ಈ ಸಹಕಾರಿ ಬ್ಯಾಂಕ್ನ ಲೈಸೆನ್ಸ್ ರದ್ದುಗೊಳಿಸಿದ RBI: ಠೇವಣಿದಾರರಿಗೆ 5 ಲಕ್ಷ ರೂ.ವರೆಗೆ ಮರುಪಾವತಿ
ನವದೆಹಲಿ, ಡಿಸೆಂಬರ್ 09: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕರದ್ ಜನತಾ ಸಹಕಾರಿ ಬ್ಯಾಂಕಿನ ಪರವಾನಗಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಬುಧವಾರ ರದ್ದುಗೊಳಿಸಿದೆ. ಈ ಮೂಲಕ ಬ್ಯಾಂಕ್ ಯಾವುದೇ ಠೇವಣಿ ತೆಗೆದುಕೊಳ್ಳುವುದು ಅಥವಾ ಮರುಪಾವತಿ ಮಾಡುವುದನ್ನು ನಿಷೇಧಿಸಲಾಗಿದೆ.
ಬ್ಯಾಂಕಿನಲ್ಲಿ ಸಮರ್ಪಕ ಹಣಕಾಸು ಇಲ್ಲ ಎಂದು ಉಲ್ಲೇಖಿಸಿ ಆರ್ಬಿಐ, ಕರದ್ ಜನತಾ ಸಹಕಾರಿ ಬ್ಯಾಂಕಿನ ವ್ಯವಹಾರವನ್ನು ರದ್ದುಗೊಳಿಸಿದೆ. ಇದರ ಜೊತೆಗೆ ಮಹಾರಾಷ್ಟ್ರದ ಸಹಕಾರಿ ಸಂಘಗಳ ಸಹಕಾರ ರಿಜಿಸ್ಟ್ರಾರ್, ಬ್ಯಾಂಕ್ ಅನ್ನು ಮುಟ್ಟುಗೋಲು ಹಾಕಲು ಆದೇಶ ಹೊರಡಿಸಿ ಮತ್ತು ಅದಕ್ಕಾಗಿ ಲಿಕ್ವಿಡೇಟರ್ ಅನ್ನು ನೇಮಿಸುವಂತೆ ಕೇಂದ್ರ ಬ್ಯಾಂಕ್ ವಿನಂತಿಸಿದೆ.
ಕಾರ್ಡ್ಲೆಸ್ ವಹಿವಾಟು ಮಿತಿ 2,000 ದಿಂದ 5,000 ರೂಪಾಯಿಗೆ ಏರಿಕೆ
ಆದಾಗ್ಯೂ, ಬ್ಯಾಂಕಿನ ಠೇವಣಿದಾರರಿಗೆ ಹಣವನ್ನು ಪಾವತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಇದರರ್ಥ, ಬ್ಯಾಂಕ್ ದಿವಾಳಿಯಾದ ಮೇಲೆ ನಿಯಮ ಮತ್ತು ಷರತ್ತುಗಳ ಪ್ರಕಾರ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ನಿಂದ ಠೇವಣಿದಾರರು 5 ಲಕ್ಷ ರೂಪಾಯಿವರೆಗೆ ಪಡೆಯುತ್ತಾರೆ.
ಇನ್ನು ಈ ಬ್ಯಾಂಕಿನ ಠೇವಣಿದಾರರಲ್ಲಿ ಶೇಕಡಾ 99ರಷ್ಟು ಜನರು ತಮ್ಮ ಠೇವಣಿಗಳ ಸಂಪೂರ್ಣ ಪಾವತಿಯನ್ನು ಡಿಐಜಿಸಿಯಿಂದ ಪಡೆಯುತ್ತಾರೆ.
ಆರ್ಬಿಐ ಮಂಗಳವಾರ ನೀಡಿರುವ ನೋಟಿಸ್ನಲ್ಲಿ ಬ್ಯಾಂಕ್ಗೆ ಸಮರ್ಪಕ ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಯಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ಅದರ ಪ್ರಸ್ತುತ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇನ್ನೂ ಬ್ಯಾಂಕ್ ತನ್ನ ವ್ಯವಹಾರವನ್ನು ನಡೆಸಲು ಬಿಟ್ಟರೆ ಸಾರ್ವಜನಿಕರ ಹಿತಾಸಕ್ತಿಗೆ ದೊಡ್ಡ ತೊಂದರೆಯಾಗುತ್ತದೆ ಎಂದು ಆರ್ಬಿಐ ಹೇಳಿದೆ.