದಿನ ಸೆಪ್ಟೆಂಬರ್ ವರೆಗೆ ಇರಲಿದ್ದು, ಅವರನ್ನು ಅಲ್ಲಿಯವರೆಗೆ ಮುಂದುವರಿಸುವ ಸಾಧ್ಯತೆ ಕಡಿಮೆ ಎಂಬ ಮಾತು ಕೂಡ ಕೇಳಿಬಂದಿದೆ. ಇದನ್ನು ತಪ್ಪಿಸಲೆಂದೇ ಊರ್ಜಿತ್ ಅವರು ಸೇವಾವಾಧಿ ಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.