ಆರ್ಥಿಕ ಪರಿಸ್ಥಿತಿ ಬಗ್ಗೆ ಟಾಟಾ ಟ್ವೀಟ್, ಸತ್ಯಾಸತ್ಯತೆ ಬಹಿರಂಗ
ನವದೆಹಲಿ, ಏಪ್ರಿಲ್ 12: ಭಾರತದ ಖ್ಯಾತ ಉದ್ಯಮಿ, ಟಾಟಾ ಸಮೂಹ ಸಂಸ್ಥೆ ಚೇರ್ಮನ್ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡಬೇಕು ಎಂದು ಟ್ವಿಟ್ಟರ್ನಲ್ಲಿ ಅಭಿಯಾನ ನಡೆದ ಬೆನ್ನಲ್ಲೇ ಟಾಟಾ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಟಾಟಾ ಮಾಡಿದ್ದಾರೆ ಎನ್ನುವ ಟ್ವೀಟ್ ಸತ್ಯಾಸತ್ಯತೆ ಬಗ್ಗೆ ಇಲ್ಲಿ ಸ್ಪಷ್ಟ ಚಿತ್ರಣ.
ವೈರಲ್ ಆಗಿದ್ದು ಏನು?: ಟಾಟಾ ಅವರು ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಟ್ವೀಟ್ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ., ತಜ್ಞರ ಅಭಿಪ್ರಾಯದ ಪ್ರಕಾರ ಭಾರತದಲ್ಲಿ ಕೊರೊನಾದಿಂದ ತೀವ್ರ ಆರ್ಥಿಕ ಕುಸಿತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನನಗೆ ತಜ್ಞರ ಬಗ್ಗೆ ಹೆಚ್ಚು ಗೊತ್ತಿಲ್ಲ. ಮಾನವನ ಸಂಕಲ್ಪ, ಪರಿಶ್ರಮ ಸಿದ್ಧಿ ಬಗ್ಗೆ ಹೇಳಬಲ್ಲೆ,
'ರತನ್ ಟಾಟಾಗೆ ಭಾರತ ರತ್ನ ನೀಡಬೇಕು': ಟ್ವಿಟ್ಟರ್ ನಲ್ಲಿ ಅಭಿಯಾನ
ತಜ್ಞರ ಮಾತನ್ನೇ ನಂಬಿದ್ದರೆ, 2ನೇ ಮಹಾಯುದ್ಧದ ಬಳಿಕ ಭವಿಷ್ಯವೇ ಇಲ್ಲ ಎಂದು ಭಾವಿಸಿದ್ದ ಜಪಾನ್ ಇಂದು ಇರುತ್ತಿರಲಿಲ್ಲ, ಮೂರು ದಶಕಗಳಲ್ಲಿ ಜಪಾನ್ ಬೆಳೆದಿರುವ ರೀತಿ ನೋಡಬಹುದು.
ತಜ್ಞರ ಅಭಿಪ್ರಾಯ ನಂಬಿದ್ದರೆ ಅರಬ್ ದಾಳಿಗೆ ಸತತ ಒಳಗಾಗಿದ್ದ ಇಸ್ರೇಲ್ ಇಂದು ವಿಶ್ವಭೂಪಟದಿಂದ ಅಳಿಸಿ ಹೋಗಬೇಕಿತ್ತು.
ಏರೋಡೈನಾಮಿಕ್ಸ್ ನಿಯಮದ ಪ್ರಕಾರ ಬಬ್ಬಲ್ ಜೇನ್ನೊಣ ಮೇಲೆ ಹಾರಲು ಸಾಧ್ಯವೇ ಇಲ್ಲ, ಅದಕ್ಕೆ ಏರೋಡೈನಾಮಿಕ್ಸ್ ಗೊತ್ತಿಲ್ಲ ಹಾಗಾಗಿ ಹಾರಾಡುತ್ತಿದೆ. ತಜ್ಞ ಅಭಿಪ್ರಾಯ ನಿಜವಾಗಿದ್ದರೆ ನಾವು 83ರ ವಿಶ್ವಕಪ್ ಗೆಲ್ಲುತ್ತಿರಲಿಲ್ಲ. ತಜ್ಞರ ಮಾತು ಕೇಳಿದ್ದರೆ ಓಡುವ ಮಾತಿರಲಿ, ನಡೆಯಲು ಆಗದಿದ್ದ ವಿಲ್ಮಾ ರುಡಾಲ್ಫ್ ನಾಲ್ಕು ಚಿನ್ನದ ಪದಕವನ್ನು ಅಮೆರಿಕಕ್ಕೆ ಅಥ್ಲೆಟಿಕ್ಸ್ ನಲ್ಲಿ ಗೆಲ್ಲಲು ಆಗುತ್ತಿರಲಿಲ್ಲ. ತಜ್ಞರ ಮಾತು ನಿಜವಾಗಿದ್ದರೆ ಅರುಣಿಮಾ ಸಿನ್ಹಾ ಎಲ್ಲರಂತೆ ಸಾಮಾನ್ಯ ಬದುಕು ಜೀವಿಸುತ್ತಿದ್ದರು, ಮೌಂಟ್ ಎವರೆಸ್ಟ್ ಏರುತ್ತಿರಲಿಲ್ಲ. ಇದೇ ರೀತಿ ಕೊರೊನಾ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಭಾರತದ ಆರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಿಸಲಿದೆ ಎಂದು ಟಾಟಾ ಪೋಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಹಲವು ಬ್ಲಾಗ್, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
The COVID 19 crisis is one of the toughest challenges we will face as a race. The Tata Trusts and the Tata group companies have in the past risen to the needs of the nation. At this moment, the need of the hour is greater than any other time. pic.twitter.com/y6jzHxUafM
— Ratan N. Tata (@RNTata2000) March 28, 2020
ಸತ್ಯಾಸತ್ಯತೆ: ಮಾರ್ಚ್ 28ರಂದು ''ದೇಶಕ್ಕಾಗಿ ಬರೀ 1500 ಕೋಟಿ ಅಲ್ಲ. ದೇಶದ ಕಷ್ಟ ಬಂದರೆ, ನಾನು ನನ್ನ ಎಲ್ಲ ಆಸ್ತಿಯನ್ನು ನೀಡುತ್ತೇನೆ'' ಎಂದು ಹೇಳಿದ ರತನ್ ಟಾಟಾ ಮಾತನ್ನು ಉಲ್ಲೇಖಿಸಿ ಟಾಟಾ ಟ್ರಸ್ಟ್ ನೀಡಿರುವ ಪತ್ರಿಕಾ ಪ್ರಕಟಣೆ ಬಿಟ್ಟರೆ, ಟಾಟಾ ಅವರಿಂದ ಮೇಲ್ಕಂಡ ರೀತಿಯಲ್ಲಿ ಯಾವುದೇ ಸಂದೇಶ, ಟ್ವೀಟ್ ಬಂದಿಲ್ಲ. ಟಾಟಾ ಸಮೂಹ ಸಂಸ್ಥೆಯ ಯಾವುದೇ ಖಾತೆಯಿಂದ ಆರ್ಥಿಕ ಪರಿಸ್ಥಿತಿ ಬಗ್ಗೆ ಟ್ವೀಟ್ ಇಲ್ಲ. ಹೀಗಾಗಿ, ಮೇಲ್ಕಂಡ ಸುದ್ದಿ ಉತ್ತಮ ಸಂದೇಶ ಹೊಂದಿದ್ದರೂ ಅಧಿಕೃತ ಹೇಳಿಕೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.